ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ!
ನವದೆಹಲಿ, ಮಾ.1 : ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕಕ್ಕೆ ಮತ್ತೊಂದು ಕೊಡುಗೆ ನೀಡಿದ್ದಾರೆ. ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಕೋಲಾರ ರೈಲು ಬೋಗಿ ತಯಾರಿಕಾ ಘಟಕಕ್ಕೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ.
ಶುಕ್ರವಾರ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಾರ್ಷಿಕ 500 ಅತ್ಯಾಧುನಿಕ ಬೋಗಿ ತಯಾರಿಸುವ ಸಾಮರ್ಥ್ಯ ಹೊಂದಿರುವ ಈ ಘಟಕವನ್ನು 1460.92 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಕೆಲವು ದಿನಗಳಲ್ಲಿ ಇದರ ಶಂಕುಸ್ಥಾಪನೆ ಕಾರ್ಯ ಸಹ ನಡೆಯಲಿದೆ. [ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ]
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, 750 ಕೋಟಿ ರೂ. ಮೊತ್ತವನ್ನು ಕರ್ನಾಟಕ ಸರ್ಕಾರ ಭರಿಸಬೇಕಾಗಿದೆ. ಕಾರ್ಖಾನೆ ನಿರ್ಮಾಣಕ್ಕೆ ಅಗತ್ಯವಿರುವ 1118.38 ಎಕರೆ ಜಮೀನನ್ನು ಉಚಿತವಾಗಿ ದೊರಕಿಸಿಕೊಡುವ ಮತ್ತು ವಿದ್ಯುತ್, ನೀರು ಸಂಪರ್ಕ ಕಲ್ಪಿಸುವ ಜವಾಬ್ದಾರಿಯನ್ನೂ ಕರ್ನಾಟಕ ವಹಸಿಕೊಳ್ಳಬೇಕಾಗಿದೆ. ಈ ಕಾರ್ಖಾನೆಯಿಂದ ಕೋಲಾರದಲ್ಲಿ 5 ಸಾವಿರ ನೇರ ಮತ್ತು 5 ಸಾವಿರ ಪರೋಕ್ಷ ಉದ್ಯೋಗಳು ಸೃಷ್ಟಿಯಾಗಲಿವೆ. ಸಂಪುಟ ಸಭೆಯಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು? [ಬೆಂಗಳೂರು, ಮೈಸೂರಿಗೆ ಕೇಂದ್ರದ ಕೊಡುಗೆ]

ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ
ಕೋಲಾರ ರೈಲು ಬೋಗಿ ತಯಾರಿಕಾ ಘಟಕಕ್ಕೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ. ಕೋಲಾರ ಸಂಸದರೂ ಆಗಿರುವ ಕೇಂದ್ರ ಸಣ್ಣ ಕೈಗಾರಿಕಾ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗಿನಿಂದ ಈ ಪ್ರಸ್ತಾಪ ಇತ್ತು. ಆದರೆ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಖಾತೆ ಸಂಪುಟ ದರ್ಜೆ ಸಚಿವರಾದ ಬಳಿಕ ಈ ಪ್ರಸ್ತಾವನೆಗೆ ಒಪ್ಪಿಗೆ ಕೊಡಿಸಿದ್ದಾರೆ.

ಐಟಿಐಗೆ 200 ಕೋಟಿ ರೂ. ಸರಳ ಸಾಲ
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಉದ್ಯೋಗಿಗಳಿಗೆ ವೇತನ ಮತ್ತು ಇತರೆ ಭತ್ಯೆಗಳನ್ನು ನೀಡುವ ಸಲುವಾಗಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಟಿಐಗೆ 200 ಕೋಟಿ ರೂ. ಸರಳ ಸಾಲವನ್ನು ಕೇಂದ್ರ ಸರ್ಕಾರ ನೀಡಲು ಒಪ್ಪಿಗೆ ಸೂಚಿಸಿದೆ. ಇದರಿಂದ 7633 ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ನೆರವಾಗಲಿದೆ.

ಚಿಕ್ಕೋಡಿ, ಉಡುಪಿಯಲ್ಲಿ ಕೇಂದ್ರೀಯ ವಿದ್ಯಾಲಯ
54 ಹೊಸ ಕೇಂದ್ರೀಯ ವಿದ್ಯಾಲಯಗಳು ದೇಶದ ವಿವಿಧ ನಗರಗಳಲ್ಲಿ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಉಡುಪಿ ಮತ್ತು ಚಿಕ್ಕೋಡಿಯಲ್ಲೂ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಲಿದೆ. ಈ ವಿದ್ಯಾಲಯ ನಿರ್ಮಾಣದ ಶೇ.75 ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ ಮತ್ತು ಶೇ.25 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿವೆ.

ನಿವೃತ್ತಿ ವಯಸ್ಸು 58 ರಿಂದ 60ಕ್ಕೆ ಏರಿಕೆ
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಚ್ಎಂಟಿ ಅಂಗಸಂಸ್ಥೆಯಾದ ಎಚ್ಎಂಟಿ ಮಷಿನ್ ಟೂಲ್ಸ್ ನೌಕರರಿಗೆ 1997ರ ವೇತನ ಶ್ರೇಣಿ ಪರಿಷ್ಕರಣೆ ಜಾರಿಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದರ ಅನ್ವಯ ಎಚ್ಎಂಟಿ ಮಷಿನ್ ಟೂಲ್ಸ್ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಏರಿಕೆ ಮಾಡಲಾಗುತ್ತದೆ. ಶೇ.10ರಷ್ಟು ಉದ್ಯೋಗಿಗಳಿಗೆ ಇದು ವಿಸ್ತರಣೆಯಾಗಲಿದೆ. ಕಂಪನಿಗೆ ಶೇ.7ರ ಬಡ್ಡಿದರದಲ್ಲಿ 61 ಕೋಟಿ ರೂ. ಸಾಲ ನೀಡುವುದಕ್ಕೂ ಅನುಮತಿ ದೊರೆತಿದೆ.











Click it and Unblock the Notifications