3 ತಿಂಗಳ ಬಳಿಕ ಕಚೇರಿಗೆ ಮರಳಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ
ನವದೆಹಲಿ, ಜನವರಿ 9: ಮೂರು ತಿಂಗಳ ಬಳಿಕ ಮೊದಲ ಬಾರಿಗೆ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ದೆಹಲಿಯಲ್ಲಿರುವ ಸಿಬಿಐ ಕಚೇರಿಗೆ ಗೆಲುವಿನ ಖುಷಿಯೊಂದಿಗೆ ಬುಧವಾರ ಹಾಜರಾದರು.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಲೋಕ್ ವರ್ಮಾ ಅವರನ್ನು ಅಕ್ಟೋಬರ್ 23ರಂದು ಕೇಂದ್ರ ಸರ್ಕಾರ ರಜೆಯ ಮೇಲೆ ಕಳುಹಿಸಿತ್ತು. ಕೇಂದ್ರದ ನಿರ್ಧಾರದ ವಿರುದ್ಧ ಕಾನೂನು ಸಮರ ನಡೆಸಿದ್ದ ಅಲೋಕ್ ವರ್ಮಾ ಪರ ಸುಪ್ರೀಂಕೋರ್ಟ್ ತೀರ್ಪು ನೀಡಿ ಅವರನ್ನು ಮರುನಿಯೋಜನೆ ಮಾಡಿತ್ತು.
ಸಿಬಿಐನ ಮಧ್ಯಂತರ ಮುಖ್ಯಸ್ಥರಾಗಿ ನೇಮಕವಾಗಿದ್ದ ಎಂ. ನಾಗೇಶ್ವರ ರಾವ್ ಅವರು ಅಲೋಕ್ ವರ್ಮಾ ಅವರನ್ನು ಸ್ವಾಗತಿಸಿದರು.

ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ ಬಳಿಕ ಅಕ್ಟೊಬರ್ 24ರ ರಾತ್ರಿ 2 ಗಂಟೆಯಿಂದ ಸಿಬಿಐ ಪ್ರಧಾನ ಕಚೇರಿಯ 10ನೇ ಮಹಡಿಯಲ್ಲಿರುವ ಅವರ ಕಚೇರಿಗೆ ಬೀಗ ಜಡಿದು ಸೀಲ್ ಮಾಡಲಾಗಿತ್ತು.
ತಮ್ಮ ಕಚೇರಿಯಲ್ಲಿ ಮರಳಿ ಕುರ್ಚಿಯ ಮೇಲೆ ಕುಳಿತುಕೊಂಡರೂ ವರ್ಮಾ ಅವರಿಗೆ ಈ ಹಿಂದೆ ಇದ್ದ ನಿರ್ಧಾರ ಕೈಗೊಳ್ಳುವ ಅಧಿಕಾರಿಗಳು ಇಲ್ಲ. ಪ್ರಧಾನಿ, ವಿರೋಧ ಪಕ್ಷದ ನಾಯಕ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ವರ್ಮಾ ಅವರ ಅಧಿಕಾರದ ಬಗ್ಗೆ ಸಮಾಲೋಚನೆ ನಡೆಸಲಿದೆ. ಒಂದು ವಾರದ ಒಳಗೆ ಈ ಸಮಿತಿ ತನ್ನ ವರದಿ ಸಲ್ಲಿಸಲಿದೆ. ಅಲ್ಲಿಯವರೆಗೂ ವರ್ಮಾ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಂತೆ ಇಲ್ಲ.
ಆದರೆ, ವರ್ಮಾ ಅವರು ಈಗಲೂ ಎಫ್ಐಆರ್ಗಳನ್ನು ದಾಖಲು ಮಾಡಲು ಮತ್ತು ವರ್ಗಾವಣೆಯ ಕಾರ್ಯಗಳನ್ನು ಮಾಡಲು ಅವಕಾಶವಿದೆ ಎನ್ನಲಾಗಿದೆ.












Click it and Unblock the Notifications