ಸಿಬಿಐ ವಿವಾದ: ಸರ್ಕಾರದ ನಡೆ ಸಮರ್ಥಿಸಿಕೊಂಡ ಅಟಾರ್ನಿ ಜನರಲ್
ನವದೆಹಲಿ, ನವೆಂಬರ್ 29: ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 5ಕ್ಕೆ ಮುಂದೂಡಿದೆ.
ಮಾಂಸ ರಫ್ತುದಾರ ಮೋಯಿನ್ ಖುರೇಷಿ ಅವರ ವಿರುದ್ಧದ ಲಂಚ ಪ್ರಕರಣದ ತನಿಖೆಯನ್ನು ಕೈಬಿಡಲು ಲಂಚ ಪಡೆದುಕೊಂಡ ಆರೋಪ ಎದುರಿಸುತ್ತಿರುವ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದು, ಅದನ್ನು ವರ್ಮಾ, ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ತಮ್ಮನ್ನು ಎರಡು ವರ್ಷಗಳ ನಿಗದಿತ ಅವಧಿಗೆ ನೇಮಿಸಲಾಗಿದ್ದು, ವರ್ಗಾಯಿಸಲು ಸಾಧ್ಯವಿಲ್ಲ ಎಂದು ಅಲೋಕ್ ವರ್ಮಾ ವಾದ ಮಂಡಿಸಿದರು.

ಅಲೋಕ್ ವರ್ಮಾ ಪರ ಹಾಜರಾದ ವಕೀಲ ಫಾಲಿ ಎಸ್ ನಾರಿಮನ್, ಕಾನೂನಿನ ಪ್ರಕಾರ ಎರಡು ವರ್ಷಗಳ ನಿಗದಿತ ಅವಧಿ ಇರುತ್ತದೆ ಮತ್ತು ಅವರನ್ನು ವರ್ಗಾವಣೆ ಮಾಡಲು ಕೂಡ ಆಗುವುದಿಲ್ಲ. ಕೇಂದ್ರ ವಿಚಕ್ಷಣಾ ದಳವು ರಜೆಯ ಮೇಲೆ ಕಳುಹಿಸುವಂತೆ ಶಿಫಾರಸು ಮಾಡಲು ಯಾವ ಆಧಾರವೂ ಇಲ್ಲ ಎಂದರು.
ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಲ್ಲಿಸಿರುವ ಅರ್ಜಿ ಪರ ಹಾಜರಾದ ವಕೀಲ ಕಪಿಲ್ ಸಿಬಲ್, ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ತೀರ್ಮಾನವನ್ನು ಪ್ರಶ್ನಿಸಿದರು.
ಸಿಬಿಐ ಮುಖ್ಯಸ್ಥರನ್ನು ನೇಮಕ ಮಾಡುವ ಅಧಿಕಾರ ಆಯ್ಕೆ ಸಮಿತಿಗೆ ಇದೆ. ಹೀಗಿರುವಾಗ ಅವರನ್ನು ತೆಗೆದು ಹಾಕುವ ಅಧಿಕಾರವೂ ಸಮಿತಿಗೆ ಮಾತ್ರವೇ ಇರುತ್ತದೆ. ಸಿಬಿಐ ನಿರ್ದೇಶಕರಿಗೆ ಈ ರೀತಿ ಆಗಿರುವಾಗ ಇದು ಸಿವಿಸಿ ಅಥವಾ ಚುನಾವಣಾ ಆಯುಕ್ತರಿಗೂ ಆಗಬಹುದು ಎಂದು ಸಿಬಲ್ ಅಭಿಪ್ರಾಯಪಟ್ಟರು.
ಇದಕ್ಕೆ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಸಿಬಿಐ ಮುಖ್ಯಸ್ಥರನ್ನು ನೇಮಕ ಮಾಡುವ ಅಧಿಕಾರ ಇರುವುದು ಸರ್ಕಾರಕ್ಕೆ ಎಂದರು.
ಆಯ್ಕೆ ಸಮಿತಿ ಮತ್ತು ನೇಮಕ ಪ್ರಾಧಿಕಾರ ಎರಡೂ ಬೇರೆ ಬೇರೆ. ಆಯ್ಕೆ ಸಮಿತಿ ನೀಡಿದ ಹೆಸರುಗಳ ಶಿಫಾರಸುಗಳನ್ನು ನೋಡಿ ಸರ್ಕಾರ ನೇಮಕಾತಿ ನಡೆಸುತ್ತದೆ ಎಂದು ವಾದಿಸಿದರು.
ಆಡಳಿತ ಮತ್ತು ಉಸ್ತುವಾರಿ ಅಧಿಕಾರ ಸರ್ಕಾರದ್ದೇ ಆಗಿದ್ದರೆ ಸಿಬಿಐ ನಿರ್ದೇಶಕರ ವಿರುದ್ಧ ಸಿವಿಸಿ ಹೇಗೆ ಆದೇಶ ನಿರ್ಣಯ ಮಾಡಿತು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪ್ರಶ್ನಿಸಿದರು.
ವರ್ಮಾ ವಿರುದ್ಧ ತೆಗೆದುಕೊಂಡಿರುವ ಕ್ರಮ ವರ್ಗಾವಣೆ ಮಾಡುವಂತಹದ್ದಲ್ಲ. ಅಲೋಕ್ ವರ್ಮಾ ಈಗಲೂ ಸಿಬಿಐ ನಿರ್ದೇಶಕರ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಅವರಿಗೆ ಸಿಗುವ ಎಲ್ಲ ಸವಲತ್ತುಗಳೂ ಸಿಗುತ್ತಿವೆ ಎಂದು ತಿಳಿಸಿದರು.
ಸಿಬಿಐನ ಇಬ್ಬರು ಪ್ರಮುಖ ಅಧಿಕಾರಿಗಳ ನಡುವೆ ಕಿತ್ತಾಟ ನಡೆಯುತ್ತಿತ್ತು. ಹೀಗಾಗಿ ಸಿಬಿಐ ಮೇಲೆ ಸಾರ್ವಜನಿಕರ ವಿಶ್ವಾಸವನ್ನು ಉಳಿಸುವ ಸಲುವಾಗಿ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಸರ್ಕಾರದ ಹಸ್ತಕ್ಷೇಪವು ಸಾರ್ವಜನಿಕ ಹಿತಾಸಕ್ತಿ ಹೊಂದಿದೆ ಎಂದು ಅವರು ವಿವರಿಸಿದರು.












Click it and Unblock the Notifications