ತಪ್ಪು ಮಾಡಿದ್ದು ಬಿಜೆಪಿ-ಆಪ್, ಕ್ಷಮೆ ಕೇಳಿದ್ದು ಪ್ರಿಯಾಂಕಾ ಗಾಂಧಿ
ನವದೆಹಲಿ, ಫೆಬ್ರವರಿ.05: ಸಹೋದರ ಮತ್ತು ಸಹೋದರಿಯರೇ ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ. ಇದು ನವದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡದಲ್ಲಿ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಬ್ಬರಿಸಿದ ವಿಭಿನ್ನ ಪರಿ.
ದೆಹಲಿ ವಿಧಾನಸಭಾ ಚುನಾವಣೆ 2020ರ ಮತದಾನಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿವೆ. ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮತ್ತು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದರು.
ದೆಹಲಿ ಚುನಾವಣೆ: ಸದ್ಯಕ್ಕೆ ಕೇಜ್ರಿವಾಲ್ ಮೇಲುಗೈ, ಆದರೆ ಅಂಡರ್ ಕರೆಂಟ್!
ಹೌಜ್ ಕ್ವಾಜಿ ಎಂಬಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಆಪ್ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಗುಡುಗಿದರು. ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಒಂದೇ ಒಂದು ಹೊಸ ರಸ್ತೆಗಳ ನಿರ್ಮಾಣ ಮಾಡಿಲ್ಲ ಎಂದು ಹರಿಹಾಯ್ದರು.
ತಡವಾಗಿದ್ದಕ್ಕೆ ಕ್ಷಮಿಸಿ ಎಂದ ಪ್ರಿಯಾಂಕಾ ಗಾಂಧಿ:
ಕಾಂಗ್ರೆಸ್ ಸಾರ್ವಜನಿಕ ಸಮಾರಂಭಕ್ಕೆ ತಡವಾಗಿ ಆಗಮಿಸಿದ ಪ್ರಿಯಾಂಕಾ ಗಾಂಧಿ ಜನರಲ್ಲಿ ಕ್ಷಮೆ ಕೋರಿದರು. ಇಲ್ಲಿಗೆ ಬರುವ ಮೊದಲು ನಾನು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೆನು. ಬಳಿಕ ಶೀಲಾ ದೀಕ್ಷಿತ್ ಮೆಟ್ರೋ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಈ ಸಮಾವೇಶಕ್ಕೆ 10 ನಿಮಿಷಗಳಲ್ಲೇ ಆಗಮಿಸಿದ್ದೇನೆ ಎಂದರು. ಇದೇ ವೇಳೆ ಆಪ್ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ಗುಡುಗಿದರು. ಕಳೆದ ಐದು ವರ್ಷಗಳಲ್ಲಿ ಎರಡು ಸರ್ಕಾರಗಳು ದೆಹಲಿಯಲ್ಲಿ ಒಂದೇ ಒಂದು ಹೊಸ ರಸ್ತೆ ಕಾಮಗಾರಿಯನ್ನು ನಡೆಸಿಲ್ಲ ಎಂದು ಮಾತಿನಲ್ಲೇ ತಿವಿದರು.