ಸಂಸತ್ ಭದ್ರತಾ ಲೋಪ ವಿಡಿಯೋ: ಸಂಸದ ಮಾನ್ ಕ್ಷಮೆ
ನವದೆಹಲಿ, ಜುಲೈ 22: ಸಂಸತ್ತಿನಲ್ಲಿ ಭದ್ರತಾ ಲೋಪ ಎಂದು ತೋರಿಸಲು ವಿಡಿಯೋ ಚಿತ್ರೀಕರಿಸಿ ವಿವಾದಕ್ಕೆ ಗುರಿಯಾಗಿದ್ದ ಆಮ್ ಆದ್ಮಿ ಪಕ್ಷದ ಸಂಸದ ಭಗವಂತ ಮಾನ್ ಅವರು ಶುಕ್ರವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ. ಅದರೆ, ಕ್ಷಮೆಯಿಂದ ತೃಪ್ತರಾಗದ ಸ್ಪೀಕರ್ ಸುಮಿತ್ರಾ ಮಹಾಜನ್, ಈ ಬಗ್ಗೆ ಪರಿಶೀಲಿಸಲಾಗುವುದು ಎಂದಿದ್ದಾರೆ.
2001ರಲ್ಲಿ ಉಗ್ರರ ದಾಳಿಗೆ ಸಂಸತ್ ಭವನದಲ್ಲಿ ತುತ್ತಾಗಿತ್ತು. ಈ ದುರ್ಘಟನೆಯಲ್ಲಿ 13ಜನ ಸಾವನ್ನಪ್ಪಿದ್ದರು. ಈಗ ಭದ್ರತಾ ತಪಾಸಣಾ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕುರಿತು ಮಾನ್ ಅವರು ವಿಡಿಯೋ ಶೂಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿ ಚರ್ಚೆ ಆರಂಭಿಸಿದ್ದರು. ಈ ಬಗ್ಗೆ ಶುಕ್ರವಾರ ಸಂಸತ್ ನ ಉಭಯ ಸದನಗಳಾಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು.

ಸ್ಪೀಕರ್ ಸುಮಿತ್ರಾ ಮಹಾಜನ್ ಮುಂದೆ ಮಾನ್ ಅವರು ಕ್ಷಮೆಯಾಚಿಸಿ, ಸಂಸತ್ತಿನ ಭದ್ರತೆಯನ್ನು ಅಪಾಯಕ್ಕೆ ತಳ್ಳುವ ಉದ್ದೇಶ ನನಗೆ ಇರಲಿಲ್ಲ ಎಂದಿದ್ದಾರೆ. ಆದರೆ, ಎಎಪಿ ಸಂಸದ ಭಗವಂತ ಮಾನ್ ವಿರುದ್ಧ ಸಂಸತ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ವಿಷಯ ಗಂಭೀರವಾಗಿದ್ದು, ಮಾನ್ ಅವರ ಕ್ಷಮಾಯಾಚನೆಯಿಂದ ಇತ್ಯರ್ಥವಾಗುವಂಥದ್ದಲ್ಲ. ಸಂಸತ್ತಿನ ಎಲ್ಲಾ ಸದಸ್ಯರು ಸಿಟ್ಟಿನಲ್ಲಿದ್ದಾರೆ. ಇದು ಸಂಸತ್ತಿನ ಭದ್ರತೆಗೆ ಸಂಬಂಧಪಟ್ಟ ವಿಷಯ. ಸೂಕ್ತ ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಈ ಬಗ್ಗೆ ಎಲ್ಲಾ ಪಕ್ಷಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ. (ಪಿಟಿಐ)












Click it and Unblock the Notifications