"ಬಾಂಗ್ಲಾ ಜೊತೆ ಸಂಬಂಧ ಗಟ್ಟಿಗೊಳಿಸುವುದೇ ಪ್ರಥಮ ಆದ್ಯತೆ"
ನವದೆಹಲಿ, ಡಿಸೆಂಬರ್ 17: "ಬಾಂಗ್ಲಾದೇಶ ಭಾರತದ ಮಿತ್ರರಾಷ್ಟ್ರಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಬಾಂಗ್ಲಾ-ಭಾರತದ ನಡುವಿನ ಸಂಬಂಧವನ್ನು ಬಲಪಡಿಸಲು ಆದ್ಯತೆ ನೀಡಲಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುರುವಾರ ಆರಂಭವಾದ ಭಾರತ-ಬಾಂಗ್ಲಾದೇಶ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, "ನೆರೆಹೊರೆಯ ಮಿತ್ರರಾಷ್ಟ್ರಗಳಲ್ಲಿ ಭಾರತ ಬಾಂಗ್ಲಾದೇಶಕ್ಕೆ ಪ್ರಥಮ ಸ್ಥಾನ ನೀಡಿದೆ. ಕೊರೊನಾ ಸೋಂಕಿನ ವಿಷಯದಲ್ಲೂ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಹಕಾರ ಉತ್ತಮವಾಗಿ ಮುಂದುವರೆದಿದೆ" ಎಂದರು.
ಗುಜರಾತಿನಲ್ಲಿ ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಇದಕ್ಕೆ ಪ್ರತಿಕ್ರಿಯಿಸಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು, "ಭಾರತ ನಮ್ಮ ನಿಜವಾದ ಸ್ನೇಹಿತ" ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭ ಏಳು ಒಪ್ಪಂದಗಳಿಗೆ ಭಾರತ ಮತ್ತು ಬಾಂಗ್ಲಾದೇಶ ಸಹಿ ಹಾಕಿತು. 1965ರಲ್ಲಿ ಸ್ಥಗಿತಗೊಂಡಿದ್ದ ಚಿಲಿಹತಿ-ಹಲ್ದಿಬಾರಿ ರೈಲು ಸಂಪರ್ಕ ಪುನಶ್ಚೇತನ, ಹೈಡ್ರೋಕಾರ್ಬನ್, ಕೃಷಿ ಮತ್ತು ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಐಟಿ ವಲಯವನ್ನು ಆದ್ಯತೆಯಾಗಿಟ್ಟುಕೊಂಡು ಭಾರತ-ಬಾಂಗ್ಲಾ ಸಿಇಒಗಳ ವೇದಿಕೆ ರಚನೆಗೂ ಒಪ್ಪಂದ ಮಾಡಿಕೊಳ್ಳಲಾಯಿತು.
ಮೋದಿ ಮತ್ತು ಹಸೀನಾ ಅವರು ಬಾಂಗ್ಲಾ ದೇಶದ ಸಂಸ್ಥಾಪಕ ಮುಜಿಬುರ್ ರೆಹಮಾನ್ ಮತ್ತು ಭಾರತ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜೀವನ, ಪರಂಪರೆ ಸಾರುವ ಡಿಜಿಟಲ್ ಪ್ರದಶರ್ನವನ್ನು ಉದ್ಘಾಟಿಸಿದರು.