ಡೆಲ್ಲಿ ಗೆಲ್ಲಲು 'ಚುನಾವಣಾ ಚಾಣಕ್ಯ'ನ ಮೊರೆ ಹೋದ ಕೇಜ್ರಿವಾಲ್
ನವದೆಹಲಿ, ಡಿಸೆಂಬರ್ 14: ಕೆಲವೇ ತಿಂಗಳಲ್ಲಿ ನವದೆಹಲಿ ವಿಧಾನಸಭೆ ಚುನಾವಣೆಯಿದ್ದು, ಆಡಳಿತ ಪಕ್ಷ ಎಎಪಿ ಗೆ ಪ್ರತಿಷ್ಠೆಯ ಚುನಾವಣೆ ಇದಾಗಿದೆ.
ಎಎಪಿ ನಾಯಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದು, ಖ್ಯಾತ ಚುನಾವಣಾ ಯೋಜನೆಗಾರ ಪ್ರಶಾಂತ್ ಕಿಶೋರ್ ನೆರವು ಪಡೆಯಲಿದ್ದಾರೆ.
ಪ್ರಶಾಂತ್ ಕಿಶೋರ್ 'ಚುನಾವಣಾ ಚತುರ' ಎಂದೇ ಖ್ಯಾತರಾಗಿದ್ದು, ಈ ಹಿಂದೆ ಅವರು ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಪರವಾಗಿಯೂ ಕೆಲಸ ಮಾಡಿದ್ದಾರೆ. ಇದೀಗ ಮೊದಲ ಬಾರಿಗೆ ಎಎಪಿಯೊಂದಿಗೆ ಕೆಲಸ ಮಾಡಲಿದ್ದಾರೆ.

ಈ ಕುರಿತು ಅಧಿಕೃತ ಘೋಷಣೆಯನ್ನು ಇಂದು ಮಾಡಿರುವ ಕೇಜ್ರಿವಾಲ್, ಪ್ರಶಾಂತ್ ಕಿಶೋರ್ ಅವರ ಚುನಾವಣಾ ರಣತಂತ್ರ ಸಂಸ್ಥೆ ಐ-ಪ್ಯಾಕ್ ನಮ್ಮೊಂದಿಗೆ ಇರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
2014 ರಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಮತ್ತು ತಂತ್ರಗಳನ್ನು ಪ್ರಶಾಂತ್ ಕಿಶೋರ್ ಯೋಜಿಸಿದ್ದರು. ಅದಾದ ನಂತರ ಬಿಹಾರದಲ್ಲಿ ನಿತೀಶ್ ಕುಮಾರ್-ಲಾಲೂಪ್ರಸಾದ್ ಯಾದವ್ ಅವರ ಚುನಾವಣೆ ಕಾರ್ಯತಂತ್ರದ ಹೊಣೆಯನ್ನೂ ಹೊತ್ತಿದ್ದರು. 2017 ರಲ್ಲಿ ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗೆಲುವಿನಲ್ಲೂ ಪ್ರಶಾಂತ್ ಕಿಶೋರ್ ಪಾತ್ರವಿತ್ತು.
ಸಕ್ರಿಯ ರಾಜಕಾರಣದಲ್ಲೂ ತೊಡಗಿರುವ ಪ್ರಶಾಂತ್ ಕಿಶೋರ್ ಪ್ರಸ್ತುತ ಬಿಹಾರ ಜೆಡಿಯು ಪಕ್ಷದ ನಾಯಕರಾಗಿದ್ದಾರೆ. ಅವರ ಕಾರ್ಯಕರ್ತರದ ಆಧಾರದಲ್ಲಿ ಚುನಾವಣೆ ಎದುರಿಸಲಿರುವ ಎಎಪಿ ಬಿಜೆಪಿಯನ್ನು ದೆಹಲಿಯಿಂದ ಹೊರಗಿಡುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.
2015 ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯು ಐತಿಹಾಸಿಕ ವಿಜಯ ಸಾಧಿಸಿತ್ತು. 70 ವಿಧಾನಸಭಾ ಕ್ಷೇತ್ರಗಳಲ್ಲಿ 67 ಎಎಪಿ ಪಾಲಾಗಿದ್ದವು. ಆಗಿನ ಆಡಳಿತ ಪಕ್ಷದ ಸಿಎಂ ಸೇರಿದಂತೆ ಎಲ್ಲ ಸಚಿವರೂ ಸೋತಿದ್ದರು. ಬಿಜೆಪಿ ಕೇವಲ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.












Click it and Unblock the Notifications