ಸಿಎಎ ವಿರೋಧಿ ಪ್ರಕರಣ: ಪ್ರತಿಭಟನೆಗೆ ಸಾರ್ವತ್ರಿಕ ನೀತಿ ರೂಪಿಸಲಾಗದು ಎಂದ ಸುಪ್ರೀಂಕೋರ್ಟ್
ನವದೆಹಲಿ, ಸೆಪ್ಟೆಂಬರ್ 21: ಪ್ರತಿಭಟನೆಯ ಹಕ್ಕು ಮತ್ತು ರಸ್ತೆಗಳನ್ನು ತಡೆಯುವ ಘಟನೆಗಳ ನಡುವೆ ಸಮತೋಲನ ಸಾಧಿಸಬೇಕಿದ್ದು, ಪ್ರತಿಭಟನೆಯ ಪ್ರಕರಣಗಳಿಂದ ಪ್ರಕರಣಗಳಕ್ಕೆ ಸನ್ನಿವೇಶದಲ್ಲಿ ವ್ಯತ್ಯಾಸ ಇರುವುದರಿಂದ ಸಾರ್ವತ್ರಿಕ ನೀತಿ ರೂಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ದೆಹಲಿಯ ಶಹೀನ್ ಬಾಗ್ನಲ್ಲಿ ಕಳೆದ ಡಿಸೆಂಬರ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ರಸ್ತೆ ತಡೆ ನಡೆಸಿದ ಘಟನೆಗಳ ವಿರುದ್ಧ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೊರೊನಾ ವೈರಸ್ ಸೋಂಕು ಹರಡಿದ್ದರಿಂದ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿವಿದ ನಿಯಮಗಳು ಜಾರಿಯಾಗಿದ್ದರಿಂದ ಪ್ರತಿಭಟನೆ ಅಂತ್ಯವಾಗಿತ್ತು. 'ಆನಂತರದಲ್ಲಿ ಅಲ್ಲಿ ಕೆಲವು ವಿಭಿನ್ನ ಸಂದರ್ಭಗಳು ನಡೆದಿದ್ದವು. ಸರ್ವಶಕ್ತ ದೇವರು ಮಧ್ಯಪ್ರವೇಶಿಸಿದ್ದ' ಎಂದು ನ್ಯಾಯಮೂರ್ತಿಗಳಾದ ಎಸ್ಕೆ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

'ಪ್ರತಿಭಟನೆಯ ಹಕ್ಕು ಮತ್ತು ರಸ್ತೆಗಳನ್ನು ತಡೆಯುವುದರ ನಡುವೆ ನಾವು ಸಮತೋಲನ ಮಾಡಬೇಕಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸಬೇಕು. ಒಂದು ಪ್ರಕರಣದಿಂದ ಇನ್ನೊಂದು ಪ್ರಕರಣಕ್ಕೆ ಸನ್ನಿವೇಶಗಳು ವಿಭಿನ್ನವಾಗಿರುತ್ತವೆ. ಹೀಗಾಗಿ ಪ್ರತಿಭಟನೆಗಳ ವಿಚಾರದಲ್ಲಿ ನಾವು ಸಾರ್ವತ್ರಿಕ ನೀತಿ ಹೊಂದಲು ಸಾಧ್ಯವಿಲ್ಲ' ಎಂದು ತಿಳಿಸಿದೆ.
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಸತ್ ಮತ್ತು ರಸ್ತೆಗಳಲ್ಲಿ ಪ್ರತಿಭಟನೆಗಳು ನಡೆಯಬಹುದು. ಆದರೆ ರಸ್ತೆಯಲ್ಲಿ ಅದು ಶಾಂತಯುತವಾಗಿರಬೇಕು ಎಂದಿದೆ. ಅರ್ಜಿಗಳ ಕುರಿತಾದ ತೀರ್ಪನ್ನು ಕಾಯ್ದಿರಿಸಿದ ಪೀಠ, ನಾವು ಪ್ರಾಯೋಗಿಕವಾಗಿ ಸಂಧಾನಕಾರರನ್ನು ನೇಮಿಸಿದ್ದೆವು. ಅವರು ಕೆಲವು ಸಲಹೆಗಳನ್ನು ನೀಡಿದ್ದು, ಅವುಗಳ ಬಗ್ಗೆ ಗಮನಹರಿಸಬಹುದು ಎಂದು ತಿಳಿಸಿತು.












Click it and Unblock the Notifications