ರೈತರ ಹೋರಾಟ: ದೆಹಲಿಯಲ್ಲಿ ಸಂಚಾರದ ಕುರಿತು ಪೊಲೀಸರ ಮಾರ್ಗಸೂಚಿ
ನವದೆಹಲಿ, ಡಿಸೆಂಬರ್.04: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ರೈತರ ಹೋರಾಟ 9ನೇ ದಿನವೂ ಮುಂದುವರಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಹಲವು ಭಾಗಗಳ ರಸ್ತೆ ಸಂಚಾರ ಬಂದ್ ಆಗಿದ್ದು, ಈ ಕುರಿತು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹರಿಯಾಣ, ಉತ್ತರ ಪ್ರದೇಶ ಮತ್ತು ದೆಹಲಿಗೆ ಸಂಪರ್ಕಿಸುವ ಗಡಿ ಭಾಗದ ರಸ್ತೆಗಳಲ್ಲಿ ರೈತರ ಜಮಾಯಿಸಿದ್ದು, ಈ ಮಾರ್ಗದಲ್ಲಿ ವಾಹನ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದರ ನಡುವೆ ದೆಹಲಿಯ ಹಲವು ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ.
Fact Check: ರೈತರ ಪ್ರತಿಭಟನೆಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಮಹಿಳೆ
ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರು ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿ ಪ್ರದೇಶದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ದೆಹಲಿ ಸಂಚಾರ ವ್ಯವಸ್ಥೆ ಕುರಿತು ಮಾಹಿತಿ:
ಘಜಿಯಾಬಾದ್ನಿಂದ ದೆಹಲಿಗೆ ಆಗಮಿಸುವ ಪ್ರಯಾಣಿಕರು ಘಾಜಿಪುರ ಗಡಿಯ ರಾಷ್ಟ್ರೀಯ ಹೆದ್ದಾರಿ 24ರ ಮಾರ್ಗವಾಗಿ ಅಪ್ಸರಾ, ಭೋಪ್ರಾ ಮಾರ್ಗವನ್ನು ಬಳಸಿಕೊಂಡು ಪ್ರಯಾಣಿಸುವಂತೆ ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ. ಟಿಕ್ರಿ, ಝರೋಡಾ ಗಡಿಯಲ್ಲಿ ಎಲ್ಲ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬದುಸರೈ ಗಡಿ ಭಾಗದ ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಂತ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
ಝತಿಕಾರಾ ಗಡಿ ರಸ್ತೆಗಳಲ್ಲಿ ಕೇವಲ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಸಿಂಘು, ಲಂಪುರ್, ಔಚಂಡಿ, ಸಫಿಯಾಬಾದ್, ಪಿಯಾವೋ ಮನಿಯಾರಿ ಮತ್ತು ಸಬೋಲಿ ಗಡಿಗಳನ್ನು ಬಂದ್ ಮಾಡಲಾಗಿದ್ದು, ರಾಷ್ಟ್ರ ಹೆದ್ದಾರಿ 44ರಲ್ಲಿ ದ್ವಿಮುಖ ಸಂಚಾರವನ್ನು ಬಂದ್ ಮಾಡಲಾಗಿದೆ.