ಚೀನಾ ಜೊತೆಗಿನ ಸಂಘರ್ಷದ ನಡುವೆ ಲೇಹ್ ಗೆ ಸೇನಾ ಮುಖ್ಯಸ್ಥರ ಭೇಟಿ
ನವದೆಹಲಿ, ಸಪ್ಟೆಂಬರ್.03: ಭಾರತ-ಚೀನಾ ನಡುವಿನ ಸಂಘರ್ಷದಿಂದಾಗಿ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇದರ ನಡುವೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮೇಜರ್ ಮುಕುಂದ್ ನರವಾನೆ ಲೇಹ್ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ನಿಗದಿತ ಗಡಿ ರೇಖೆಯಲ್ಲಿ ಉಲ್ಬಣಿಸಿರುವ ಪರಿಸ್ಥಿತಿಯ ಬಗ್ಗೆ ಹಿರಿಯ ಫೀಲ್ಡ್ ಕಮಾಂಡರ್ಸ್, ಸೇನಾ ಮುಖ್ಯಸ್ಥ ಮೇಜರ್ ಮುಕುಂದ್ ನರವಾನೆ ಅವರಿಗೆ ಮಾಹಿತಿ ನೀಡಲಿದ್ದಾರೆ. ಮೂಲಗಳ ಪ್ರಕಾರ, ಭಾರತೀಯ ಸೇನಾ ಮುಖ್ಯಸ್ಥರ ಎರಡು ದಿನಗಳ ಭೇಟಿ ವೇಳೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಕಳೆದ ಮೂರು ತಿಂಗಳಿನಿಂದ ಚೀನಾ ಸೇನೆಯು ಗಡಿಯಲ್ಲಿ ತೆಗೆದಿರುವ ತಗಾದೆ, ನಿಗದಿತ ಗಡಿ ರೇಖೆಯಲ್ಲಿನ ಪರಿಸ್ಥಿತಿ, ಚೀನಾಗೆ ತಿರುಗೇಟು ನೀಡಲು ಅಗತ್ಯವಿರುವ ಕಾರ್ಯತಂತ್ರಗಳ ಬಗ್ಗೆ ಚೀಫ್ ಕಮಾಂಡರ್ಸ್ ಜೊತೆ ಸೇನಾ ಮುಖ್ಯಸ್ಥರು ಮಾತುಕತೆ ನಡೆಸಲಿದ್ದಾರೆ.

ಆಗಸ್ಟ್.29ರ ಮಧ್ಯರಾತ್ರಿಯಿಂದ ಪರಿಸ್ಥಿತಿ ಉದ್ವಿಗ್ನ:
ಕಳೆದ ಆಗಸ್ಟ್.29 ಮತ್ತು 30ರ ಮಧ್ಯರಾತ್ರಿ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ಚೀನಾ ಸೇನಾಪಡೆಗಳು ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ನಡೆಸಿತು. ದಕ್ಷಿಣ ಪ್ರದೇಶದಲ್ಲಿ ಚೀನಾದ 450 ಸೇನಾ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಚೀನಾದ ನಡೆಯಿಂದ ಗಡಿಯಲ್ಲಿ ಯಥಾಸ್ಥಿತಿಗೆ ಧಕ್ಕೆ ಉಂಟಾಗಿದೆ ಎಂದು ಭಾರತೀಯ ಸೇನಾಧಿಕಾರಿ ಆರೋಪಿಸಿದ್ದರು.
ಪ್ಯಾಂಗಾಂಗ್ ತ್ಸೋ ಸರೋವರದಲ್ಲಿ ಪ್ರಚೋದನಾತ್ಮಕ ಸೇನಾ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಸಿಕ್ಕಿತ್ತು. ಇದರ ಬೆನ್ನಲ್ಲೇ ಗಡಿ ಪ್ರದೇಶದ ಇತರೆ ಕಡೆಗಳಲ್ಲಿ ಚೀನಾ ಸೇನೆಯು ಅತಿಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುವ ಸಾಧ್ಯತೆಗಳಿವೆ ಎಂದು ಭಾರತೀಯ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಉಭಯ ಸೇನಾಪಡೆಗಳ ನಡುವೆ ಚಕಮಕಿ ಏರ್ಪಟ್ಟಿದ್ದು, ಇದೀಗ ಪರಿಸ್ಥಿತಿ ಕೊಂಚ ತಿಳಿಗೊಂಡಿದೆ. ಇದರ ನಡುವೆಯೂ ಭಾರತ ಮತ್ತು ಚೀನಾ ಸೇನಾ ಪಡೆಗಳು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಸೇನಾ ಮೂಲಗಳು ಯಾವುದೇ ಚಕಮಕಿ ನಡೆದಿಲ್ಲ ಎಂದು ಹೇಳುತ್ತಿವೆ.












Click it and Unblock the Notifications