ಎಎಪಿ ಶಾಸಕನ ಎರಡು ವರ್ಷ ಜೈಲು ಶಿಕ್ಷೆ ಎತ್ತಿಹಿಡಿದ ನ್ಯಾಯಾಲಯ
ನವದೆಹಲಿ, ಮಾರ್ಚ್ 23: ಏಮ್ಸ್ನಲ್ಲಿ ದಾಂದಲೆ ನಡೆಸಿದ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಎಎಪಿ ಶಾಸಕ ಸೋಮನಾಥ್ ಭಾರ್ತಿ ಅವರ ಶಿಕ್ಷೆಯನ್ನು ದೆಹಲಿಯ ಸೆಷನ್ಸ್ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ನ್ಯಾಯಾಂಗ ಬಂಧನಕ್ಕೆ ಪಡೆದುಕೊಳ್ಳಲಾಗಿದೆ.
2016ರ ಸೆಪ್ಟೆಂಬರ್ನಲ್ಲಿ ಗುಂಪು ಕಟ್ಟಿಕೊಂಡು ಬಂದು ಏಮ್ಸ್ನ ಬೇಲಿಯನ್ನು ಕಿತ್ತು ಹಾಕಿ, ಆಸ್ಪತ್ರೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಸೋಮನಾಥ್ ಭಾರ್ತಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎರಡು ವರ್ಷ ಸೆರೆವಾಸ ವಿಧಿಸಿತ್ತು. ಆದರೆ ತಮ್ಮ ವಿರುದ್ಧದ ಪ್ರಕರಣ ಹಾಗೂ ಜೈಲು ಶಿಕ್ಷೆಯನ್ನು ಕೈಬಿಡುವಂತೆ ಹೈಕೋರ್ಟ್ಗೆ ಮನವಿ ಸಲ್ಲಿಸಲು ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.
2019ರ ಸೆಪ್ಟೆಂಬರ್ 9ರಂದು ಸೋಮನಾಥ್ ಭಾರ್ತಿ, ಇತರೆ ಆರೋಪಿಗಳಾದ ಜಗತ್ ಸೈನಿ, ದಿಲೀಪ್ ಝಾ, ಸಂದೀಪ್ ಸೋನು ಮತ್ತು ರಾಕೇಶ್ ಪಾಂಡೆ ಹಾಗೂ ಅಪರಿಚಿತ 300ಕ್ಕೂ ಅಧಿಕ ಸಹಚರರ ವಿರುದ್ಧ, ವೈದ್ಯಕೀಯ ಸಂಸ್ಥೆ ಏಮ್ಸ್ನ ಸುತ್ತಲೂ ಇದ್ದ ಬೇಲಿಯನ್ನು ಜೆಸಿಬಿ ಮೂಲಕ ಕಿತ್ತುಹಾಕಿದ್ದರು ಎಂದು ಆರೋಪಿಸಲಾಗಿದೆ.

ಸೋಮನಾಥ್ ಭಾರ್ತಿ ಅವರಿಗೆ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ಒಂದು ಲಕ್ಷ ರೂ ದಂಡವನ್ನು ಕೂಡ ವಿಧಿಸಿದ್ದರು. ಐಪಿಸಿ ಸೆಕ್ಷನ್ 323, 353 ಮತ್ತು 147ರ ಅಡಿ ಸೋಮನಾಥ್ ಭಾರ್ತಿ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಜತೆಗೆ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸೆಕ್ಷನ್ 3ಅಡಿ ಕೂಡ ಅವರನ್ನು ತಪ್ಪಿತಸ್ಥ ಎಂದು ತೀರ್ಪಿನಲ್ಲಿ ಹೇಳಲಾಗಿತ್ತು.












Click it and Unblock the Notifications