ಅಗ್ನಿಪಥ್; 4 ಲಕ್ಷ ಟ್ರ್ಯಾಕ್ಟರ್ ದೆಹಲಿಗೆ, ಹೈ ಅಲರ್ಟ್
ನವದೆಹಲಿ ಜೂ. 20: ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧದ ಜ್ವಾಲೆ ದೇಶಾದ್ಯಂತ ಭುಗಿಲೆದ್ದಿದ್ದು, ಪ್ರತಿಭಟನೆ ಭಾಗವಾಗಿ ವಿವಿಧ ಸಂಘಟನೆಗಳು ಸೋಮವಾರ ಭಾರತ್ ಬಂದ್ ಕರೆ ನೀಡಿವೆ. ಬಂದ್ ಬೆಂಬಲಿಸಿ ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರತಿಭಟನಾಕಾರರ ಸುಮಾರು 4 ಲಕ್ಷ ಟ್ರ್ಯಾಕ್ಟರ್ಗಳು ಆಮಿಸುವ ನಿರೀಕ್ಷೆ ಹಿನ್ನೆಲೆ ನಗರಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಕೇಂದ್ರ ಸರ್ಕಾರ ಜೂ.14ರಂದು ಘೋಷಣೆ ಮಾಡಿದ ಅಗ್ನಿಪಥ್ ನೇಮಕಾತಿ ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿವೆ. ಸಾಲದೆಂಬಂತೆ ಭಾರತ್ ಬಂದ್ಗೆ ಕರೆ ಕೊಡಲಾಗಿದೆ.
ಅಗ್ನಿಪಥ್; ಸರ್ಕಾರಿ ಇಲಾಖೆಗಳಲ್ಲಿ ಮಾಜಿ ಸೈನಿಕರ ನೇಮಕಾತಿ ಕೊರತೆ
ದೆಹಲಿ ಪೊಲೀಸರು ಹಿಂಸಾಚಾರಕ್ಕೆ ಆಸ್ಪದ ಕೊಡದಂತೆ ಹೈ ಅಲರ್ಟ್ ಘೋಷಿಸಿದೆ. ಟ್ರಾಕ್ಟರ್ಗಳು ಒಳಬಾರದಂತೆ ತಡೆಯಲು ದೆಹಲಿಯ ಅನೇಕ ಕಡೆಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಕೇಶ್ ಟಿಕಾಯತ್ ಎಚ್ಚರಿಕೆ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು, ವಿವಿಧ ರೈತರ ಪರ ಸಂಘಟನೆಗಳ ಸದಸ್ಯರು ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸಿದ್ದರು. ಇದೀಗ ಅದೇ ಮಾದರಿಯಲ್ಲಿ ಸುಮಾರು ನಾಲ್ಕು ಲಕ್ಷ ಟ್ರ್ಯಾಕ್ಟರ್ ದೆಹಲಿ ಪ್ರವೇಶಿಸಲು ಸಿದ್ಧವಾಗಿದೆ. ಕೇಂದ್ರ ಕೂಡಲೇ ಅಗ್ನಿಪಥ್ ಯೋಜನೆ ಹಿಂಪಡೆಯಬೇಕು ಎಂದು ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ.
ಅಗ್ನಿಪಥ್ ವಿರುದ್ಧದ ಪ್ರತಿಭಟನೆಯನ್ನು ರಾಷ್ಟ್ರವ್ಯಾಪಿ ಅಂದೋಲನ ರೂಪದಲ್ಲಿ ನಡೆಸಲು ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ. ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು 90 ವರ್ಷ ವಯಸ್ಸಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಪಿಂಚಣಿ ಪಡೆಯಬಹುದು. ಆದರೆ ದೇಶ ಕಾಯುವವರಿಗೆ ನಾಲ್ಕು ವರ್ಷ ನಿಗದಿ ಹಾಗೂ ಪಿಂಚಣಿ ಸೌಲಭ್ಯ ಇಲ್ಲ ಎಂದು ಟೀಕಿಸಿದರು.
ಗಡಿ ಭಾಗದಲ್ಲಿ ಅಲರ್ಟ್; ರಾಕೇಶ್ ಟಿಕಾಯತ್ ಎಚ್ಚರಿಕೆ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಸಿಂಘು ಗಡಿ, ಘಾಜಿಪುರ್, ಬದರಾಪುರ್ ಮತ್ತು ಟಿಕ್ರಿ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ಪ್ರವೇಶಿಸದಂತೆ ನೋಡಿಕೊಳ್ಳಲಾಗುತ್ತಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಭಾರದಂತೆ ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣ ರಾಜ್ಯದ ಹಲವು ನಗರಗಳಲ್ಲಿ ಇಂಟರ್ ನೆಟ್ ಸೇವೆ, ಮೊಬೈಲ್ ಸಂದೇಶ ರವಾನಿಸದಂತೆ ನಿರ್ಬಂಧ ವಿಧಿಸಲಾಗಿದೆ. ಜತೆಗೆ ಕೆಲವೆಡೆ ನಿಷೇಧಾಜ್ಞೆ ಸಹ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟಿಕಾಯತ್ ಹೇಳಿಕೆಯಂತೆ ಲಕ್ಷಾಂತರ ಟ್ರ್ಯಾಕ್ಟರ್ ಗಳು ದೆಹಲಿ ಪ್ರವೇಶಿಸಿದರೆ ಇದು ಅಗ್ನಿಪಥ್ ವಿರುದ್ಧ ಮತ್ತೊಂದು ಬೃಹತ್ ಆಂದೋಲವಾಗುವುದರಲ್ಲಿ ಅನುಮಾನ ಇಲ್ಲ.