'ಹಾಸ್ಯ'ವಾಯಿತಾ ಕುನಾಲ್ ಕಮ್ರಾ ರೈಲ್ವೆ ಪ್ರಯಾಣದ ವಿಚಾರ?
ನವದೆಹಲಿ, ಜನವರಿ.30: ಸ್ಟ್ಯಾಂಡ್ ಅಪ್ ಕಾಮೆಡಿಯನ್ ಕುನಾಲ್ ಕಮ್ರಾಗೆ ವಿಮಾನ ಸಂಸ್ಥೆಗಳ ಬೆನ್ನಲ್ಲೇ ಭಾರತೀಯ ರೈಲ್ವೆ ಕೂಡಾ ನಿರ್ಬಂಧ ವಿಧಿಸಿದಂತೆ ಕಾಣುತ್ತಿದೆ. ಈ ಬಗ್ಗೆ ಸ್ವತಃ ಕುನಾಲ್ ಕಮ್ರಾ ಟ್ವೀಟ್ ಮಾಡಿದ್ದಾರೆ.
ಭಾರತೀಯ ರೈಲ್ವೆಯ ಅಧಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಲು ತೆರಳಿದ್ದ ವೇಳೆ ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರೈಲ್ವೆ ವೆಬ್ ಸೈಟ್ ತೆರೆದುಕೊಳ್ಳದ ಹಿನ್ನೆಲೆಯಲ್ಲಿ ಕುನಾಲ್ ಕಮ್ರಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥ ಅರ್ನರ್ ಗೋಸ್ವಾಮಿ ಜೊತೆ ವಿಮಾನದಲ್ಲಿ ಅತಿರೇಕದ ವರ್ತನೆ ತೋರಿದ ಆರೋಪದ ಹಿನ್ನೆಲೆ ಏರ್ ಇಂಡಿಯಾ, ಇಂಡಿಗೋ ಹಾಗೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗಳು ಈಗಾಗಲೇ ಸ್ಟ್ಯಾಂಡ್ ಅಪ್ ಕಾಮೆಡಿಯನ್ ಕುನಾಲ್ ಕಮ್ರಾ ಪ್ರಯಾಣಕ್ಕೆ ನಿರ್ಬಂಧ ವಿಧಿಸಿವೆ.

ಭಾರತೀಯ ರೈಲ್ವೆ ಸಚಿವಾಲಯ ಹೇಳಿದ್ದೇನು?:
ವಿಮಾನಯಾನ ಸಂಸ್ಥೆಗಳ ರೀತಿಯಲ್ಲೇ ಭಾರತೀಯ ರೈಲ್ವೆಯಲ್ಲೂ ಕೂಡಾ ಅತಿರೇಕದ ವರ್ತನೆ ತೋರುವ ಮತ್ತು ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕುನಾಲ್ ಕಮ್ರಾ ನಿರ್ಬಂಧಕ್ಕೆ ಕಾರಣವೇನು?:
ಮುಂಬೈ ಟು ಲಕ್ನೋಗೆ ತೆರಳುತ್ತಿದ್ದ 6E 5317 ಇಂಡಿಗೋ ವಿಮಾನದಲ್ಲಿ ಸ್ಟ್ಯಾಂಡ್ ಅಪ್ ಕಾಮೆಡಿಯನ್
ಕುನಾಲ್ ಕಮ್ರಾ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಸಹ ಪ್ರಯಾಣಿಕರಾಗಿದ್ದ ಖಾಸಗಿ ಸುದ್ದಿ ವಾಹಿನಿಯ ಸಂಪಾದಕರಾದ ಅರ್ನಬ್ ಗೋಸ್ವಾಮಿ ಅವರಿಗೆ ಕಿರಿಕಿರಿ ಉಂಟು ಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದೇ ಅರ್ನಬ್ ಗೋಸ್ವಾಮಿ, ಸುಮ್ಮನೆ ಪುಸ್ತಕ ಓದುತ್ತಾ ಕುಳಿತಿದ್ದರು. ನಂತರ ಘಟನೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು.












Click it and Unblock the Notifications