ದೆಹಲಿಯಲ್ಲಿ ರೈತರ ಹೋರಾಟದ ಹಾದಿಗೆ ಸೀಮೆಂಟ್ ಗೋಡೆ, ಕಬ್ಬಿಣದ ಸೆರಳು!
ನವದೆಹಲಿ, ಫೆಬ್ರವರಿ.02: ಭಾರತದ 72ನೇ ಗಣರಾಜ್ಯೋತ್ಸವದ ದಿನ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದ ನಂತರದಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ನವದೆಹಲಿ ಮೂರು ಗಡಿಗಳ ಚಿತ್ರಣ ಸಂಪೂರ್ಣ ಬದಲಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ದಿಗ್ಬಂಧನ ಹಾಕಲಾಗಿದೆ.
ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರನ್ನು ತಡೆಯುವುದಕ್ಕೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸಿಮೆಂಟ್ ರಸ್ತೆ ಮೇಲೆ ಕಬ್ಬಿಣದ ಸರಳು, ಕಾಂಕ್ರೀಟ್ ಗೋಡೆಗಳು, ಹಂತ ಹಂತವಾಗಿ ಹಾಕಿರುವ ಬ್ಯಾರಿಕೇಡ್ ವ್ಯವಸ್ಥೆ. ಹೀಗೆ ಮೂರು ಗಡಿಯಲ್ಲಿ ಪೊಲೀಸರು ತೆಗೆದುಕೊಂಡಿರುವ ಕ್ರಮಗಳು ಮತ್ತು ಅದರ ಹಿನ್ನೆಲೆಯ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಸಿಂಘು ಗಡಿಯಲ್ಲಿ ಹೇಗಿದೆ ಸ್ಥಿತಿ?
ದೆಹಲಿ ಪೊಲೀಸ್ ಸಿಬ್ಬಂದಿ ಭದ್ರತೆ ನಡುವೆ ಫೆಬ್ರವರಿ.01ರ ಸೋಮವಾರ ಸಿಮೆಂಟ್ ಗೋಡೆಗಳ ನಿರ್ಮಾಣ ಮಾಡಲಾಯಿತು. ಮುಖ್ಯ ಹೆದ್ದಾರಿಯ ಸಮೀಪದಲ್ಲೇ ಸಿಮೆಂಟ್ ತಡೆಗೋಡೆಗಳು ಮತ್ತು ಅದರ ನಡುವೆ ಕಬ್ಬಿಣದ ಸರಳುಗಳನ್ನು ಕೊಕ್ಕೆ ರೀತಿಯಲ್ಲಿ ಹಾಕಲಾಗಿದೆ. ಇನ್ನೊಂದು ಕಡೆಯಲ್ಲಿ ದೆಹಲಿ ಮತ್ತು ಹರಿಯಾಣಕ್ಕೆ ಹೊಂದಿಕೊಂಡಿರುವ ಸಿಂಘು ಗಡಿಯನ್ನು ತಾತ್ಕಾಲಿಕ ಸೀಮೆಂಟ್ ತಡೆಗೋಡೆಗಳ ಮೂಲಕ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
|
ಒಳಬೀದಿಗಳಲ್ಲಿ ಕಂದಕಗಳನ್ನು ಅಗೆಯಲಾಗಿದೆ
ಸಿಂಘು ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಹೆದ್ದಾರಿಯಲ್ಲಿ ತಾತ್ಕಾಲಿಕ ಗೋಡೆಯನ್ನು ನಿರ್ಮಿಸಲಾಗಿದೆ. ಇದರ ಹೊರತಾಗಿ ಹೆದ್ದಾರಿಯಿಂದ ಸ್ವಲ್ಪ ಒಳಭಾಗದ ಬೀದಿಗೆ ಅಡ್ಡಲಾಗಿ ಸಣ್ಣ ಕಂದಕಗಳನ್ನು ಸಹ ಅಗೆದು ಹಾಕಲಾಗಿದೆ. ಇದಲ್ಲದೇ ಎರಡೂ ಬದಿಗಳಲ್ಲಿ ಸಿಮೆಂಟ್ ಬ್ಯಾರಿಕೇಡ್ಗಳನ್ನು ಹಾಕಲಾಯಿತು.

ಘಾಜಿಪುರ್ ಗಡಿ ಪ್ರದೇಶದಲ್ಲಿ ಹೇಗಿದೆ ಪರಿಸ್ಥಿತಿ
ಉತ್ತರ ಪ್ರದೇಶ ಮತ್ತು ದೆಹಲಿಯ ಗಡಿ ಪ್ರದೇಶದಲ್ಲಿರುವ ಘಾಜಿಪುರ್ ಗಡಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪ್ರಾದೇಶಿಕ ಸಶಸ್ತ್ರ ಸಂರಚನೆ ಮತ್ತು ರಾಪಿಡ್ ಆಕ್ಟನ್ ಫೋರ್ಸ್ ಮತ್ತು ಪೊಲೀಸರು ಸೇರಿದಂತೆ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ಘಾಜಿಪುರ್ ಗಡಿಯಲ್ಲಿ ನಿಯೋಜಿಸಲಾಗಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಿಂದ ಭಾರತೀಯ ಕಿಸಾನ್ ಒಕ್ಕೂಟದ ರೈತರು ಇದೇ ಘಾಜಿಪುರ್ ಗಡಿ ಪ್ರದೇಶಕ್ಕೆ ಹರಿದು ಬರುತ್ತಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿ ಪರಿಸ್ಥಿತಿ ಮೇಲೆ ನಿಗಾ ವಹಿಸುವುದಕ್ಕಾಗಿ ಡ್ರೋನ್ ಕ್ಯಾಮರಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
|
ಗಡಿಯಲ್ಲಿ ಸಾಲು ಸಾಲು ಬ್ಯಾರಿಕೇಡ್ ವ್ಯವಸ್ಥೆ
ನವದೆಹಲಿಯ ಘಾಜಿಪುರ್ ಗಡಿ ಪ್ರದೇಶದಲ್ಲಿ ಪ್ರತಿಭಟನಾನಿರತರನ್ನು ತಡೆಯುವುದಕ್ಕಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಹೆದ್ದಾರಿಗೆ ಅಡ್ಡಲಾಗಿ ರೈತರನ್ನು ತಡೆಯುವ ನಿಟ್ಟಿನಲ್ಲಿ ಸಾಲು ಸಾಲಾಗಿ ವಿವಿಧ ಹಂತಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಒಂದರ ಮುಂದೆ ಒಂದರಂತೆ ನಾಲ್ಕೈದು ಸಾಲಿನಲ್ಲಿ ಬ್ಯಾರಿಕೇಡ್ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಾವಿರಾರು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಿರುವುದು ಕೂಡಾ ಎದ್ದು ಕಾಣುತ್ತಿದೆ.

ವಾಹನಗಳ ಸಂಚಾರಕ್ಕೆ ಟಿಕ್ರಿ ಗಡಿಯಲ್ಲಿ ಕಡಿವಾಣ
ಹರಿಯಾಣ ಮತ್ತು ದೆಹಲಿ ಟಿಕ್ರಿ ಗಡಿ ಪ್ರದೇಶದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸೀಮೆಂಟ್ ರಸ್ತೆಯ ಮೇಲೆ ರಸ್ತೆಗೆ ತೆರೆದುಕೊಂಡಿರುವಂತೆ ಕಬ್ಬಿಣದ ಸರಳುಗಳನ್ನು ಹಾಕಲಾಗಿದೆ. ಈ ರಸ್ತೆಯ ಮೇಲೆ ವಾಹನ ಸಂಚರಿಸುವುದಕ್ಕೆ ಸಾಧ್ಯವಿಲ್ಲದ ರೀತಿಯಲ್ಲಿ ರಸ್ತೆಯನ್ನು ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ.

ಕಬ್ಬಿಣದ ಲಾಠಿ ಹಿಡಿದು ನಿಂತ ದೆಹಲಿ ಪೊಲೀಸರು
ಹಿಂಸಾಚಾರ, ಉಗ್ರ ಪ್ರತಿಭಟನಾ ಸ್ಥಳಗಳಲ್ಲಿ ಉದ್ರಿಕ್ತರ ಗುಂಪಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕಾಗಿ ನವದೆಹಲಿಯಲ್ಲಿ ಆರಕ್ಷಕರಿಗೆ ಹೊಸ ಬಗೆಯ ರಕ್ಷಾ ಕವಚವನ್ನು ನೀಡಲಾಗಿದೆ. ಶಹದಾರ್ ಜಿಲ್ಲೆಯಲ್ಲಿ ಪೊಲೀಸರಿಗೆ ಕಬ್ಬಿಣದಿಂದ ಮಾಡಿರುವ ಲಾಠಿಗಳ ಜೊತೆಗೆ ತಲೆಗೆ ಧರಿಸುವುದಕ್ಕಾಗಿ ಹೆಲ್ಮೆಟ್ ಗಳನ್ನು ನೀಡಲಾಗಿದೆ. ಶಹದಾರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 11 ಪೊಲೀಸ್ ಠಾಣೆಗಳು ಬರುತ್ತದೆ. ಈ ಎಲ್ಲ ಠಾಣೆಗಳ ಸಿಬ್ಬಂದಿಗೆ ಕಬ್ಬಿಣದ ಲಾಠಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಂದು ಪೊಲೀಸ್ ಠಾಣೆಗೆ 12 ಕಬ್ಬಿಣದ ಲಾಠಿಗಳನ್ನು ನೀಡಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಮಾಹಿತಿ ನೀಡಿದ್ದಾರೆ.
ಯಾವುದೇ ಕತ್ತಿ, ಖಡ್ಗ ಅಥವಾ ತೀಕ್ಷ್ಣ-ಅಂಚಿನ ಆಯುಧಗಳಿಂದ ನಮ್ಮ ಸಿಬ್ಬಂದಿ ಮೇಲೆ ದಾಳಿ ನಡೆಸುವುದಕ್ಕೆ ಮುಂದಾದ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಯ ಆತ್ಮರಕ್ಷಣೆ ಉದ್ದೇಶದಿಂದ ಈ ಕಬ್ಬಿಣದ ಲಾಠಿಯನ್ನು ನೀಡಲಾಗುತ್ತಿದೆ. ಇದರಿಂದ ಆರಕ್ಷಕರ ಆತ್ಮರಕ್ಷಣೆಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿದ ಶಹದಾರ್ ಸ್ಟೇಷನ್ ಹೌಸ್ ಆಫೀಸರ್ ಅವರಿಗೆ ಜಿಲ್ಲೆಯ ಪೊಲೀಸರು ಅಭಿನಂದನೆ ಸಲ್ಲಿಸಿದ್ದಾರೆ.

ಮೂರು ಗಡಿ ಪ್ರದೇಶಗಳಲ್ಲಿ ಚಿತ್ರಣ ಬದಲಾಗಿದ್ದು ಏಕೆ?
ಕಳೆದ ಜನವರಿ.26ರಂದು ನಡೆದ 72ನೇ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ಜಾಥಾಗೆ ಪೊಲೀಸರು ತಡೆದಿದ್ದು, ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಯಿತು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರು ಮತ್ತು ಪೊಲೀಸರ ನಡುವೆ ತೀವ್ರ ಸಂಘರ್ಷ ನಡೆಯಿತು. ಪ್ರತಿಭಟನಾನಿರತರಲ್ಲಿ ಕೆಲವರು ಖಡ್ಗ, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿದ ಘಟನೆ ನಡೆದಿತ್ತು. ಪ್ರತಿಭಟನಾಕಾರರ ಇನ್ನೊಂದು ಗುಂಪು ದೆಹಲಿ ಕೆಂಪುಕೋಟೆಯನ್ನು ನುಗ್ಗಿ ರಾಷ್ಟ್ರ ಧ್ವಜದ ಎದುರಿಗೆ ಸಿಖ್ ಧ್ವಜವನ್ನು ಹಾರಿಸಿತು.












Click it and Unblock the Notifications