ಗದ್ದಲದಲ್ಲಿ ಪ್ರಮುಖ ಸಂದೇಶವೊಂದು ಕಳೆದು ಹೋಯಿತು: ಜೂಹಿ ಚಾವ್ಲಾ
ನವದೆಹಲಿ, ಜೂನ್ 9: ಭಾರತದಲ್ಲಿ 5ಜಿ ನೆಟ್ವರ್ಕ್ ಜಾರಿಗೆ ವಿರೋಧಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಸರ್ಕಾರ ವಜಾಗೊಳಿಸಿತ್ತು. ಅದಾದ ಕೆಲ ದಿನಗಳ ಅಂತರದಲ್ಲಿ ಜೂಹಿ ಚಾವ್ಲಾ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋದಲ್ಲಿ ತಾನು ಯಾವ ಕಾರಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದೆ ಎಂಬುದನ್ನು ವಿವರಿಸಿದ್ದಾರೆ.
"ಕಳೆದ ಕೆಲ ದಿನಗಳಿಂದ ಸಾಕಷ್ಟು ಗದ್ದಲ ಕೇಳಿಸುತ್ತಿದೆ. ಎಷ್ಟೆಂದರೆ ನನ್ನ ಧ್ವನಿಯೇ ನನಗೆ ಕೇಳಿಸದಷ್ಟು. ಈ ಗದ್ದಲದಲ್ಲಿ ಒಂದು ಪ್ರಮುಖ ಸಂದೇಶವೊಂದು ಕಳೆದುಹೋಗಿದೆ" ಎಂದು ಜೂಹಿ ಚಾವ್ಲಾ ಹೇಳಿಕೊಂಡಿದ್ದಾರೆ. ಜೊತೆಗೆ ತಾನು ಖಂಡಿತವಾಗಿಯೂ 5ಜಿ ನೆಟ್ವರ್ಕ್ ವಿರುದ್ಧವಾಗಿಲ್ಲ ಎಂದು ಹೇಳಿದ್ದಾರೆ.
"ನಾವು ಖಂಡಿತವಾಗಿಯೂ 5ಜಿ ನೆಟ್ವರ್ಕ್ನ ವಿರುದ್ಧವಾಗಿಲ್ಲ. ನಿಜ ಹೇಳಬೇಕೆಂದರೆ ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ ನಾವು ಸಂಬಂಧಪಟ್ಟವರಲ್ಲಿ ಕೇಳುತ್ತಿರುವುದು 5ಜಿ ಯಾವ ರೀತಿಯಲ್ಲಿ ಸುರಕ್ಷಿತವಾಗಿದೆ ಎಂಬುದನ್ನು ಸ್ಪಷ್ಟಪಡಿಸಿ" ಎಂದು ಜೂಹಿ ಚಾವ್ಲಾ ಈ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

"ಅಧಿಕಾರಿಗಳು 5ಜಿ ಸುರಕ್ಷಿತವಾಗಿದೆ ಎಂದು ಘೋಷಿಸಿದ್ದಾರೆ. ಆದರೆ ನಿಮ್ಮ ಅಧ್ಯಯನ ಮತ್ತು ಸಂಶೋಧನೆಗಳನ್ನು ಸಾರ್ವಜನಿಕರಿಗೆ ದೊರೆಯುವಂತೆ ಪ್ರಸ್ತುತಪಡಿಸಿ. ಆಗ ನಮಗೆ ಈ ವಿಚಾರದಲ್ಲಿರುವ ಆತಂಕ ದೂರವಾಗುತ್ತದೆ. ನಾವೆಲ್ಲಾ ನಿಶ್ಚಿಂತೆಯಿಂದ ನಿದ್ರಿಸುತ್ತೇವೆ. ನಾವು 5ಜಿ ತರಂಗಾಂತರಗಳು ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗೆ ಹಾಗೂ ಇನ್ನಷ್ಟೇ ಜನಿಸಬೇಕಿರುವ ಮಕ್ಕಳಿಗೆ, ಹಿರಿಯರಿಗೆ ಹಾಗೂ ಸಸ್ಯ ಹಾಗೂ ಪ್ರಾಣಿ ಸಂಕುಲಕ್ಕೆ ಸುರಕ್ಷಿತವಾಗಿದೆಯಾ ಎಂಬುದನ್ನಷ್ಟೇ ನಾವು ಕೇಳುತ್ತಿದ್ದೇವೆ" ಎಂದು ಜೂಹಿ ಚಾವ್ಲಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಭಾರತದಲ್ಲಿ 5ಜಿ ತರಂಗಾಂತರ ಮಾರಾಟವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ನಟಿಯ ಅರ್ಜಿಯನ್ನು ಕೋರ್ಟ್ ಕಳೆದ ವಾರ ವಜಾಗೊಳಿಸಿತ್ತು. ಮಾಧ್ಯಮದಲ್ಲಿ ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ಹಾಗೂ ಕಾನೂನು ಪ್ರಕ್ರಿಯೆಗಳನ್ನು ದುರ್ಬಳಕೆ ಮಾಡಿದ್ದಾರೆ ಎಂದು ಅರ್ಜಿದಾರರಿಗೆ 20 ಲಕ್ಷ ರೂಪಾಯಿಯ ದಂಡವನ್ನು ಕೂಡ ಕೋರ್ಟ್ ವಿಧಿಸಿತ್ತು.












Click it and Unblock the Notifications