ದೆಹಲಿ ವಾಯುಮಾಲಿನ್ಯ: ಕೇಂದ್ರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲೇನಿದೆ?
ನವದೆಹಲಿ, ಡಿಸೆಂಬರ್ 10: ದೆಹಲಿಯಲ್ಲಿ ಪದೇ ಪದೇ ವಾಯುಮಾಲಿನ್ಯ ಹೆಚ್ಚಾಗುತ್ತಲೇ ಇದೆ. ಇದನ್ನು ನಿಯಂತ್ರಣಕ್ಕೆ ತರಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದರ ಬೆನ್ನಲ್ಲೆ ದೆಹಲಿ-ಎನ್ಸಿಆರ್ನಲ್ಲಿನ ಮಾಲಿನ್ಯ ಬಿಕ್ಕಟ್ಟನ್ನು ತಡೆಯಲು ಸಕ್ರಿಯ ಕ್ರಿಯಾ ಯೋಜನೆ ಹಾಗೂ ಅಲ್ಪ ಮತ್ತು ಮಧ್ಯಮ ಅವಧಿಯ ಯೋಜನೆಗಳು ಜಾರಿಯಲ್ಲಿವೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೇಂದ್ರವು ಹೇಳಿದೆ. ಜೊತೆಗೆ ನಿಯಮಗಳನ್ನು ಉಲ್ಲಂಘಿಸಿದ ಉದ್ಯಮಗಳನ್ನು ಮುಚ್ಚುವ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದೆ.
ಫ್ಲೈಯಿಂಗ್ ಸ್ಕ್ವಾಡ್ಗಳ ಪರಿಶೀಲನೆಯ ನಂತರ ಉದ್ಯಮದ ಹೊರಸೂಸುವಿಕೆ, ಕಟ್ಟಡ ನಿರ್ಮಾಣ ಅಥವಾ ನೆಲಸಮ ಹೊರಸೂಸುವಿಕೆ, ಡೀಸೆಲ್ ಜನರೇಟರ್ ಸೆಟ್ಗಳನ್ನು ಮುಚ್ಚುವ ಸೂಚನೆಗಳನ್ನು ನೀಡಲಾಗಿದೆ ಎಂದು ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಿದ ಅಫಿಡವಿಟ್ನಲ್ಲಿ ಕೇಂದ್ರ ತಿಳಿಸಿದೆ.
ಕೇಂದ್ರದಿಂದ ರಚಿತವಾದ ಫ್ಲೈಯಿಂಗ್ ಸ್ಕ್ವಾಡ್ಗಳು ರಾಷ್ಟ್ರೀಯ ರಾಜಧಾನಿ ಪ್ರದೇಶದಾದ್ಯಂತ ಭೇಟಿ ನೀಡಿವೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಫ್ಲೈಯಿಂಗ್ ಸ್ಕ್ವಾಡ್ಗಳು 1,534 ಸೈಟ್ಗಳನ್ನು ಪರಿಶೀಲಿಸಿದ್ದು, ಒಟ್ಟು 228 ಸೈಟ್ಗಳನ್ನು ಎನ್ಫೋರ್ಸ್ಮೆಂಟ್ ಟಾಸ್ಕ್ ಫೋರ್ಸ್ ಮುಚ್ಚುವ ಸೂಚನೆಗಳನ್ನು ನೀಡಿದೆ.

ವಿಶೇಷವಾಗಿ ಚಳಿಗಾಲದ ತಿಂಗಳುಗಳಲ್ಲಿ ವಾಯು ಮಾಲಿನ್ಯಕ್ಕೆ ಪ್ರಮುಖ ಕೊಡುಗೆ ನೀಡುವ ಕೈಗಾರಿಕಾ ವಲಯದಲ್ಲಿ ಗರಿಷ್ಠ ನಿಯಮಗಳ ಉಲ್ಲಂಘನೆ ವರದಿಯಾಗಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದೆ. ಈ ದೃಷ್ಟಿಯಿಂದ ಮತ್ತು ವಾಯು ಮಾಲಿನ್ಯದ ಪರಿಣಾಮಕಾರಿ ನಿಯಂತ್ರಣಕ್ಕೆ ಆಯೋಗವು ಆದ್ಯತೆ ನೀಡುತ್ತಿದೆ. ಕೈಗಾರಿಕೆಗಳನ್ನು ಶುದ್ಧ ಇಂಧನಗಳಿಗೆ ಬದಲಾಯಿಸುವ ಕುರಿತು ಚಿಂತನೆ ನಡೆಸಿದೆ ಮತ್ತು ಎಲ್ಲಾ ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.
ಉತ್ತರ ಪ್ರದೇಶದ ಒಟ್ಟು 102 ಕೈಗಾರಿಕಾ ಘಟಕಗಳನ್ನು ಸಮಯ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮುಚ್ಚಲಾಗಿದೆ ಮತ್ತು ವಾರಾಂತ್ಯದಲ್ಲಿ ಕೆಲಸ ಮಾಡಿದ್ದಕ್ಕಾಗಿ ರಾಜ್ಯದ 90 ಘಟಕಗಳಿಗೆ ದಂಡ ವಿಧಿಸಲಾಗಿದೆ. ಎನ್ಸಿಆರ್ಗೆ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮುಚ್ಚಲಾಗಿರುವ ಉಷ್ಣ ವಿದ್ಯುತ್ ಸ್ಥಾವರಗಳು ಡಿಸೆಂಬರ್ 15 ರೊಳಗೆ ಕಾರ್ಯನಿರ್ವಹಣೆಯನ್ನು ಪುನರಾರಂಭಿಸಬೇಕು ಎಂದು ಕೇಂದ್ರ ವಾಯು ಗುಣಮಟ್ಟ ಆಯೋಗವು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

"ಸ್ಥಗಿತಗೊಳಿಸಬಹುದಾದ ಉಷ್ಣ ವಿದ್ಯುತ್ ಸ್ಥಾವರಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗದಿದ್ದರೂ, ದೆಹಲಿಯ 300 ಕಿಮೀ ವ್ಯಾಪ್ತಿಯಲ್ಲಿರುವ ಆರು ಸ್ಥಾವರಗಳನ್ನು ಮುಚ್ಚುವುದು ಸಹ 15.12.2021 ರ ನಂತರ ವಿದ್ಯುತ್ ಪೂರೈಕೆ ದೃಷ್ಟಿಯಿಂದ ಕಾರ್ಯಸಾಧ್ಯವಾಗುವುದಿಲ್ಲ" ಕೇಂದ್ರದ ಅಫಿಡವಿಟ್ ತಿಳಿಸಿದೆ.
ಇದರ ಮಧ್ಯೆ ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ನ ಹೊಸ ಅಧ್ಯಯನ ಜನರನ್ನು ಮತ್ತಷ್ಟು ಭೀತಿ ಹುಟ್ಟಿಸಿದೆ. ಈ ಹೊಸ ಅಧ್ಯಯನದ ಪ್ರಕಾರ 'ದೆಹಲಿಯಲ್ಲಿ ಹೊರಾಂಗಣ ಮಾಲಿನ್ಯ ಜನರನ್ನು ತೊಂದರೆಗೊಳಿಸುತ್ತಿದೆ. ಮಾತ್ರವಲ್ಲದೆ ದೆಹಲಿಯ ಮನೆಗಳಲ್ಲಿನ ವಾಯು ಮಾಲಿನ್ಯದ ಮಟ್ಟವು WHO ಮಾನದಂಡಗಳಿಗಿಂತ 20 ಪಟ್ಟು ಹೆಚ್ಚಾಗಿದೆ ಎಂದು ಹೇಳುತ್ತದೆ. ಮನೆಯಲ್ಲಿ ಏರ್ ಪ್ಯೂರಿಫೈಯರ್ ಇರುವವರ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ, ಆದರೆ ಅಲ್ಲಿಯೂ ಮಾಲಿನ್ಯ ಇದೆ' ಎಂದಿದೆ.
ಗುರುವಾರವೂ ದೆಹಲಿ-ಎನ್ಸಿಆರ್ನ ವಾತಾವರಣದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಇಂದಿಗೂ ಇಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 208 ಆಗಿದೆ. ಇದು ಕಳಪೆ ವಿಭಾಗದಲ್ಲಿ ಬರುತ್ತದೆ. ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆಯು (SAFAR) ಗಾಳಿಯ ಗುಣಮಟ್ಟವು ಈಗಾಗಲೇ ಸುಧಾರಿಸಿದೆ ಆದರೆ ಇನ್ನೂ ಊಹಿಸಬಹುದಾದ ಸ್ಥಿತಿಯಲ್ಲಿದೆ ಎಂದು ಹೇಳಿದೆ. ನವೆಂಬರ್ನಿಂದ ದೆಹಲಿಯು ಮಾಲಿನ್ಯದ ತೀವ್ರತೆಯನ್ನು ಎದುರಿಸುತ್ತಿದೆ. ಸತತ ಪ್ರಯತ್ನ ಮಾಡಿದರೂ ದೆಹಲಿಯ ವಾತಾವರಣ ಸುಧಾರಿಸುತ್ತಿಲ್ಲ.
ಪಶ್ಚಿಮ ದೆಹಲಿಯಲ್ಲಿ 214 (AQI)ರಷ್ಟು ಮಾಲಿನ್ಯವಿದ್ದು, ಶಾದಿಪುರದಲ್ಲಿ 252 (AQI), ಮಿಲ್ಕ್ ಸ್ಕೀಮ್ ಕಾಲೋನಿ 282 (AQI) ಅತ್ಯಂತ ಕಳಪೆಯಾಗಿದೆ. ದೆಹಲಿ ಅಶೋಕ್ ವಿಹಾರ್ 284 (AQI), ದೆಹಲಿ NSIT ದ್ವಾರಕಾ - 281 AQI, ಲೋಧಿ ರಸ್ತೆ 281 AQI ರಷ್ಟಿದೆ. ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.












Click it and Unblock the Notifications