ಕೇಜ್ರಿ ಟೀಕಿಸಿ, ಮೋದಿ ಹೊಗಳಿದ 'ಎಎಪಿ' ಕುಮಾರ
ನವದೆಹಲಿ, ಸೆ.10: ಆಮ್ ಆದ್ಮಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಶತಾಯ ಗತಾಯ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡದಂತೆ ತಡೆಗಟ್ಟಲು ಟೊಂಕಕಟ್ಟಿ ನಿಂತಿರುವ ಆಮ್ ಆದ್ಮಿ ಪಕ್ಷದ ನಾಯಕರು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಎಪಿ ಪ್ರಮುಖ ನಾಯಕ ಕುಮಾರ್ ವಿಶ್ವಾಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಲ್ಲದೆ, ಬಹಿರಂಗವಾಗಿ ಅರವಿಂದ್ ಕೇಜ್ರಿವಾಲ್ ರನ್ನು ಟೀಕಿಸಿದ್ದಾರೆ.
ಇಂಗ್ಲೀಷ್ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಕುಮಾರ್ ವಿಶ್ವಾಸ್, 'ಪ್ರಧಾನಿ ಉತ್ತಮ ಕೆಲಸ ಮಾಡಿದರೆ ಖಂಡಿತಾ ನಾನು ಅದನ್ನು ಹೊಗಳಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಿಂತ ಮೋದಿ ಉತ್ತಮ ಪ್ರಧಾನಿ, ಉತ್ತಮ ಕೆಲಸ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪ್ರವಾಹ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಕೇಂದ್ರ ಸರ್ಕಾರವನ್ನು ಹೊಗಳಿದ ವಿಶ್ವಾಸ್, ಮೋದಿ ನಮ್ಮ ಪ್ರಧಾನಿ ಎಂಬ ಹೆಮ್ಮೆಯನ್ನು ಜಮ್ಮು ಕಾಶ್ಮೀರದ ಜನ ವ್ಯಕ್ತಪಡಿಸುತ್ತಿದ್ದಾರೆ ಎಂದರು.[ಬಿಜೆಪಿಯಿಂದ ಶಾಸಕರ ಖರೀದಿಗೆ ಕೋಟಿ ಡೀಲ್]
ಎಎಪಿ ನಿಲುವಿಗೆ ಟೀಕೆ: ಚಳವಳಿ, ಕ್ರಾಂತಿ ಮಾರ್ಗ ಈಗಿನ ಸ್ಥಿತಿಗತಿಗೆ ಸೂಕ್ತವಾದ ಮಾರ್ಗವಲ್ಲ. ಎಎಪಿ ಟಿಪಿಕಲ್ ಪಾಲಿಟಿಕಲ್ ಪಾರ್ಟಿ ಥರ ವರ್ತಿಸಬೇಕು. ಅರವಿಂದ್ ಕೇಜ್ರಿವಾಲ್ ನಡೆ ಸರಿಯಿಲ್ಲ ಎಂದು ಪರೋಕ್ಷವಾಗಿ ದೆಹಲಿಯಲ್ಲಿನ ಅರಾಜಕತೆಯನ್ನು ಟೀಕಿಸಿದರು.
ಅಧಿಕಾರ ವಹಿಸಿಕೊಂಡ 49 ದಿನಗಳ ನಂತರ ಅರವಿಂದ್ ಕೇಜ್ರಿವಾಲ ಅವರು ತಮ್ಮ ಸರ್ಕಾರವನ್ನು ಪತನಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು, ಮೋದಿ ಹುಟ್ಟುಹಬ್ಬಕ್ಕೆ ಆಹ್ವಾನ ಬಂದಿದೆಯೆ? ವಿಶ್ವಾಸ್ ಮಾತು ಕೇಳಿ ಎಎಪಿ ಶಾಕ್ ನಲ್ಲಿದೆಯೆ? ಈ ಬಗ್ಗೆ ಬಿಜೆಪಿ, ಕಾಂಗ್ರೆಸ್ ಪ್ರತಿಕ್ರಿಯೆ ಏನು? ಮುಂದೆ ಓದಿ...

ಬಿಜೆಪಿಯಿಂದ ದೆಹಲಿ ಸಿಎಂ ಪಟ್ಟದ ಆಮಿಷ
ದೆಹಲಿ ಸಿಎಂ ಪಟ್ಟಕ್ಕೇರುವಂತೆ ಬಿಜೆಪಿ ಆಮಿಷ ಒಡ್ಡಿತ್ತು ಎಂದು ಕುಮಾರ್ ವಿಶ್ವಾಸ್ ಇತ್ತೀಚೆಗೆ ದೂರಿದ್ದರು. ಆದರೆ, ಒಳಗೊಳಗೆ ಬಿಜೆಪಿ ಪರ ಕುಮಾರ್ ವಿಶ್ವಾಸ್ ಮೃದು ಧೋರಣೆ ಹೊಂದಿದ್ದಾರೆ. ಇನ್ನೇನು ಡಾ. ಕುಮಾರ್ ವಿಶ್ವಾಸ್ ರನ್ನು ಬಿಜೆಪಿ ಖರೀದಿಸಿ ಬಿಡುತ್ತದೆ ಎಂಬ ಗಾಳಿಸುದ್ದಿ ಹಬ್ಬಿದ್ದ ಸಂದರ್ಭದಲ್ಲೇ ಮೋದಿ ಅವರನ್ನು ಹೊಗಳಿ ವಿಶ್ವಾಸ್ ಹೇಳಿಕೆ ನೀಡಿದ್ದಾರೆ.

ಮೋದಿ ಹುಟ್ಟುಹಬ್ಬಕ್ಕೆ ಹೋಗುತ್ತೇನೆ: ಕುಮಾರ
ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆ ಸಮಾರಂಭಕ್ಕೆ ನನಗೆ ಆಹ್ವಾನ ಬಂದರೆ ಖಂಡಿತ ಹೋಗುತ್ತೇನೆ. ಅದರಲ್ಲಿ ತಪ್ಪೇನಿದೆ. ರಾಜಕೀಯ ದ್ವೇಷಗಳು ಏನೇ ಇರಬಹುದು. ಅವರು ನಮ್ಮ ಪ್ರಧಾನಿ. ಉತ್ತಮ ಆಡಳಿತ ನೀಡಿದಾಗ ಹೊಗಳುವುದರಲ್ಲಿ ತಪ್ಪೇನಿಲ್ಲ. ತಪ್ಪು ಮಾಡಿದಾಗ ತೆಗಳುವುದು ಅನಿವಾರ್ಯ ಎಂದು ಕವಿ ಕಮ್ ರಾಜಕಾರಣಿ ಕುಮಾರ್ ವಿಶ್ವಾಸ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಎಎಪಿ ಬಿಟ್ಟರೂ ಬಿಜೆಪಿ ಸೇರುವುದಿಲ್ಲ
ನನ್ನ ಹೇಳಿಕೆಗಳು ಎಎಪಿಗೆ ಸರಿ ಕಾಣದಿದ್ದರೆ ನನ್ನನ್ನು ಪಕ್ಷದಿಂದ ಅಮಾನತು ಮಾಡಲಿ ಚಿಂತೆಯಿಲ್ಲ. ಆದರೆ, ಆಮ್ ಆದ್ಮಿ ಪಕ್ಷ ತೊರೆದರೂ ನಾನು ಬಿಜೆಪಿ ಸೇರುವುದಿಲ್ಲ ಎಂದಿದ್ದಾರೆ.
* ಅರವಿಂದ್ ಕೇಜ್ರಿವಾಲ್ ಅವರು ಜನಲೋಕಪಾಲ ಮಸೂದೆ ಮಂಡನೆಯಲ್ಲಿ ಆತುರದ ಕ್ರಮ ಅನುಸರಿಸಿದರು. ಅಧಿಕಾರ ಕಳೆದುಕೊಂಡಿಲ್ಲ ತಪ್ಪು ಎಂದು ಹೇಳಿದರು.
* ದೆಹಲಿ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದು ದೊಡ್ಡ ತಪ್ಪು. ಯಾರ ನಿರ್ಧಾರವೋ ಒಂದು ಗೊತ್ತಾಗಲಿಲ್ಲ. ಕೆಲವಾರು ವಿಷಯ ಚರ್ಚೆ ಮಾಡುವುದೇ ಇಲ್ಲ ಎಂದಿದ್ದಾರೆ.

ವಿಶ್ವಾಸ್ ಹೇಳಿಕೆಗೆ ಎಎಪಿ ಮುಖಂಡರ ಪ್ರತಿಕ್ರಿಯೆ
ವಿಶ್ವಾಸ್ ಹೇಳಿಕೆಗೆ ಎಎಪಿ ಮುಖಂಡರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ ಆಶುತೋಷ್ ಪ್ರತಿಕ್ರಿಯೆ ನೀಡಿ, ಕುಮಾರ್ ವಿಶ್ವಾಸ್ ಬಗ್ಗೆ ಗೊತ್ತಿರುವವರಿಗೆ ಇದು ಅಂಥ ಆಘಾತಕಾರಿ ಹೇಳಿಕೆ ಎಂದೆನಿಸುವುದಿಲ್ಲ ಎಂದಿದ್ದಾರೆ.
ಶಾಜಿಯಾ ಇಲ್ಮಿ: ಎಎಪಿಗೆ ತೀವ್ರ ಮುಜುಗರ ಅನುಭವಿಸುತ್ತಿದೆ. ಕೇಜ್ರಿವಾಲ್ ಅವರ ಆಪ್ತ, ಪಕ್ಷದ ಪ್ರಮುಖ ಮುಖಂಡರೇ ಈ ರೀತಿ ಮಾತನಾಡಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ ಎಂದಿದ್ದಾರೆ.
ಎಎಪಿ ತೊರೆದ ರೆಬೆಲ್ ವಿನೋದ್ ಕುಮಾರ್ ಬಿನ್ನಿ ಅವರು ಬಿಜೆಪಿ ಹೊಗಳಿದ ಕುಮಾರ್ ವಿಶ್ವಾಸ್ ರಿಗೆ ಶುಭಹಾರೈಸಿದ್ದಾರೆ.
|
ಆಶುತೋಷ್ ರಿಂದ ಟ್ವೀಟ್
ಎಎಪಿ ನಾಯಕ ಆಶುತೋಷ್ ಅವರು ಸರಣಿ ಟ್ವೀಟ್ ಮಾಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಟೈಮ್ಸ್ ನೌ ವಾಹಿನಿಯ ಅರ್ನಾಬ್ ಗೋಸ್ವಾಮಿಗೂ ಉತ್ತರ ನೀಡಿದ್ದಾರೆ

ಕಾಂಗ್ರೆಸ್ ನಾಯಕರಿಂದ ಲೇವಡಿ
ಎಎಪಿ ಯಾಕೋ ಬಿಜೆಪಿಯ ಇನ್ನೊಂದು ಭಾಗದಂತೆ ಕಾಣಿಸುತ್ತಿದೆ. ವಿಶ್ವಾಸ್ ಅವರು ಬಿಜೆಪಿ ಸೇರುವ ಮುನ್ಸೂಚನೆ ನೀಡುತ್ತಿದ್ದಾರೆ ಎಂದಿದಾರೆ. ಇದೇ ಮಾತನ್ನು ಎಎಪಿ ಬೆಂಬಲಿಗ ನ್ಯಾ. ಸಂತೋಷ್ ಹೆಗ್ಡೆ ಕೂಡಾ ಪುನರುಚ್ಚರಿಸಿದ್ದಾರೆ.
ಬಿಜೆಪಿ ನಾಯಕ ಸತೀಶ್ ಉಪಾಧ್ಯಾಯ್ ಅವರು ಮೋದಿ ಹೊಗಳಿದ್ದು ಓಕೆ ಆದರೆ, ಎಎಪಿಯಲ್ಲಿನ ಆಂತರಿಕ ಕಚ್ಚಾಟದ ಲಾಭ ನಾವು ಪಡೆದುಕೊಳ್ಳುವುದಿಲ್ಲ ಎಂದಿದ್ದಾರೆ.












Click it and Unblock the Notifications