'ಆಪರೇಷನ್ ಕಮಲ' ಕುರಿತಂತೆ ತನಿಖೆ ನಡೆಸಲು ಒತ್ತಾಯಿಸಿ ಆಪ್ ಶಾಸಕರ ಪ್ರತಿಭಟನೆ
ನವದೆಹಲಿ, ಆಗಸ್ಟ್ 31: ಆಪರೇಷನ್ ಕಮಲ ಹೆಸರಿನಲ್ಲಿ ಬಿಜೆಪಿ ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರ ಬೀಳಿಸಿರುವ ಕ್ರಮವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತು.
ಬಿಜೆಪಿಯ ಆಪರೇಷನ್ ಕಮಲ ಕುರಿತಂತೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಕೇಂದ್ರೀಯ ತನಿಖಾ ದಳದ ನಿರ್ದೇಶಕರನ್ನು ಭೇಟಿ ಮಾಡಲು ಆಮ್ ಆದ್ಮಿ ಪಕ್ಷದ ನಿಯೋಗವವು ಬುಧವಾರ ದೆಹಲಿಯಲ್ಲಿರುವ ಕೇಂದ್ರೀಯ ತನಿಖಾ ದಳದ ಪ್ರಧಾನ ಕಚೇರಿಯ ಬಳಿ ತೆರಳಿತ್ತು.
ನನ್ನ ಮೇಲೆ ಆರೋಪ ಮಾಡಲು ಬಿಜೆಪಿ ಅಣ್ಣ ಹಜಾರೆಯನ್ನು ಶಸ್ತ್ರವಾಗಿ ಬಳಸಿಕೊಳ್ಳುತ್ತಿದೆ: ಕೇಜ್ರಿವಾಲ್
10 ಸದಸ್ಯರ ನಿಯೋಗದ ಭಾಗವಾಗಿದ್ದ ಆಮ್ ಆದ್ಮಿ ಪಕ್ಷದ ಶಾಸಕ ಅತಿಶಿ, ಆಮ್ ಆದ್ಮಿ ಪಕ್ಷ ಈ ಹಿಂದೆ ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಕಚೇರಿಗೆ ಇ-ಮೇಲ್ ಕಳುಹಿಸಿದ್ದು, ಅವರೊಂದಿಗೆ ಅಪಾಯಿಂಟ್ಮೆಂಟ್ ಕೋರಲಾಗಿತ್ತು ಆದರೆ ನಮ್ಮ ಮನವಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.
"ನಾವು ಸಿಬಿಐ ಪ್ರಧಾನ ಕಚೇರಿ ಬಳಿಗೆ ಬಂದಿದ್ದೇವೆ ಮತ್ತು ನಮಗೆ ಸಿಬಿಐ ನಿರ್ದೇಶಕರನ್ನು ಭೇಟಿ ಮಾಡಲು ಸಮಯ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಏಕೆಂದರೆ 'ಆಪರೇಷನ್ ಕಮಲ' ಬಹಳ ಮುಖ್ಯವಾದ ವಿಷಯವಾಗಿದೆ. ಬಿಜೆಪಿಯು 'ಆಪರೇಷನ್ ಕಮಲ'ಕ್ಕೆ 6,300 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ. ಆದ್ದರಿಂದ ಸಿಬಿಐ ಈ ಪ್ರಕರಣದ ತನಿಖೆ ನಡೆಸಬೇಕು ಮತ್ತು ಈ ಹಣದ ಮೂಲವನ್ನು ಕಂಡುಹಿಡಿಯಬೇಕು" ಎಂದು ಅತಿಶಿ ಸುದ್ದಿಗಾರರಿಗೆ ತಿಳಿಸಿದರು.
ದೆಹಲಿ ಎಲ್ಜಿ ಸಕ್ಸೇನಾ ವಿರುದ್ಧ 1400 ಕೋಟಿ ರು ನೋಟು ಬದಲಾವಣೆ ಆರೋಪ
ಆಪರೇಷನ್ ಕಮಲ ಜಾರಿಗೆ ಸಿಬಿಐ, ಇಡಿ ಬಳಕೆ
ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸೋತಾಗ, ಅದು ಆಪರೇಷನ್ ಕಮಲ ಕಾರ್ಯಾಚರಣೆ ಸರ್ಕಾರವನ್ನು ಮೂಲೆಗುಂಪು ಮಾಡಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು(ಇಡಿ) ಬಸಳುವುದರೊಂದಿಗೆ ಪ್ರಾರಂಭವಾಗುತ್ತದೆ ಎಂದು ಆರೋಪಿಸಿದ್ದಾರೆ.
ಮೊದಲು ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿಸಿ, ಪ್ರಕರಣ ದಾಖಲಿಸುತ್ತಾರೆ, ನಂತರ ಆಡಳಿತ ಪಕ್ಷದ ಶಾಸಕರಿಗೆ ಹಣದ ಆಮಿಷ ಒಡ್ಡಿ ಬಿಜೆಪಿ ಸೇರಿದರೆ ಅವರ ಮೇಲಿನ ಕೇಸ್ ಹಿಂಪಡೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ಆರೋಪಿಸಿದರು.
40 ಆಪ್ ಶಾಸಕರ ಖರೀದಿಗೆ ಮುಂದಾಗಿದೆ ಎಂದು ಆರೋಪ
ದೆಹಲಿಯಲ್ಲಿ ಬಿಜೆಪಿ 40 ಆಮ್ ಆದ್ಮಿ ಪಕ್ಷದ ಶಾಸಕರನ್ನು ಖರೀದಿ ಮಾಡಲು ಮುಂದಾಗಿದೆ ಎಂದು ಆರೋಪಿಸಿತ್ತು. ಪ್ರತಿ ಶಾಸಕರಿಗೆ 20 ಕೋಟಿ ರುಪಾಯಿ ನೀಡುವುದಾಗಿ ಆಮಿಷ ಒಡ್ಡಿದೆ ಎಂದು ಆಪ್ ಹೇಳಿತ್ತು.
ಮತ್ತೊಬ್ಬ ಶಾಸಕರನ್ನು ಕರೆತಂದರೆ 25 ಕೋಟಿ ರುಪಾಯಿ ನೀಡುವುದಾಗಿ ಸಹ ಬಿಜೆಪಿ ಆಪ್ ಶಾಸಕರಿಗೆ ಆಫರ್ ನೀಡಿತ್ತು ಎಂದು ಆಪ್ ಮುಖಂಡರು ಆರೋಪ ಮಾಡಿದ್ದರು. 40 ಶಾಸಕರ ಖರೀದಿಗೆ ಬಿಜೆಪಿ 800 ಕೋಟಿ ರುಪಾಯಿ ವ್ಯಯಿಸಲು ಮುಂದಾಗಿದೆ ಬಿಜೆಪಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಆಪ್ ಪ್ರಶ್ನೆ ಮಾಡಿದೆ.
ಆರೋಪ ನಿರಾಕರಿಸಿದ ಬಿಜೆಪಿ
ಆಮ್ ಆದ್ಮಿ ಪಕ್ಷದ ಆರೋಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎನ್ನುವುದು ಸುಳ್ಳು, ಆಮ್ ಆದ್ಮಿ ಪಕ್ಷ ಯಾವುದೇ ಆಧಾರವಿಲ್ಲದೆ ಆರೋಪ ಮಾಡುತ್ತಿದೆ ಎಂದು ಹೇಳಿದೆ.
ದೆಹಲಿಯಲ್ಲಿ ಯಾವುದೇ ಆಪ್ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ, ಶಾಸಕರ ಖರೀದಿಸುವ ಆಮಿಷ ಒಡ್ಡಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಶಾಸಕರು
ಪ್ರತಿಪಕ್ಷಗಳ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ನಡೆಸಿರುವ ಆಪರೇಷನ್ ಕಮಲದ ತನಿಖೆಗೆ ಒತ್ತಾಯಿಸಿ ಎಎಪಿ ಶಾಸಕರು ದೆಹಲಿ ವಿಧಾನಸಭೆಯ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪ್ರತಿಕೃತಿ ದಹಿಸಿದರು.
ದೆಹಲಿ ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ದೆಹಲಿ ಉಪಮುಖ್ಯಮಂತ್ರಿ ಮುನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ಆರಂಭಿಸಿದ ಮೇಲೆ ಬಿಜೆಪಿ-ಆಪ್ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.