ದೆಹಲಿ ವೈದ್ಯ ಆತ್ಮಹತ್ಯೆ ಪ್ರಕರಣ: ಆಪ್ ಶಾಸಕ ಪ್ರಕಾಶ್ ಜರ್ವಾಲ್ ಬಂಧನ
ದೆಹಲಿ, ಮೇ 10: ದೆಹಲಿ ವೈದ್ಯನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಪ್ ಆದ್ಮಿ ಪಕ್ಷದ ಶಾಸಕ ಪ್ರಕಾಶ್ ಜರ್ವಾಲ್ ಮತ್ತು ಸಹ ಆರೋಪಿ ಕಪಿಲ್ ನಗರ್ರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.
52 ವರ್ಷದ ವೈದ್ಯ ರಾಜೇಂದ್ರ ಸಿಂಗ್ ಅವರು ಏಪ್ರಿಲ್ 18 ರಂದು ದಕ್ಷಿಣ ದೆಹಲಿಯ ದುರ್ಗಾ ವಿಹಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನನ್ನ ಸಾವಿಗೆ ಶಾಸಕ ಪ್ರಕಾಶ್ ಜರ್ವಾಲ್ ಹೊಣೆ ಎಂದು ಡೆತ್ನೋಟ್ ಬರೆದು ಸಾವನ್ನಪ್ಪಿದ್ದರು. ಡೆತ್ನೋಟ್ ಆಧಾರದಲ್ಲಿ ದೂರು ದಾಖಲಾಗಿತ್ತು.
ವಿಡಿಯೋ ಕಾಲ್ ವೇಳೆ ಆಕಸ್ಮಿಕವಾಗಿ ನೇಣು ಬಿಗಿದುಕೊಂಡ ವ್ಯಕ್ತಿ
ಕೇಸ್ಗೆ ಸಂಬಂಧಿಸಿದಂತೆ ಶಾಸಕ ಮತ್ತು ಆರೋಪಿ ನಗರ್ರನ್ನು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕಳುಹಿಸಲಾಗಿತ್ತು. ಈ ವೇಳೆ ದೆಹಲಿ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಪಡೆದುಕೊಂಡಿದ್ದ ಪೊಲೀಸರು ಶಾಸಕರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೈದ್ಯ ರಾಜೇಂದ್ರ ಸಿಂಗ್ ದೆಹಲಿಯ ದುರ್ಗಾವಿಹಾರದಲ್ಲಿ ಕ್ಲಿನಿಕ್ ನಡೆಸುತ್ತಿದ್ದನು ಹಾಗೂ ದೆಹಲಿ ಜಲ ಮಂಡಳಿಯೊಂದಿಗೆ ನೀರು ಸರಬರಾಜು ಮಾಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದನು ಎಂದು ಆತನ ಮಗ ಹೇಮಂತ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ವೈದ್ಯ ರಾಜೇಂದ್ರ ಸಿಂಗ್ ಅವರ ಡೆತ್ ನೋಟ್ ಮತ್ತು ಮಗನ ದೂರಿನ ಅನ್ವಯ ಆಪ್ ಶಾಸಕ ಪ್ರಕಾಶ್ ಜರ್ವಾಲ್, ಕಪಿಲ್ ನಗರ್ ಹಾಗೂ ಇನ್ನಿತರರ ವಿರುದ್ಧ ಸುಲಿಗೆ ಮತ್ತು ಆತ್ಮಹತ್ಯೆ ಪ್ರಚೋದನೆ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಇದಕ್ಕೂ ಮುಂಚೆ 2018 ರಲ್ಲಿ ದೆಹಲಿ ಮುಖ್ಯ ಕಾರ್ಯದರ್ಶಿ ಅನ್ಶು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜಾರ್ವಾಲ್ ನನ್ನು ಬಂಧಿಸಲಾಗಿತ್ತು.