ಹಡಗೇ ಮುಳುಗಿದೆ, ಕಳ್ಕೊಂಡಿದ್ದು ಅಡಿಕೆ ಚೂರು ಅಂತಾರೆ ರಾಹುಲ್ ಗಾಂಧಿ
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸೋಲು ಅಲ್ಪ ಹಿನ್ನಡೆ ಎಂದಿರುವ ರಾಹುಲ್ ಗಾಂಧಿ ಅವರ ರಾಜಕೀಯ ವಿಶ್ಲೇಷಣಾ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ರಾಹುಲ್ ನಾಯಕತ್ವದ ಬಗ್ಗೆಯೇ ಅಸಮಾಧಾನ ವ್ಯಕ್ತವಾಗುತ್ತಿದೆ
ನವದೆಹಲಿ, ಮಾರ್ಚ್ 15: ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ನೆಲ ಕಚ್ಚಿದ ಕಾಂಗ್ರೆಸ್ ಗೆ ಇದು "ಅಲ್ಪ ಹಿನ್ನಡೆ" ಎಂದಿದ್ದಾರೆ ರಾಹುಲ್ ಗಾಂಧಿ. ವಿರೋಧ ಪಕ್ಷ ಅಂದ ಮೇಲೆ ಏರಿಳಿತ ಸಹಜ. ನಮಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದಿದ್ದಾರೆ ರಾಹುಲ್.
ಭಾರತದ ಹಳೆ ಪಕ್ಷವೊಂದು 403 ಸ್ಥಾನಗಳ ಪೈಕಿ ನೂರು ಚಿಲ್ಲರೆ ಕಡೆ ಸ್ಪರ್ಧಿಸಿ, ಏಳು ಸ್ಥಾನ ಗೆಲ್ಲೋದು ಎಂಥ ಸನ್ನಿವೇಶ ಎಂಬುದು ಯಾರಿಗಾದರೂ ತಿಳಿಯುತ್ತದೆ. ಆದರೆ ಒಬ್ಬ ರಾಹುಲ್ ಗಾಂಧಿ ಅವರನ್ನು ಹೊರತುಪಡಿಸಿ. ಕಾಂಗ್ರೆಸ್ ಜತೆಗೆ ಮೈತ್ರಿಯೇ ಮಾಡಿಕೊಳ್ಳಬಾರದಿತ್ತು ಎಂದು ಸಮಾಜವಾದಿ ಪಕ್ಷದ ಸದಸ್ಯರು ಈಗ ಬಂಬಡಾ ಬಜಾಯಿಸ್ತಾ ಇದಾರೆ.

ಇನ್ನು ಕಾಂಗ್ರೆಸ್ ನವರ ಸ್ಥಿತಿ ಬರೀ ಮಾತಿನಲ್ಲಿ ಹೇಳೋಕೆ ಆಗೋದಿಲ್ಲ. ಈ ಸೋಲಿಗೆ ರಾಹುಲ್ ಗಾಂಧಿಯನ್ನು ಮಾತ್ರ ಹೊಣೆ ಮಾಡಬಾರದು ಅನ್ನೋದು ಆ ಪಕ್ಷದ ಹಿರಿಯ ನಾಯಕರ ಅಭಿಪ್ರಾಯ. ತಕ್ಷಣವೇ ಈ ಸೋಲಿನ ಪರಾಮರ್ಶೆ ಆಗಬೇಕು ಎಂಬುದು ಅವರ ಒತ್ತಾಯ.[ರಾಹುಲ್ ನಾಯಕತ್ವ ನಕ್ಕೋ ನಕ್ಕೋ ಎನ್ನುತ್ತಿರುವ ಕಾಂಗ್ರೆಸ್ಸಿಗರು]
ಕಾಂಗ್ರೆಸ್ ಪಕ್ಷ ಕಂದಕದ ಕಡೆ ಸಾಗುತ್ತಿದೆ ಎಂದು ಈಗಿನ ಸನ್ನಿವೇಶದ ಆಧಾರದಲ್ಲಿ ಪಕ್ಷದ ಸದಸ್ಯರು ಎರಡೂ ಕೈಯಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದರೆ, ಉತ್ತರಪ್ರದೇಶದ ಸೋಲನ್ನು ರಾಹುಲ್ ಗಾಂಧಿ ಅವರು "ಅಲ್ಪ ಹಿನ್ನಡೆ" ಅಂತ ತಿಪ್ಪೆ ಸಾರಿಸುತ್ತಾರೆ.
ತಮಾಷೆ ಆರೋಪ
ಚುನಾವಣೆಯ ಸೋಲಿನ ನಂತರ ಮಂಗಳವಾರ ಮೊದಲ ಸಲ ಮಾಧ್ಯಮದ ಜತೆಗೆ ಮಾತನಾಡಿದ ರಾಹುಲ್, ನಗುನಗುತ್ತಲೇ ಇದ್ದರು. ಕೆಲವು ಸಲ ಮುಜುಗರಕ್ಕೂ ಈಡಾದರು. ಉತ್ತರಪ್ರದೇಶ ಚುನಾವಣೆ ಪ್ರಚಾರದ ಧ್ರುವೀಕರಣ ಮಾಡಿತು ಬಿಜೆಪಿ ಎಂದು ಅವರು ಆರೋಪ ಮಾಡಿದಾಗ ನಿಜಕ್ಕೂ ತಮಾಷೆ ಅನಿಸಿತು.

ದಿಗ್ವಿಜಯ್ ಸಿಂಗ್ ಹಾಗೂ ರೇಣುಕಾ ಚೌಧುರಿ ಅಂಥವರೂ ರಾಹುಲ್ ರಕ್ಷಣೆಗೆ ಓಡೋಡಿ ಬಂದು, ಸೋಲಿಗೆ ಅವರನ್ನು ಹೊಣೆ ಮಾಡಬೇಡಿ ಎಂದು ದಮ್ಮಯ್ಯಗುಡ್ಡೆ ಹಾಕಿದ್ದಾರೆ. ಹಾಗಿದ್ದರೆ ಈ ಸೋಲಿನ ಹೊಣೆ ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಉತ್ತರಪ್ರದೇಶದ ಚುನಾವಣೆ ಉದ್ದಕ್ಕೂ ಕಾಂಗ್ರೆಸ್ ನ ಮುಖವಾಗಿದ್ದವರು ರಾಹುಲ್. ಮತ್ತು ಸಮಾಜವಾದಿ ಪಕ್ಷದ ಜತೆಗಿನ ಕೂಡಿಕೆ ಕೂಡ ಫಲ ಕೊಡಲಿಲ್ಲ.[ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!]
ಸ್ಥಳೀಯ ನಾಯಕರಿಂದ ಗೆದ್ದಿತು
ಆದರೆ, ರಾಹುಲ್ ಅವರು ಪಂಜಾಬ್ ನ ಗೆಲುವು, ಮಣಿಪುರ-ಗೋವೆಯಲ್ಲಿ ದೊಡ್ಡ ಪಕ್ಷವಾಗಿ ಬಂದಿದ್ದರ ಬಗ್ಗೆ ಮಾತನಾಡುತ್ತಾರೆ. ಆದರೆ ಪಂಜಾಬ್ ನ ಗೆಲುವಿಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಾತ್ರ ಕಾರಣರು. ಇನ್ನು ಗೋವಾ-ಮಣಿಪುರದಲ್ಲಿ ಕಾಂಗ್ರೆಸ್ ಮೊದಲ ಸ್ಥಾನದಲ್ಲಿ ನಿಲ್ಲುವುದಕ್ಕೆ ಸ್ಥಳೀಯ ನಾಯಕರೇ ಕಾರಣ ಎಂಬುದು ಸೂರ್ಯನಷ್ಟೇ ಸತ್ಯ.

ಪಂಜಾಬ್, ಗೋವಾ ಹಾಗೂ ಮಣಿಪುರದ ಫಲಿತಾಂಶ ಒಂದು ಸಂದೇಶವನ್ನು ರವಾನಿಸಿದೆ. ಅದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು. ಸುಮ್ಮನೆ ಕೇಂದ್ರದಿಂದ ಬಂದು ಮೂಗು ತೂರಿಸಬೇಡಿ, ಸ್ಥಳೀಯ ನಾಯಕರನ್ನು ಅವರಷ್ಟಕ್ಕೆ ಬಿಟ್ಟರೆ ಒಳ್ಳೆ ಫಲಿತಾಂಶ ನಿರೀಕ್ಷೆ ಮಾಡಬಹುದು. ಏಕೆಂದರೆ ಆ ಜನರ ನಾಡಿಮಿಡಿತ ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.[ಸಮೀಕ್ಷೆ: 2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 150 ಸ್ಥಾನ!]
ಒಕ್ಕಲಿಗರ ಮತ ಬೀಳೋದು ಕಷ್ಟ
ಕರ್ನಾಟಕದ ಉದಾಹರಣೆ ತೆಗೆದುಕೊಳ್ಳಿ. ಕಾಂಗ್ರೆಸ್ ನ ಹಿರಿಯ ನಾಯಕ ಎಸ್ಸೆಂ ಕೃಷ್ಣರನ್ನು ಕೈಯಾರೆ ಬಿಟ್ಟುಕೊಟ್ಟಿದೆ. ಈ ಅಂಶ ರಾಜ್ಯದಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವ ಕಡೆ ಖಂಡಿತಾ ಕಾಂಗ್ರೆಸ್ ಗೆ ಉಲ್ಟಾ ಹೊಡೆಯುತ್ತೆ. ತಜ್ಞರ ಅಭಿಪ್ರಾಯದ ಪ್ರಕಾರ, ರಾಹುಲ್ ಗಾಂಧಿಗೆ ಹೇಳಿ, ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಕಾಂಗ್ರೆಸ್ ಗೆ ಒಳ್ಳೆಯದು. ಆಗ ಒಕ್ಕಲಿಗರ ಮತಗಳನ್ನು ಸೆಳೆಯಬಹುದು.

ಒಂದು ವೇಳೆ ಮೈತ್ರಿ ಮಾಡಿಕೊಳ್ಳಲಿಲ್ಲ ಅಂದರೆ ಆಂಧ್ರದಲ್ಲಿ ಜಗನ್ಮೋಹನ್ ರೆಡ್ಡಿ ಪಕ್ಷ ಬಿಟ್ಟು ಹೋದ ನಂತರ ಎಂಥ ಸ್ಥಿತಿ ತಲುಪಿತೋ ಅದೇ ಥರ ಕರ್ನಾಟಕದಲ್ಲೂ ಆಗುತ್ತದೆ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಅಭಿಪ್ರಾಯ.

ಇವತ್ತು ಕಾಂಗ್ರೆಸ್ ನ ಗಮನಿಸಿದರೆ ಒಂದಂತೂ ಸ್ಪಷ್ಟ. ಅದು ತನ್ನ ಕೌಟುಂಬಿಕ ರಾಜಕಾರಣದ ಹಣೆಪಟ್ಟಿ ಕಳೆದುಕೊಂಡು ಆಚೆ ಬರೋದಿಲ್ಲ. ರಾಹಿಲ್ ವರ್ಕ್ ಔಟ್ ಆಗಲಿಲ್ಲ ಅಂದರೆ ಪ್ರಿಯಾಂಕಾ ಗಾಂಧಿ ಅಂತಾರೆ. ಸ್ಥಳೀಯವಾಗಿ ಹೊಸ ಹಾಗೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ಬೆಳೆಸಲಿಲ್ಲ ಅಂದರೆ ಕಾಂಗ್ರೆಸ್ ದಿನಗಳು ಮುಗಿದುಹೋದಂತೆಯೇ.












Click it and Unblock the Notifications