ಯೋಧರ ಸ್ಮರಣಾರ್ಥ ರಾಷ್ಟ್ರೀಯ ಸ್ಮಾರಕ, ಮ್ಯೂಸಿಯಂ
ನವದೆಹಲಿ, ಅಕ್ಟೋಬರ್, 08 : ಸ್ವಾತಂತ್ರ್ಯ ನಂತರ ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರ ಸ್ಮರಣಾರ್ಥ ದೆಹಲಿ ಇಂಡಿಯಾ ಗೇಟ್ ಬಳಿಯ ಪ್ರಿನ್ಸಸ್ ಪಾರ್ಕಿನಲ್ಲಿ 'ರಾಷ್ರೀಯ ಯುದ್ಧ ಸ್ಮಾರಕ' ಹಾಗೂ 'ರಾಷ್ಟ್ರೀಯ ಯುದ್ಧ ಮ್ಯೂಸಿಯಂ' ಸ್ಥಾಪಿಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.
ರಾಷ್ಟ್ರೀಯ ಯುದ್ಧ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣಕ್ಕೆ 500 ಕೋಟಿ ವೆಚ್ಚ ತಗುಲಲಿದ್ದು, ಹುತಾತ್ಮರಾದ 22,500 ಸೈನಿಕರ ನೆನಪಿಗಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಯು ಸ್ಟೀರಿಂಗ್ ಕಮಿಟಿಯ ರಕ್ಷಣಾ ಕಾರ್ಯದರ್ಶಿ ಮೇಲ್ವಿಚಾರಣೆಯಲ್ಲಿ 5 ವರ್ಷದಲ್ಲಿ ಪೂರ್ಣಗೊಳ್ಳಲಿದೆ.[ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು : ಇಲ್ಲಿದೆ ಪಟ್ಟಿ]
ಸಶಸ್ತ್ರ ಪಡೆಗಳ ಬಹುದಿನದ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದು, ಸ್ವಾತಂತ್ರ್ಯ ನಂತರ ಸೈನಿಕರ ನೆನೆಪಿನಾರ್ಥ ನಿರ್ಮಾಣ ಮಾಡುತ್ತಿರುವ ದೇಶದ ಮೊದಲ ಸ್ಮಾರಕ ಮತ್ತು ಮ್ಯೂಸಿಯಂ ಎಂಬ ಹೆಗ್ಗಳಿಕೆಯೂ ಸಿಕ್ಕಿದೆ.
ಈ ಸ್ಮಾರಕವು ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ, ಜಮ್ಮು ಮತ್ತು ಕಾಶ್ಮೀರ ನಡೆದ ಯುದ್ಧಗಳಲ್ಲಿ ಪ್ರಾಣತೆತ್ತ ಸೈನಿಕರನ್ನು ನೆನಪಿಸಿಕೊಳ್ಳಲಿದ್ದು, ಇದು ಜಗತ್ತಿನ ಉತ್ತಮ ಸೈನಿಕ ಸ್ಮಾರಕದ ಪಟ್ಟಿಗೆ ಸೇರಲಿದೆ. ಇದರ ಮೂಲಕ ಸೈನಿಕರಿಗೆ ಪರಿಪೂರ್ಣ ಗೌರವ ಸಲ್ಲಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.