ದೆಹಲಿ ಕಟ್ಟಡ ದುರಂತದಲ್ಲಿ ಐವರು ಸಾವು, 13 ವಿದ್ಯಾರ್ಥಿಗಳಿಗೆ ಗಾಯ
ನವದೆಹಲಿ, ಜನವರಿ.25: ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಕಟ್ಟಡ ದುರಂತ ಸಂಭವಿಸಿದೆ. ನವದೆಹಲಿ ಭಜನ್ ಪುರ್ ಪ್ರದೇಶದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡವು ಕುಸಿದಿದ್ದು, ಐವರು ಮೃತಪಟ್ಟಿದ್ದು, 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಶನಿವಾರ ಸಂಜೆ 4.30ರ ವೇಳೆಗೆ ಭಜನ್ ಪುರ್ ನಲ್ಲಿರುವ ವಿದ್ಯಾರ್ಥಿಗಳ ತರಬೇತಿ ಕೇಂದ್ರದ ಮೇಲ್ಛಾವಣಿ ಕುಸಿದಿದೆ. ಈ ವೇಳೆ ತರಬೇತಿ ಕೇಂದ್ರದಲ್ಲಿದ್ದ ಒಬ್ಬ ಶಿಕ್ಷಕ ಹಾಗೂ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಬಹುಮಹಡಿ ಕಟ್ಟಡ ಕುಸಿತ, 12 ವಿದ್ಯಾರ್ಥಿಗಳ ರಕ್ಷಣೆ
ಕಟ್ಟಡದ ಮೇಲ್ಛಾವಣಿ ಕುಸಿತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ 7 ಅಗ್ನಿಶಾಮಕ ದಳ ವಾಹನಗಳು ದೌಡಾಯಿಸಿದವು. ರಕ್ಷಣಾ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ 13 ವಿದ್ಯಾರ್ಥಿಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
|
ಹೆಚ್ಚುವರಿ ಫ್ಲೋರ್ ನಿರ್ಮಾಣವೇ ಘಟನೆಗೆ ಕಾರಣ?
ಭಜನ್ ಪುರ್ ಪ್ರದೇಶದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದ ಮೇಲ್ಛಾವಣಿ ಕುಸಿತಕ್ಕೆ ನಿಯಮ ಉಲ್ಲಂಘಟನೆಯೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಪರವಾನಗಿ ಪಡೆದಿದ್ದಕ್ಕಿಂತ ಹೆಚ್ಚುವರಿ ಫ್ಲೋರ್ ನಿರ್ಮಾಣ ಮಾಡಿದ್ದಕ್ಕಾಗಿ ಈ ದುರ್ಘಟನೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸಂತಾಪ ಸೂಚಿಸಿದ ಸಿಎಂ ಅರವಿಂದ್ ಕೇಜ್ರಿವಾಲ್
ಭಜನ್ ಪುರ್ ಕಟ್ಟಡ ದುರಂತಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಸಾವಿನಿಂದ ಮನಸಿಗೆ ತುಂಬಾ ನೋವಾಗುತ್ತಿದೆ. ಅಕ್ರಮವಾಗಿ ಹೆಚ್ಚುವರಿ ಮಹಡಿ ನಿರ್ಮಾಣವೇ ದುರಂತಕ್ಕೆ ಕಾರಣಾಗಿದ್ದು, ದೆಹಲಿ ಮಹಾನಗರ ಪಾಲಿಕೆ ಇದಕ್ಕೆ ಹೇಗೆ ಅನುಮತಿ ನೀಡಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.
ಚುನಾವಣಾ ಆಯೋಗಕ್ಕೆ ಅನುಮತಿ ಕೋರಿದ ಕೇಜ್ರಿವಾಲ್
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಭಜನ್ ಪುರ್ ಕಟ್ಟಡ ದುರಂತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ಸರ್ಕಾರವು 10 ಲಕ್ಷ ರೂಪಾಯಿ ಪರಿಹಾರ ಘೋಷಿಸಲು ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾವಿಗೆ ಲೆಫ್ಟಿನೆಂಟ್ ಗವರ್ನರ್ ಸಂತಾಪ
ಇನ್ನು, ಭಜನ್ ಪುರ್ ಕಟ್ಟಡ ದುರಂತದಲ್ಲಿ ಮಕ್ಕಳ ಸಾವಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಸಂತಾಪ ಸೂಚಿಸಿದ್ದಾರೆ. ಮುಗ್ಧ ಮಕ್ಕಳ ಸಾವಿನಿಂದ ಮನಸಿಗೆ ತುಂಬಾ ನೋವಾಗುತ್ತಿದೆ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರ ಹೆತ್ತವರಿಗೆ ನೀಡಲಿ ಎಂದು ಅನಿಲ್ ಬೈಜಲ್ ಟ್ವೀಟ್ ಮಾಡಿದ್ದಾರೆ.