ಆಕ್ಸಿಜನ್ ಕೊರತೆಯಿಂದ ಗಂಗಾರಾಮ್ ಆಸ್ಪತ್ರೆಯಲ್ಲಿ 25 ಕೋವಿಡ್ ರೋಗಿಗಳ ಸಾವು
ನವದೆಹಲಿ, ಏಪ್ರಿಲ್ 23: ಆಮ್ಲಜನಕ ಕೊರತೆಯಿಂದಾಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ 25 ರೋಗಿಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಖುದ್ದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರೇ ರಾಜ್ಯದಲ್ಲಿ ಆಮ್ಲಜನಕ ಕೊರತೆ ಇದೆ ಎಂದು ಹೇಳಿಕೊಂಡಿದ್ದಾರೆ.
ದೆಹಲಿಯ ಖ್ಯಾತ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 25 ತೀವ್ರ ಅನಾರೋಗ್ಯಪೀಡಿತ ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ. ಇಂದು ಸರ್ಕಾರಕ್ಕೆ ಎಸ್ಎಎಸ್ ನ್ನು ಕಳುಹಿಸಿರುವ ಆಸ್ಪತ್ರೆ ಇನ್ನು ಕೇವಲ ಎರಡು ಗಂಟೆಗಳವರೆಗೆ ರೋಗಿಗಳಿಗೆ ಆಕ್ಸಿಜನ್ ನೀಡಲು ವ್ಯವಸ್ಥೆಯಿದ್ದು 60 ಮಂದಿ ರೋಗಿಗಳ ಜೀವ ತೀವ್ರ ಅಪಾಯದಲ್ಲಿದೆ ಎಂದು ಹೇಳಿದೆ.
ದೆಹಲಿಯ ಪ್ರಮುಖ ಆಸ್ಪತ್ರೆಯಾದ ಗಂಗಾ ರಾಮ್ ಆಸ್ಪತ್ರೆ ಮತ್ತು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ತಮಗೆ ಆಕ್ಸಿಜನ್ ಟ್ಯಾಂಕರ್ ಕಳುಹಿಸಿಕೊಡಿ ಎಂದು ಸರ್ಕಾರಕ್ಕೆ ಎಸ್ಒಎಸ್ (Save Our Souls) ಕಳುಹಿಸಿವೆ.

ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 25 ರೋಗಿಗಳು ಮೃತಪಟ್ಟಿದ್ದಾರೆ. ಇನ್ನು ಎರಡು ಗಂಟೆಯಲ್ಲಿ ಆಕ್ಸಿಜನ್ ಮುಗಿಯಲಿದೆ. ವೆಂಟಿಲೇಟರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಆಮ್ಲಜನಕವನ್ನು ತುರ್ತಾಗಿ ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ವ್ಯವಸ್ಥೆ ಮಾಡಿ. ಇನ್ನೂ 60 ರೋಗಿಗಳ ಜೀವ ಗಂಡಾಂತರದಲ್ಲಿದೆ ಎಂದು ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.
ಆಕ್ಸಿಜನ್ ಟ್ಯಾಂಕರ್ ಆಗಮನ: ತುರ್ತಾಗಿ ಆಕ್ಸಿಜನ್ ಪೂರೈಕೆ ಮಾಡಿ ಎಂದು ಆಸ್ಪತ್ರೆ ಕೇಳಿಕೊಂಡ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ವ್ಯವಸ್ಥೆ ಮಾಡಿ ಆಕ್ಸಿಜನ್ ಕಳುಹಿಸಿದ್ದು ಆಕ್ಸಿಜನ್ ಟ್ಯಾಂಕರ್ ಗಳು ಆಗಮಿಸಿವೆ.
ಇನ್ನು ದೆಹಲಿಯ ಮ್ಯಾಕ್ಸ್ ಸ್ಮಾರ್ಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ತುರ್ತಾಗಿ ಆಕ್ಸಿಜನ್ ಕಳುಹಿಸಿಕೊಡುವಂತೆ ಎಸ್ ಒಎಸ್ ಕಳುಹಿಸಿದ ಹಿನ್ನೆಲೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಆಗಮನವಾಗಿದೆ ಎಂದು ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು ಹೇಳುವ ಪ್ರಕಾರ, ಇಲ್ಲಿ 510ಕ್ಕೂ ಅಧಿಕ ಕೋವಿಡ್ ರೋಗಿಗಳು ದಾಖಲಾಗಿದ್ದು ಅವರಲ್ಲಿ 142 ಮಂದಿ ಅಧಿಕ ಆಕ್ಸಿಜನ್ ನ ಅಗತ್ಯವಿರುವವರಾಗಿದ್ದಾರೆ.












Click it and Unblock the Notifications