ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 18 ಸಾವಿರ ಉದ್ಯೋಗಿಗಳ ವರ್ಗಾವಣೆ
ನವದೆಹಲಿ, ಫೆಬ್ರವರಿ 22: ಒಂದೇ ಹುದ್ದೆಯಲ್ಲಿ ಮೂರು ವರ್ಷ ಕಾರ್ಯ ನಿರ್ವಹಿಸಿದ ಬ್ಯಾಂಕ್ ಅಧಿಕಾರಿಗಳು ಹಾಗೂ ಒಂದೇ ಶಾಖೆಯಲ್ಲಿ ಐದು ವರ್ಷ ಕೆಲಸ ಮಾಡಿದ ನೌಕರರನ್ನು ವರ್ಗಾವಣೆ ಮಾಡುವಂತೆ ಕೇಂದ್ರ ವಿಚಕ್ಷಣಾ ದಳ ಸೂಚಿಸಿದ ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್ 18 ಸಾವಿರ ಉದ್ಯೋಗಿಗಳನ್ನು ವರ್ಗಾವಣೆ ಮಾಡಿದೆ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ ತಿಳಿಸಿದೆ.
ಈ ಬಗ್ಗೆ ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಒಕ್ಕೂಟ, ವಿಚಕ್ಷಣಾ ದಳದ ಆದೇಶ ಬಂದ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವೊಂದರಲ್ಲೇ 18 ಸಾವಿರ ಉದ್ಯೋಗಿಗಳ ವರ್ಗಾವಣೆ ಮಾಡಿದ್ದು, ಇದರಿಂದ ಉದ್ಯೋಗಿಗಳಿಗೆ ತೊಂದರೆ ಆಗಿದೆ ಎಂದು ಹೇಳಲಾಗಿದೆ.
ಪಿಎನ್ ಬಿ ಹಗರಣ: ಇನ್ನೋರ್ವ ಮ್ಯಾನೇಜರ್ ಸಿಬಿಐ ಬಲೆಗೆ
ಆದರೆ, ಪಿಎನ್ ಬಿಯ ಅಧಿಕೃತ ವಕ್ತಾರರು ಈ ಬಗ್ಗೆ ಮಾತನಾಡಿ, ನಮಗೆ ಈ ವಿಚಾರದ ಬಗ್ಗೆ ಗೊತ್ತಿಲ್ಲ, ನಮಗೆ ಮಾಹಿತಿಯೂ ಇಲ್ಲ ಎಂದು ತಿಳಿಸಿದ್ದಾರೆ. ಭಾರೀ ಮೊತ್ತದ ವಂಚನೆಗೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಹಂತದ ಅಧಿಕಾರಿಯೂ ಸೇರಿದಂತೆ ಹದಿನೆಂಟು ಮಂದಿಯನ್ನು ಬ್ಯಾಂಕ್ ನಿಂದ ಅಮಾನತು ಮಾಡಲಾಗಿತ್ತು.
ಆ ಘಟನೆಯ ಹಿನ್ನೆಲೆಯಲ್ಲಿ ಈಚೆಗೆ ಕೇಂದ್ರ ವಿಚಕ್ಷಣಾ ದಳವು ಆದೇಶ ನೀಡಿ, ಸರಕಾರಿ ಸ್ವಾಮ್ಯದ ಕಂಪೆನಿ ಅಥವಾ ಸಂಸ್ಥೆಗಳಲ್ಲಿ ಭ್ರಷ್ಟಾಚಾರ- ವಂಚನೆ ತಡೆಯುವ ಸಲುವಾಗಿ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.
ಈಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಬೆಳಕಿಗೆ ಬಂದಿರುವ ವಂಚನೆ ಪ್ರಕರಣ ನಡೆದಿರುವುದು 2017 -2018ರಲ್ಲಿ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಅದಕ್ಕೂ ಹಿಂದಿನಿಂದ ನಡೆದಿದ್ದರೆ ವಂಚನೆಯ ಮೊತ್ತ 11,300 ಕೋಟಿಗೂ ಹೆಚ್ಚಿರುವ ಸಾಧ್ಯತೆ ಇದೆ. "ಈಗ ಬಹಿರಂಗ ಪಡಿಸಿರುವ ಮೊತ್ತದಲ್ಲಿ 2011ರಿಂದ ಆಗಿರುವ ಲೆಕ್ಕ ಸೇರಿಲ್ಲ" ಎಂದು ಸ್ವತಃ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.
ಅಂತೂ ಮೌನ ಮುರಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಬ್ಯಾಂಕ್ ವ್ಯವಸ್ಥೆಯನ್ನು ವಂಚನೆ ಮಾಡಿದವರನ್ನು ಸರಕಾರ ಬೆನ್ನಟ್ಟಿ ಹಿಡಿದು, ಶಿಕ್ಷಿಸುತ್ತದೆ. ಯಾರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.