ದೆಹಲಿಯಲ್ಲಿ ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ 53ರಲ್ಲಿ 14 ಮಂದಿ ಮಕ್ಕಳು
ನವದೆಹಲಿ, ಏಪ್ರಿಲ್ 16: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಹೊಸ ಹೊಸ ರೂಪಾಂತರ ತಳಿಗಳು ಸೋಂಕಿನ ಭೀತಿಯನ್ನು ಹುಟ್ಟು ಹಾಕುತ್ತಿವೆ. ಓಮಿಕ್ರಾನ್ ಮುಗಿನ ಬೆನ್ನಲ್ಲೇ ದೇಶದಲ್ಲಿ ಇದೀಗ ಎಕ್ಸ್ಇ ತಳಿಯ ಭೀತಿ ಶುರುವಾಗಿದೆ.
ನವದೆಹಲಿಯಲ್ಲಿ ಕೊರೊನಾವೈರಸ್ ಮಹಾಮಾರಿಯಿಂದ ಮಕ್ಕಳಿಗೆ ಹೆಚ್ಚು ಅಪಾಯವಿದೆಯೇ ಎನ್ನುವ ಅನುಮಾನ ಹುಟ್ಟಿಕೊಳ್ಳುತ್ತಿದೆ. ಸೋಂಕು ತಗುಲಿದ ನಂತರದಲ್ಲಿ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಲ್ಲಿ ಮಕ್ಕಳ ಸಂಖ್ಯೆ ಕೊಂಚ ಹೆಚ್ಚಾಗಿದೆ. ದೆಹಲಿಯಲ್ಲಿ ಇತ್ತೀಚಿಗೆ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯು ಇದನ್ನು ಸಾರಿ ಹೇಳುವಂತಿದೆ.
ಬೆಂಗಳೂರಿನ ಮಂದಿ 3ನೇ ಡೋಸ್ ಲಸಿಕೆ ಪಡೆದುಕೊಳ್ಳಲು ಏನು ಮಾಡಬೇಕು?
ಏಕೆಂದರೆ ಶನಿವಾರ ಬೆಳಗ್ಗೆವೊಂದೇ ದಿನ 14 ಮಕ್ಕಳು ಕೊವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಬಹುಪಾಲು ಮಕ್ಕಳು ಜೊತೆಯಾಗಿ ಒಂದೇ ಕಡೆಯಲ್ಲಿದ್ದವರು ಎಂದು ತಿಳಿದು ಬಂದಿದೆ. ಕೊರೊನಾವೈರಸ್ ಸೋಂಕು ತಗುಲಿರುವ 12 ಮಕ್ಕಳು ದೆಹಲಿಯ ಕಲಾವತಿ ಸರನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 24 ಗಂಟೆಗಳಲ್ಲೇ ರಾಷ್ಟ್ರ ರಾಜಧಾನಿಯಲ್ಲಿ 53 ಮಂದಿ ಕೊರೊನಾವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಒಟ್ಟಾರೆ ಅಂಕಿ-ಅಂಶಗಳನ್ನು ನೋಡಿದಾಗ ಕೋವಿಡ್-19 ಸೋಂಕಿತರಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಯಾವುದೇ ರೀತಿ ಏರಿಕೆ ಕಂಡು ಬಂದಿಲ್ಲ.
ನವದೆಹಲಿಯಲ್ಲಿ ಪಾಸಿಟಿವಿಟಿ ದರ ಶೇ. 3.95:
ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಒಂದು ದಿನದಲ್ಲಿ 366 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ದೆಹಲಿಯಲ್ಲಿ ಪಾಸಿಟಿವಿಟಿ ದರ 3.95ರಷ್ಟಾಗಿದೆ. ಕಳೆದ ಕೆಲವು ದಿನಗಳಲ್ಲಿ ನವದೆಹಲಿಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರವು ಯಾವುದೇ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ಪ್ರಕರಣಗಳ ಏರಿಕೆಗೆ ಕಾರಣ ಎಂದು ದೂಷಿಸಲಾಗುತ್ತಿದೆ.
ದೆಹಲಿಯಲ್ಲಿ ಶಾಲೆಗಳನ್ನು ಮುಚ್ಚುವುದೇ ಕೊನೆ ಆಯ್ಕೆ:
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆ ಹಿನ್ನೆಲೆ ದೆಹಲಿಯಲ್ಲಿ ಶಿಕ್ಷಣ ನಿರ್ದೇಶನಾಲಯವು ವಿದ್ಯಾರ್ಥಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಆ ಪ್ರಕಾರ ಶಾಲೆಗಳನ್ನು ಮುಚ್ಚುವುದೇ ಕೊನೆಯ ಆಯ್ಕೆಯಾಗಿದೆ ಎಂದು ಹೇಳಿದೆ. "ಶಾಲೆಗಳನ್ನು ಮುಚ್ಚುವುದು ಕೊನೆಯ ಆಯ್ಕೆಯಾಗಿದೆ. ಅಗತ್ಯವಿದ್ದರೆ ಭಾಗಶಃವಾಗಿ ಶಾಲೆಗಳನ್ನು ಮುಚ್ಚಲಾಗುವುದು," ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೇಶದಲ್ಲಿ ಒಂದೇ ದಿನ 975 ಮಂದಿಗೆ ಕೊವಿಡ್:
ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಹೊಸ ರೂಪಾಂತರಿ ಎಕ್ಸ್ಇ ತಳಿಯ ಭೀತಿ ಹೆಚ್ಚಾಗಿದೆ. ಇದರ ಮಧ್ಯೆ ದೇಶದಲ್ಲಿ ಮತ್ತೊಮ್ಮೆ ಸೋಂಕಿತ ಪ್ರಕರಣಗಳ ಸಂಖ್ಯೆ ಒಂದು ಸಾವಿರಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 975 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 4 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 796 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,040,947ಕ್ಕೆ ಏರಿಕೆಯಾಗಿದೆ. ಈ ಪೈಕಿ 42,507,834 ಸೋಂಕಿತರು ಗುಣಮುಖರಾಗಿದ್ದರೆ, 521,776 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 11,337 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.