ಅರಮನೆಯಲ್ಲಿ ಸರಸ್ವತಿ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು, ಅಕ್ಟೋಬರ್. 14 : ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಇಂದು ಭಾನುವಾರ ಸರಸ್ವತಿ ಪೂಜೆ ಸಲ್ಲಿಸಿದರು.
ದಸರಾ ಮಹೋತ್ಸವದ ಅಂಗವಾಗಿ ಖಾಸಗಿ ದರ್ಬಾರ್ ನಡೆಸುತ್ತಿರುವ ಒಡೆಯರ್ ಸಾಂಪ್ರದಾಯಿಕ ಉಡುಪು ಧರಿಸಿ, ಅರಮನೆಯ ಕನ್ನಡಿ ತೊಟ್ಟಿ ಆವರಣದಲ್ಲಿ ಸರಸ್ವತಿ ಪೂಜೆಯನ್ನು ಸಂಪ್ರದಾಯದಂತೆ ಭಕ್ತಿ ಭಾವದಿಂದ ನೆರವೇರಿಸಿದರು.
ನವರಾತ್ರಿ ಅಂಗವಾಗಿ ರಾಜವಂಶಸ್ಥರಿಂದ ಅರಮನೆಯಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ಪ್ರತಿ ವರ್ಷ ನಡೆಯುತ್ತಿವೆ. ಕಾಳಿ, ಲಕ್ಷ್ಮಿ, ಸರಸ್ವತಿ ಈ ಮೂರು ರೂಪಗಳಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ.

ಇಂದು ಬೆಳಗ್ಗೆ 10:15 ರಿಂದ 10:45 ರವರೆಗೆ ಸಲ್ಲುವ ಶುಭಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಭಾವಚಿತ್ರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ರಾಜವಂಶಸ್ಥರಿಂದ ಪ್ರತಿ ದೇವಿಗೂ ಮೂರು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ.
ಅದೇ ರೀತಿ ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಸಲ್ಲಿಸಲಾಯಿತು. ಮಹಾರಾಜರ ಆಶ್ರಯದಲ್ಲಿರುವ ಓಲೆ ಗರಿಗಳು, ಧಾರ್ಮಿಕ ಗ್ರಂಥಗಳಿಗೆ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತದೆ. ತಾಮಸ ಶಕ್ತಿ ನಿರ್ನಾಮ ಮಾಡಲಿ ಎಂದು ಕಾಳಿ ಆರಾಧಿಸಿದರೆ, ಭಾಗ್ಯ ಅಥವಾ ಐಶ್ವರ್ಯ ಕೊಡಲಿ ಎಂದು ಲಕ್ಷ್ಮಿಯನ್ನು ಹಾಗೂ ಜ್ಞಾನ ಕರುಣಿಸಲಿ ಎಂದು ಸರಸ್ವತಿಯನ್ನು ಪೂಜಿಸುವುದು ವಾಡಿಕೆ ಆಗಿದೆ.

ಸರಸ್ವತಿ ಪೂಜೆ ಸಲ್ಲಿಕೆ ವೇಳೆ ಆಗಮಿಕರು, ಅರಮನೆ ಸಿಬ್ಬಂದಿ ಸಮವಸ್ತ್ರದಲ್ಲಿ ನೆರೆದಿದ್ದರು.












Click it and Unblock the Notifications