ಪಾರಂಪರಿಕ ಕಟ್ಟಡದ ಬಳಿ ಪಾರ್ಕಿಂಗ್ ಗೆ ಯದುವೀರ್ ಆಕ್ಷೇಪ
ಮೈಸೂರು, ಜೂನ್ 29: ಮೈಸೂರಿನ ಪ್ರತಿಷ್ಠಿತ ನಂಜರಾಜ ಬಹದ್ದೂರ್ ಛತ್ರದ ಖಾಲಿ ಜಾಗದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಕುರಿತು ನೀಡಿರುವ ಸಲಹೆಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಧಕ್ಕೆಯಾಗಲಿದೆ. ಹೀಗೆ ಎಲ್ಲೆಡೆ ಪಾರ್ಕಿಂಗ್ ಸ್ಥಳ ನಿರ್ಮಾಣ ಮಾಡುತ್ತಾ ಹೋದರೆ ಮೈಸೂರನ್ನು ಸಾಂಸ್ಕೃತಿಕ ನಗರಿ ಮತ್ತು ಪಾರಂಪರಿಕ ನಗರಿ ಎಂದು ಕರೆಯುವುದರಲ್ಲಿ ಅರ್ಥವಿಲ್ಲ ಎಂದರು.
ಪಾರಂಪರಿಕ ಕಟ್ಟಡಗಳು ಬರೀ ಕಟ್ಟಡಗಳಲ್ಲ, ಅವು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಬಿಂಬಿಸುತ್ತವೆ. ಅವುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ವಾಹನ ನಿಲುಗಡೆಗೆ ಆಗುತ್ತಿರುವ ಸಮಸ್ಯೆ ದೂರ ಮಾಡಬೇಕು ನಿಜ. ಆದರೆ ಅದಕ್ಕಾಗಿ ಪಾರಂಪರಿಕತೆಯನ್ನು ಹಾಳು ಮಾಡುವುದು ಬೇಡ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಅಭಿವೃದ್ಧಿಯೊಂದಿಗೆ ನಮ್ಮ ಪರಂಪರೆ ಮತ್ತು ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು. ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮೈಸೂರು ಪಾರಂಪರಿಕ ನಗರಿ ಎಂದು ಹೆಸರು ಪಡೆದುಕೊಂಡಿದೆ. ಪಾರಂಪರಿಕ ಕಟ್ಟಡಗಳನ್ನು ಕೆಡವಿ ಹಾಕುವ ಬದಲು ಸಂರಕ್ಷಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ತಲೆಮಾರಿನ ಜನರು ಐತಿಹಾಸಿಕ ಕಟ್ಟಡಗಳನ್ನು ನೋಡುವ ಅವಕಾಶ ಕಳೆದುಕೊಳ್ಳುವರು ಎಂದಿದ್ದಾರೆ.












Click it and Unblock the Notifications