ಸೂತಕದ ನಡುವೆ ಎದ್ದಿದೆ ಒಡೆಯರ್ ಆಸ್ತಿ ಪ್ರಶ್ನೆ
ಮೈಸೂರು, ಡಿ.11 : ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಅಗಲಿಕೆಯಿಂದ ಸಾಂಸ್ಕೃತಿಕ ರಾಜಧಾನಿಯಲ್ಲಿ ಶೂನ್ಯ ಆವರಿಸಿದೆ. ಶ್ರೀಕಂಠದತ್ತ ಅವರ ನಿಧನದಿಂದಾಗಿ ಯದುಕುಲವಂಶಸ್ಥರ ಕೊನೆಯ ಕೊಂಡಿ ಕಳಚಿದ್ದಂತಾಗಿದೆ. ಇನ್ಮುಂದೆ ದಸರಾ ಖಾಸಗಿ ದರ್ಬಾರ್ ನಡೆಸುವವರು ಯಾರು? ಒಡೆಯರ್ ಮನೆತನ ಮುಂದಾಳತ್ವ ಯಾರು ವಹಿಸುತ್ತಾರೆ? ಅಗಾಧವಾದ ಆಸ್ತಿ ಪಾಸ್ತಿ ಸರ್ಕಾರದ ಪಾಲಾಗುತ್ತದೆಯೇ? ಎಂಬೆಲ್ಲ ಪ್ರಶ್ನೆಗಳತ್ತ ಬೆಳಕು ಚೆಲ್ಲಲು ಇಲ್ಲಿ ಯತ್ನಿಸಲಾಗಿದೆ.
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಬರೆದಿರುವ ಉಯಿಲು ಪತ್ರದಲ್ಲಿ ಏನಿದೆ? ಎಂಬ ಕುತೂಹಲದ ಜತೆಗೆ ಯದು ಕುಲದ ಸಮಸ್ತ ಆಸ್ತಿ ಬಗ್ಗೆ ಚರ್ಚೆ ಆರಂಭವಾಗಿದೆ. ಶ್ರೀಕಂಠದತ್ತ ಒಡೆಯರ್ ಅವರ ತಂದೆ ಜಯಚಾಮರಾಜ ಒಡೆಯರ್ ಅವರು ಯದು ಕುಲದ ಕೊನೆಯ ರಾಜ ಎನಿಸಿದವರು. ಭಾರತದ ಸ್ವಾತಂತ್ರ್ಯದ ನಂತರ ರಾಜ ಪದವಿ ಜತೆಗೆ ಮೈಸೂರು ರಾಜ್ಯ ಕರ್ನಾಟಕವಾಗಿ ಬದಲಾಯಿತು. ಸರ್ಕಾರ ಹಾಗೂ ಮೈಸೂರು ಅರಸದ ನಡುವೆ ಕಿತ್ತಾಟ ಕೂಡಾ ಹಿಂದಿನಿಂದ ನಡದೇ ಇದೆ.
1953ರ ಫೆಬ್ರವರಿ 20 ರಂದು ಜನಿಸಿದ ಶ್ರೀಕಂಠದತ್ತ ಒಡೆಯರ್ ಅವರು ಜಯಚಾಮರಾಜ ಒಡೆಯರ್ ಹಾಗೂ ತ್ರಿಪುರ ಸುಂದರ ಅಮ್ಮಣ್ಣಿ ಅವರ ಏಕೈಕ ಪುತ್ರರಾಗಿದ್ದರು. ಗಾಯತ್ರಿ ದೇವಿ, ಮೀನಾಕ್ಷಿ ದೇವಿ, ಕಾಮಾಕ್ಷಿ ದೇವಿ, ಇಂದ್ರಾಕ್ಷಿ ದೇವಿ ಹಾಗೂ ವಿಶಾಲಕ್ಷಿ ದೇವಿ ಇವರು ಶ್ರೀಕಂಠದತ್ತ ಅವರ ಸೋದರಿಯರು.
ಶ್ರೀಕಂಠದತ್ತ ಅವರಿಗೆ ಅವರಿಗೆ 1974ರಲ್ಲಿ ಮೈಸೂರು ಮಹಾರಾಜರಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. 1976ರ ಫೆಬ್ರವರಿ 2 ರಂದು ಪ್ರಮೋದಾ ದೇವಿ ಅವರನ್ನು ಮದುವೆಯಾಗಿದ್ದರು. ಆದರೆ, ಅಲುಮೇಲಮ್ಮನ ಶಾಪವೋ ಏನೋ ದಂಪತಿಗೆ ಮಕ್ಕಳಾಗಿರಲಿಲ್ಲ. ಶ್ರೀಕಂಠದತ್ತ ಅವರು ತಮ್ಮ ಜೀವಿತಾವಧಿಯಲ್ಲಿ ದತ್ತು ಸ್ವೀಕಾರ ಪರಂಪರೆ ಸುಳಿವು ಕೊಟ್ಟಿರಲಿಲ್ಲ. ಖಾಸಗಿ ದರ್ಬಾರ್, ಅರಮನೆ ಲೆಕ್ಕಾಚಾರ, ಅಂದಾಜು ಆಸ್ತಿ ವಿವರ ಸರ್ಕಾರ ಏಕೆ ಒಡೆಯರ್ ಹಿಂದೆ ಬಿದ್ದಿತ್ತು ಎಂಬುದರ ಬಗ್ಗೆ ಮುಂದೆ ಓದಿ
ಎಷ್ಟಿರಬಹುದು ಆಸ್ತಿ?
2004ರಲ್ಲಿ ಕಾಂಗ್ರೆಸ್ ಸಂಸದರಾಗಿದ್ದಾಗ ಅವರ ಘೋಷಿತ ಆಸ್ತಿ 1,522 ಕೋಟಿ ರು ಇತ್ತು. ಆದರೆ ಇದರಲ್ಲಿ ಅರಮನೆಗಳ ಲೆಕ್ಕ ವಾಹನಗಳ ವಿವರ ಕೈ ಬಿಡಲಾಗಿತ್ತು. 1996ರಲ್ಲಿ ಅಂದಿನ ಮುಖ್ಯಮಂತ್ರಿ ಜೆಎಚ್ ಪಟೇಲ್ ಅವರು ಶ್ರೀಕಂಠದತ್ತ ಒಡೆಯರ್ ಅವರಿಗೆ ನಿಮಗೆ ಬೇಕಾದರೆ ಕೇಳಿದ ಜಾಗದಲ್ಲಿ 60X40 ನಿವೇಶನ ನೀಡುತ್ತೇವೆ ಅರಮನೆ ಬಿಟ್ಟು ಬನ್ನಿ ಎಂದು ವಿವಾದಿತ ಹೇಳಿಕೆ ನೀಡಿದ್ದರು.
ಅಂದಿನಿಂದ ಮೈಸೂರು, ಬೆಂಗಳೂರು ಅರಮನೆ ಯಾರ ವಶಕ್ಕೆ ಸೇರಬೇಕು ಎಂಬ ವಿವಾದ ಜಾರಿಯಲ್ಲಿದೆ. ಭಾರತ ಸ್ವಾತಂತ್ರ್ಯ ನಂತರ ರಾಜ ಮಹಾರಾಜರ ಆಸ್ತಿಗಳು, ಕಟ್ಟಡಗಳನ್ನು ಸರ್ಕಾರ ವಶಪಡಿಸಿಕೊಂಡಿದ್ದರೂ ಮೈಸೂರು ಅರಸರ ಬಹುತೇಕ ಆಸ್ತಿ ಸರ್ಕಾರದ ಹಿಡಿತಕ್ಕೆ ಸಿಕ್ಕಿರಲಿಲ್ಲ. ಆಸ್ತಿ ವಶಕ್ಕೆ ಕಾನೂನಿನ ಅವಕಾಶವಿದೆ ಎಂದು ಸರ್ಕಾರ ವಾದಿಸುತ್ತಲೇ ಇದೆ.
ಸರ್ಕಾರ ವಶಕ್ಕೆ ಆಸ್ತಿ
ಮೈಸೂರು ಹಾಗೂ ಬೆಂಗಳೂರು ಅರಮನೆಯಲ್ಲಿ ಮೈಸೂರು ಒಡೆಯರ್ (ಶ್ರೀಕಂಠದತ್ತ) ಅವರು ಮೃತಪಡುವ ತನಕ ನೆಲೆಸಬಹುದು ನಂತರ ಸರ್ಕಾರದ ವಶಕ್ಕೆ ಅರಮನೆಗಳು ಬರಲಿವೆ.
ಸುಮಾರು 456 ಎಕರೆ ಬೆಂಗಳೂರು ಅರಮನೆ ಆಸ್ತಿಯನ್ನು ಶ್ರೀಕಂಠದತ್ತ ಅವರ ಸೋದರಿಯರಾದ ಮೀನಾಕ್ಷಿ, ಕಾಮಾಕ್ಷಿ, ಇಂದ್ರಾಕ್ಷಿ ಹಾಗೂ ವಿಶಾಲಕ್ಷಿ ಅವರಿಗೆ ಹಂಚಲಾಗಿದೆ. ತಲಾ 30 ಎಕರೆ ನಾಲ್ವರಿಗೆ ಸಲ್ಲುತ್ತದೆ. ಹಿರಿಯಕ್ಕ ಸಣ್ಣ ವಯಸ್ಸಿನಲ್ಲೇ ಮೃತಪಟ್ಟಿದ್ದಾರೆ. ಅವರ ಪುತ್ರ ಕಾಂತರಾಜೇ ಆರಸ್ ಅವರಿಗೆ ಪಟ್ಟ ಕಟ್ಟುವ ಸಾಧ್ಯತೆ ಇರುವುದರಿಂದ ಮತ್ತೊಮ್ಮೆ ಕಾನೂನು ಸಮರ ನಡೆಯಲಿದೆ.
1993ರಲ್ಲಿ ಬೆಂಗಳೂರು ಅರಮನೆಯ 20 ಮೀಟರ್ X 650 ಮೀಟರ್ಸ್ ಜಾಗ ಪಡೆಯಲು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಒಡೆಯರ್ ಒಪ್ಪಿಗೆ ಸಿಕ್ಕ ಮೇಲೆ ಸುಮಾರು 12 ಸಾವಿರ ಸಸಿಗಳನ್ನು ಅಲ್ಲಿ ನೆಡಲಾಗಿತ್ತು.
ಅಕಾಲಿಕ ಮರಣ
60 ವಸಂತಗಳನ್ನು ಕಂಡಿದ್ದ ಶ್ರೀಕಂಠದತ್ತ ಅವರ ಪೂರ್ವಿಕರಲ್ಲಿ ಅನೇಕ ರಾಜರು ಕೂಡಾ ಚಿಕ್ಕ ವಯಸ್ಸಿನಲ್ಲೆ ಮೃತಪಟ್ಟಿದ್ದಾರೆ. ಕಂಠೀರವ ನರಸಿಂಹರಾಜ ಒಡೆಯರ್ ಅವರ ಹೆಸರನ್ನೇ ಶ್ರೀಕಂಠದತ್ತ ಅವರಿಗೆ ನೀಡಲಾಗಿತ್ತು.
ಕಂಠೀರವ ಒಡೆಯರ್ ಅವರು 1940ರಲ್ಲಿ ತಮ್ಮ 51ನೇ ವಯಸ್ಸಿನಲ್ಲಿ ವಿಧಿವಶರಾದರು. ಶ್ರೀಕಂಠದತ್ತ ಒಡೆಯರ್ ಅವರ ತಂದೆ ಜಯಚಾಮರಾಜೇಂದ್ರ ಒಡೆಯರ್ ಅವರು 1974ರಲ್ಲಿ 55ನೇ ವರ್ಷಕ್ಕೆ ಮೃತರಾಗಿದ್ದರು. ಇವರ ಮಗಳು ಗಾಯತ್ರಿದೇವಿ (ಶ್ರೀಕಂಠದತ್ತ) ಕೂಡಾ ವೃದ್ದಾಪ್ಯಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ್ದರು.ಎಲ್ಲಾ ಕ್ಷೇತ್ರದಲ್ಲೂ ಆಸ್ತಿ ಇದೆ.
ಕ್ರಿಕೆಟ್ ಅಲ್ಲದೆ ಮೈಸೂರು ರೇಸ್ ಕ್ಲಬ್, ಬೆಂಗಳೂರು ಗಾಲ್ಫ್ ಕ್ಲಬ್, ಬೆಂಗಳೂರು ಟರ್ಫ್ ಕ್ಲಬ್, ದೆಹಲಿ ರೇಸ್ ಕ್ಲಬ್ ನ ಜತೆ ನಿರಂತರ ಸಹಯೋಗ ಹೊಂದಿದ್ದರು. ಹೀಗಾಗಿ ಕ್ಲಬ್ ಗಳಿಂದ ಬರುವ ಗೌರವ ಸಂಭಾವನೆ ಕೂಡಾ ಲೆಕ್ಕಕ್ಕೆ ಬರಲಿದೆ.
ಉದ್ಯಮಿಯಾಗಿ ಒಡೆಯರ್ ಹೂಡಿಕೆ ಸಂಸ್ಥೆ ಮೈಸೂರು ಅಂತಾರಾಷ್ಟ್ರೀಯ ಟ್ರಾವೆಲ್ ಏಜೆನ್ಸಿ, ಮಂಜುನಾಥ್ ಪ್ಯಾಕಿಂಗ್ ಅಂಡ್ ವರ್ಕ್ಸ್, ಗಾಯತ್ರಿ ಎಂಟರ್ ಪ್ರೈಸಸ್, ಸರಸ್ವತಿ ಎಂಟರ್ ಪ್ರೈಸಸ್ , ವೆಂಕಟೇಶ್ವರ ರಿಯಲ್ ಎಸ್ಟೇಟ್ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಹಾಗೂ ಚೇರ್ಮನ್ ಆಗಿದ್ದರು, ಇದಲ್ಲದೆ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದರು.
ಪರಂಪರೆ ಕಟ್ಟಡಗಳು
ಚಾಮುಂಡಿ ಬೆಟ್ಟ ಹತ್ತಿ ದುರ್ಬೀನು ಹಿಡಿದುಕೊಂಡು ನೋಡಿದಾಗ ಸಿಗುವ ಕಣ್ ಅಳೆತ ವಿಸ್ತಾರ ಭೂಮಿ ಎಲ್ಲವೂ ಒಡೆಯರ್ ಗೆ ಸೇರುತ್ತದೆ ಎಂಬ ಮಾತು ಸುಳ್ಳಲ್ಲ.
1861ರಲ್ಲಿ ಕೃಷ್ಣರಾಜ ಒಡೆಯರ್ III ಕಟ್ಟಿದ ಜಗನ್ಮೋಹನ ಪ್ಯಾಲೇಸ್, 1931ರಲ್ಲಿ ಕೃಷ್ಣರಾಜ ಒಡೆಯರ್ IV ಕಟ್ಟಿದ ಲಲಿತ್ ಮಹಲ್ ಪ್ಯಾಲೇಸ್, ಮುಮ್ಮುಡಿ ಕೃಷ್ಣ ರಾಜ ಒಡೆಯರ್ ಅವರು 1842ರಲ್ಲಿ ಕಟ್ಟಿದ ಬೇಸಿಗೆ ಅರಮನೆ/ಲೋಕರಂಜನ್ ಮಹಲ್, ರಾಜೇಂದ್ರ ವಿಲಾಸ್ ಅರಮನೆ(1938ರಲ್ಲಿ ನವೀಕರಣಗೊಂಡಿದೆ)
ನಜರಾಬಾದಿನ ಕೋಟೆ ಪೂರ್ವಕ್ಕಿರುವ ಕಾರಂಜಿ ಮನೆ ಚಾಮರಾಜೇಂದ್ರ ಒಡೆಯರ್ ಅವರ ಪುತ್ರಿಗೆ ನೀಡಲಾಗಿದೆ. ಇನ್ನಷ್ಟು ಕಟ್ಟಡಗಳ ವಿವರ ಮುಂದೆ ಓದಿ...
ಇನ್ನಷ್ಟು ಪರಂಪರೆ ಕಟ್ಟಡಗಳು
ಇಳವಾಲದ ರೆಸಿಡೆನ್ಸಿ ಬಂಗಲೆ- 1805-1825ರಲ್ಲಿ ನಿರ್ಮಾಣಗೊಂಡಿದ್ದು ಈಗ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಷ್ಯುವಲ್ ಆರ್ಟ್ಸ್ (CAVA) ಕೇಂದ್ರವಾಗಿದೆ.
ಗೊರ್ಡನ್ ಪಾರ್ಕ್ ಬಳಿಯ ಜಿಲ್ಲಾಧಿಕಾರಿ ಕಚೇರಿ, ಜಯಚಾಮರಾಜೇಂದ್ರ ತಾಂತ್ರಿಕ ಕೇಂದ್ರ, ಕ್ರಾಫರ್ಡ್ ಹಾಲ್, ರಂಗಾಚರಲು ಸ್ಮಾರಕ ಭವನ, ವಿಕ್ಟೋರಿಯ ಇನ್ಸ್ಟಿಟ್ಯೂಟ್, ಸಿಲ್ವರ್ ಜ್ಯೂಬಿಲಿ ಕ್ಲಾಕ್ ಟವರ್, ದೇವರಾಜ ಮಾರುಕಟ್ಟೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಚಾಮರಾಜೇಂದ್ರ, ಕೃಷ್ಣರಾಜ ಸರ್ಕಲ್, ಚಾಮರಾಜೇಂದ್ರ ಮೃಗಾಲಯ, ಕರ್ಜನ್ ಪಾರ್ಕ್ ಮುಂತಾದ ಕಟ್ಟಡಗಳು ಸೇರಿವೆ.