Sumalatha: ಪ್ರತಾಪ್ ಸಿಂಹ ಅಲ್ಲ.. ಯದುವೀರ್ ಅಲ್ಲ.. ಮೈಸೂರಿನಿಂದ ಕಣಕ್ಕಿಳಿಯುತ್ತಾರಾ ಸುಮಲತಾ? ಏನಿದು ಟ್ವಿಸ್ಟ್?
ಮೈಸೂರು, ಮಾರ್ಚ್ 12: ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಒಂದೊಂದು ಕ್ಷೇತ್ರದಲ್ಲಿಯೂ ಲೆಕ್ಕಾಚಾರಗಳು ಬದಲಾಗುತ್ತಿವೆ. ಇಷ್ಟು ದಿನ ಮಂಡ್ಯ ಇಂತಹ ಗೊಂದಲದಿಂದ ಸಕತ್ ಸುದ್ದಿಯಾಗುತ್ತಿತ್ತು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಹಾಲಿ ಸಂಸದೆ ಸುಮಲತಾ ಅವರಿಗೆ ಟಿಕೆಟ್ ಕೈ ತಪ್ಪುವ ಭಯವಿದೆ. ಇದೇ ಬೆನ್ನಲ್ಲೇ ಮೈಸೂರು ಕ್ಷೇತ್ರದಿಂದ ಅಚ್ಚರಿಯ ಬೆಳವಣಿಗೆಯೊಂದು ಸುದ್ದಿಯಾಗಿದೆ.
ಹೌದು.. ಮೈಸೂರು - ಕೊಗಡು ಕ್ಷೇತ್ರಗಳ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಭಯವಿದೆ. ಇದೇ ಕಾರಣಕ್ಕೆ ಪ್ರತಾಪ್ ಸಿಂಹ ಕೂಡ ಸಕತ್ ಆಕ್ಟಿವ್ ಆಗಿದ್ದು, ತಮ್ಮ ಕೆಲಸಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ ವಂಶಸ್ಥ ಯದಿವೀರ್ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ಕೊಡುತ್ತದೆ ಎಂಬ ವಿಚಾರ ಚರ್ಚೆಯಾಗುತ್ತಿತ್ತು. ಇವುಗಳ ನಡುವೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಿಗ್ ಟ್ವಿಸ್ಟ್ ನೀಡುವ ಹೇಳಿಕೆ ನೀಡಿದ್ದಾರೆ.

ಮಂಡ್ಯದಿಂದ ಸ್ಪರ್ಧಿಸ್ತಾರಾ ಸುಮಲತಾ ಅಂಬರೀಷ್!?
ಎಂಪಿ ಸುಮಲತಾ ಅಂಬರೀಷ್ ಅವರು ಮಂಡ್ಯ ಬಿಟ್ಟು ಕೊಡುವುದಿಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ಮಂಡ್ಯದಿಂದ ನಾನೇ ಕಣಕ್ಕೆ ಇಳಿಯುವುದು ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ, ಈ ಕ್ಷೇತ್ರ ಜೆಡಿಎಸ್ ಪಾಲಾಗುವುದನ್ನು ಯಾರು ಅಲ್ಲಗೆಳೆಯುತ್ತಿಲ್ಲ. ಹೀಗಾಗಿಯೇ ಅವರನ್ನು ಒಲಿಸಿಕೊಳ್ಳಲು ಬಿಜೆಪಿ ಅವರಿಗೆ ಮೈಸೂರು ಆಫರ್ ನೀಡಿದೆ ಎಂಬ ಸುದ್ದಿಯಿದೆ. ಇದಕ್ಕೆ ಅವರು ಕೂಡ ಸುಳಿವು ನೀಡಿದ್ದಾರೆ.
ಇತ್ತೀಚೆಗೆ ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿರುವ ಸಂಸದೆ ಸುಮಲತಾ ಅಂಬರೀಷ್, ತಮಗೆ ಮೈಸೂರು ಮತ್ತು ಬೆಂಗಳೂರು ಉತ್ತರದಿಂದ ನಿಲ್ಲುವಂತೆ ಬಿಜೆಪಿ ಆಫರ್ ನೀಡಿದೆ ಎಂಬುದನ್ನು ಹೇಳಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಆಫರ್ ನೀಡಿದ್ದಾರೆ ಎಂದು ಹೇಳಿವ ಮೂಲಕ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಮತ್ತೊಬ್ಬ ಸ್ಪರ್ಧಿ ತಾನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಸುಮಲತಾ ಅವರಿಗೆ ಮಂಡ್ಯದಿಂದಲೇ ಟಿಕೆಟ್ ಸಿಗುತ್ತದೆಯೇ ಇಲ್ಲವೆ ಎಂಬುದು ಇನ್ನು ನಿರ್ಧಾರವಾಗಿಲ್ಲ. ಇದರ ಬೆನ್ನಲ್ಲೇ ಅವರನ್ನು ಬಿಜೆಪಿ ಮೈಸೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಲು ಯೋಜಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಟಿಕೆಟ್ ನಿರೀಕ್ಷೆಯಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಮತ್ತೊಂದು ತಲೆ ನೋವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬಿಜೆಪಿ ಸರ್ವೆ ನಡೆಸಿದ್ದು ಸುಮಲತಾಗಾಗಿಯೇ?
ಇನ್ನು, ಮೈಸೂರು-ಕೊಡಗು ಲೋಕಸಭಾ ಟಿಕೆಟ್ ಪ್ರತಾಪ್ ಸಿಂಹ ಅಥವಾ ಯದುವೀರ್ ಒಡೆಯರ್ ಇಬ್ಬರಲ್ಲಿ ಯಾರಾ ಪಾಲಾಗುತ್ತದೆ ಎನ್ನುವ ಚರ್ಚೆಗಳ ಮಧ್ಯೆಯೇ ಬಿಜೆಪಿ ಕ್ಷೇತ್ರದಲ್ಲಿ ಸರ್ವೆ ನಡೆಸಿರುವುದು ಬಹಿರಂಗವಾಗಿದೆ. ಅಅದು ಕೂಡ ಮೂರನೇ ಅಭ್ಯರ್ಥಿ ಬಗ್ಗೆ. ಈ ಅಭ್ಯರ್ಥಿ ಸುಮಲತಾ ಆಗಿರಬಹುದು ಎಂಬ ಗುಸುಗುಸು ಈಗ ಆರಂಭವಾಗಿದೆ.
ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಿಜೆಪಿ ಹೈಕಮಾಂಡ್ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹ, ರಾಜ ವಂಶಸ್ಥ ಯದುವೀರ್ ಒಡೆಯರ್ ಹೊರತು ಪಡಿಸಿ, ಮೂರು ದಿನಗಳ ಹಿಂದೆ ಮತ್ತೊಬ್ಬ ಅಭ್ಯರ್ಥಿ ಬಗ್ಗೆ ಸರ್ವೇ ಮಾಡಿಸಿ ಅಮಿತ್ ಶಾ ವರದಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ, ಸುಮಲತಾ ಅಂಬರೀಷ್ ಕೂಡ ತನಗೆ ಆಫರ್ ಬಂದಿರುವ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಸರ್ಚೆ ಮಾಡಿಸಿರುವುದು ಸುಮಲತಾ ಅವರಿಗಾಗಿಯೇ ಎನ್ನುವ ವದಂತಿಯಿದೆ. ಆದರೂ ಇನ್ನೇರಡು ದಿನಗಳಲ್ಲಿ ಈ ಊಹಾಪೂಹಗಳಿಗೆ ತೆರೆ ಬೀಳಲಿದೆ.











Click it and Unblock the Notifications