Get Updates
Get notified of breaking news, exclusive insights, and must-see stories!

ಮೈಸೂರು ಅರಸರು ಚಾಮುಂಡೇಶ್ವರಿಯನ್ನೇಕೆ ಪೂಜಿಸುತ್ತಾರೆ ?

Recommended Video

      Mysore Dasara 2018 : ಮೈಸೂರಿನ ಅರಸರು ತಾಯಿ ಚಾಮುಂಡೇಶ್ವರಿಯನ್ನ ಯಾಕೆ ಪೂಜಿಸುತ್ತಾರೆ? | Oneindia kannada

      ಸಾಂಸ್ಕೃತಿಕ ರಾಜಧಾನಿ ಮೈಸೂರಿನೊಂದಿಗೆ ಥಳುಕು ಹಾಕಿಕೊಂಡಿರುವ ಮತ್ತೊಂದು ಹೆಸರು ಚಾಮುಂಡಿಬೆಟ್ಟ. ನಾಡ ಅಧಿದೇವತೆ ಎಂದೇ ನಾಮಾಂಕಿತಳಾದ ಚಾಮುಂಡಿ ದೇವಿಯನ್ನು ಮೊದಲಿನಿಂದಲೂ ಮೈಸೂರು ಅರಸರು ತಮ್ಮ ವಂಶಪರಂಪರಾಗತವಾಗಿ ಪೂಜಿಸಿಕೊಂಡು ಬಂದಿದ್ದಾರೆ.

      ಶಕ್ತಿದೇವತೆ ಎಂದೇ ಖ್ಯಾತಳಾದ ಚಾಮುಂಡಿ ಮಾತೆ ನೆಲೆಸಿರುವುದು ನಗರದ ಹೊರವಲಯದಲ್ಲಿ ಪೂರ್ವಪಶ್ಚಿಮವಾಗಿ ಹಬ್ಬಿ ನಿಂತಿರುವ ಹಚ್ಚ ಹಸುರಿನ ಗಿರಿಶ್ರೇಣಿಯೇ ಚಾಮುಂಡಿಬೆಟ್ಟದಲ್ಲಿ. ಸಮುದ್ರಮಟ್ಟದಿಂದ ಸುಮಾರು 3,489 ಅಡಿ ಎತ್ತರದಲ್ಲಿರುವ ಈ ಬೆಟ್ಟದ ಮೇಲೆ ದೇವಸ್ಥಾನವಿದೆ.

      ಮೈಸೂರಿನ ಹೊರ ವಲಯದಲ್ಲಿದ್ದ ಆದರೆ ಈಗ ಮೈಸೂರು ನಗರದ ಭಾಗವೇ ಆಗಿರುವ ಚಾಮುಂಡಿ ಬೆಟ್ಟ 10ನೇ ಶತಮಾನದಲ್ಲೇ ಪುಣ್ಯಕ್ಷೇತ್ರವಾಗಿ ಖ್ಯಾತಿ ಪಡೆದಿತ್ತು ಎಂದು ಇತಿಹಾಸ ಹೇಳುತ್ತದೆ.

      ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿರುವ ಮಹಿಷಾಸುರ ಮರ್ದಿನಿಯನ್ನು ಮೈಸೂರು ಅರಸರು ಬೆಟ್ಟದ ತಾಯಿ, ಚಾಮುಂಡೇಶ್ವರಿ ಎಂದು ಕರೆದು, ತಮ್ಮ ಕುಲದೇವತೆಯಾಗಿ ಸ್ವೀಕರಿಸಿ, ಪೂಜಿಸಿದ ಕಾರಣ ಚಾಮುಂಡೇಶ್ವರಿಗೆ ನಾಡ ದೇವಿ ಎಂದೂ ಕರೆಯುತ್ತಾರೆ. ಹೀಗಾಗೇ ನಾಡಹಬ್ಬ ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಮೊದಲ ಪೂಜೆ ನಡೆಯುವುದೇ ಬೆಟ್ಟದಲ್ಲಿ. ಇಂದಿಗೂ 10 ದಿನಗಳ ದಸರಾ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರಕುವುದೇ ಬೆಟ್ಟದ ತಾಯಿಯ ಪೂಜೆಯೊಂದಿಗೆ.

      ದೇವಿ ಮಹಾತ್ಮೆ ಪುರಾಣದ ಪ್ರಮುಖ ದೇವತೆ ಚಾಮುಂಡೇಶ್ವರಿ

      ದೇವಿ ಮಹಾತ್ಮೆ ಪುರಾಣದ ಪ್ರಮುಖ ದೇವತೆ ಚಾಮುಂಡೇಶ್ವರಿ

      ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, ದೇವಿ ಮಹಾತ್ಮೆ ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂದು ಹೇಳಲಾಗುತ್ತದೆ. ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟ ವೆಂಬ ಹೆಸರು ಬಂದಿದೆ.

      ಹಿಂದೆ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನವೆಂಬ ದೊಡ್ಡ ದೇವಸ್ಥಾನವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿದುಬರುತ್ತದೆ. 1799 ರಲ್ಲಿ ಅಧಿಕಾರಕ್ಕೆ ಬಂದ ಮೈಸೂರು ಅರಸರು ಈ ದೇವಿ ಆರಾಧಕರಾಗಿದ್ದು, ಶ್ರಧ್ದಾ ಭಕ್ತಿಯಿಂದ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ. ಹಾಗೂ ಹೆಚ್ಚಿನ ಮಹತ್ವ ತಂದಿದ್ದಾರೆ.

      ಚಾಮುಂಡಿ ಬೆಟ್ಟಕ್ಕೆ ವಿಜಯನಗರ ಅರಸರ ಕೊಡುಗೆ

      ಚಾಮುಂಡಿ ಬೆಟ್ಟಕ್ಕೆ ವಿಜಯನಗರ ಅರಸರ ಕೊಡುಗೆ

      ಚಾಮುಂಡಿಬೆಟ್ಟ ಚಾರಿತ್ರಿಕ ಹಿನ್ನಲೆಯಲ್ಲಿ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆಯಿದೆ. ಕ್ರಿ.ಶ. 1573 ರಲ್ಲಿ ಚಾಮರಾಜ ಒಡೆಯರು ದೇವಿಯನ್ನು ಪೂಜಿಸಲು ಹೋಗುತ್ತಿದ್ದಾಗ ಅವರಿಗೆ ಸಿಡಿಲು ಬಡಿದು ಅವರ ತಲೆಯ ಕೂದಲೆಲ್ಲಾ ಉದುರಿ ಹೋದವೆಂದು ಇತಿಹಾಸ ಹೇಳುತ್ತದೆ.

      ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ ಗೋಪುರ ಮತ್ತು ಗರ್ಭಗುಡಿಯ ಮೇಲೆ ವಿಮಾನ' ಶಿಖರಗಳಿವೆ. ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶಿಖರದ ಮೇಲೆ ಏಳು ಚಿನ್ನದ ಲೇಪಿತ ಕಲಶಗಳಿವೆ.

      ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ

      ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ

      ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ.

      1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು. 'ಸಿಂಹವಾಹನ' ಒಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು. 'ಸಿಂಹ ವಾಹನ' ವನ್ನು ರಥೋತ್ಸವ ಸಂಧರ್ಭದಲ್ಲಿ ಬಳಸಲಾಗುತ್ತಿದ್ದು ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ.ಯದುಕುಲದ ದೇವತೆಯಾಗಿ ಬೆಳೆದು ಬಂದಿರುವ ಶ್ರೀ ಚಾಮುಂಡೇಶ್ವರಿಗೆ ಮೈಸೂರಿನ ಮಹಾರಾಜರುಗಳು ಹಲವಾರು ಬೆಲೆಬಾಳುವ ಹಾಗೂ ಅಪರೂಪವಾದ ಕಾಣಿಕೆಗಳನ್ನು ಶ್ರಧ್ಧಾಭಕ್ತಿಯಿಂದ ಒಪ್ಪಿಸಿದ್ದಾರೆ. ಈ ಶಕ್ತಿ ದೇವತೆಗೆ ಮಾನವ ಮತ್ತು ಪ್ರಾಣಿ ಬಲಿಯನ್ನು ಹಿಂದೆ ಕೊಡಲಾಗುತ್ತಿತ್ತು. ಆದರೆ 18ನೇ ಶತಮಾನದಲ್ಲಿ ಅದಕ್ಕೆ ಕಡಿವಾಣ ಬಿತ್ತು. ಈಗೇನಿದ್ದರೂ ಫಲಪುಷ್ಪಗಳ ಅರ್ಚನೆ, ಹಣ್ಣು ಹೂವು ಸಮರ್ಪಣೆ ಮಾತ್ರ ಮಾಡಲಾಗುತ್ತದೆ.
      ದೇವರಾಜ ಒಡೆಯರ್ ಕಾಲದಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ

      ದೇವರಾಜ ಒಡೆಯರ್ ಕಾಲದಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ

      ಮೈಸೂರು ಅರಸು ಮನೆತನದಲ್ಲಿ ಒಬ್ಬರಾದ ದೊಡ್ಡ ದೇವರಾಜ ಒಡೆಯರ ಕಾಲದಲ್ಲಿ ಮೈಸೂರು ಚಾಮುಂಡಿ ಬೆಟ್ಟ ಅಭಿವೃದ್ಧಿಹೊಂದಿದ ಬಗ್ಗೆ ಉಲ್ಲೇಖಗಳಿವೆ. ಪುರಜನರು, ಯಾತ್ರಿಕರು ಬೆಟ್ಟದ ತಾಯಿಯ ದರ್ಶನ ಪಡೆಯಲು ಅನುಕೂಲವಾಗಲೆಂದೇ ದೊಡ್ಡ ದೇವರಾಜ ಒಡೆಯರ್ ಅವರು ಚಾಮುಂಡಿ ಬೆಟ್ಟಕ್ಕೆ ಒಂದು ಸಾವಿರ ಮೆಟ್ಟಲುಗಳನ್ನು ಕಟ್ಟಿಸಿದರು. ಜೊತೆಗೆ ತಾವು ಬೆಟ್ಟವೇರಲು ಅನುಕೂಲವಾಗುವಂತೆ ಮೆಟ್ಟಿಲ ಪಕ್ಕದಲ್ಲೇ ಕುದುರೆ ಸವಾರಿ ದಾರಿಯನ್ನೂ ಮಾಡಿಸಿದರು.

      ತರುವಾಯ ಇಲ್ಲಿದ್ದ ಹಳೆಯ ದೇವಾಲಯವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನವೀಕರಿಸಿ ಇದರ ಮಹಾದ್ವಾರಕ್ಕೆ ಒಂದು ಸುಂದರವಾದ ಏಳಂತಸ್ತಿನ ಗೋಪುರವನ್ನು ನಿರ್ಮಿಸಲಾಯಿತು.ದೇವಾಲಯ ಇವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿತು.

      ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರ ಮಾಲಿಕ್

      ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರ ಮಾಲಿಕ್

      ಇನ್ನು ಚಾಮುಂಡಿಬೆಟ್ಟದಲ್ಲಿರುವ ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಹನವೇ ಮೊದಲಾದ ಹಲವು ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಬೆಲೆಬಾಳುವ ಆಭರಣಗಳನ್ನು ರಾಜಮನೆತನದವರು ತಾಯಿ ಚಾಮುಂಡಿಗೆ ಸಮರ್ಪಿಸಿದ್ದಾರೆ. ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಇವರ ಪತ್ನಿಯರಾದ ದೇವಾಜಮ್ಮಣ್ಣಿ, ಚೆಲುವಾ ಜಮ್ಮಣ್ಣಿ ಮತ್ತು ಲಿಂಗಾಜಮ್ಮಣ್ಣಿಯವರು ಉದಾರವಾಗಿ ಕಾಣಿಕೆ ನೀಡಿ ದೇವಾಲಯ ನವೀಕರಿಸಿರುವ ಕಾರಣ ಅವರ ಭಕ್ತವಿಗ್ರಹಗಳನ್ನೂ ಇಲ್ಲಿ ಕಾಣಬಹುದಾಗಿದೆ.

      12 ಅಡಿ ಎತ್ತರದ ಮಹಿಷಾಸುರನ ಪ್ರತಿಮೆ

      12 ಅಡಿ ಎತ್ತರದ ಮಹಿಷಾಸುರನ ಪ್ರತಿಮೆ

      ಇನ್ನು ಬೆಟ್ಟದ ಮೇಲೆ ಇರುವ ಮತ್ತೊಂದು ಪ್ರಧಾನ ಆಕರ್ಷಣೆ 12 ಅಡಿ ಎತ್ತರದ ಮಹಿಷಾಸುರನ ಬೃಹತ್ ಪ್ರತಿಮೆ. ದುಷ್ಟ ಮಹಿಷಾಸುರನಿಗೂ ಇಲ್ಲಿ ಪ್ರವಾಸಿಗರು ಪ್ರಾಶಸ್ತ್ಯ ಕೊಡುತ್ತಾರೆ. ಬೆಟ್ಟಕ್ಕೆ ಹೋದವರು ಬಣ್ಣ ಬಣ್ಣದ ಆಕರ್ಷಕ ಪ್ರತಿಮೆಯ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳದೆ ಬರುವುದೇ ಇಲ್ಲ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+