ಬಿಜೆಪಿ ಹೇಳಿದಂತೆ ಯಾರ ಆದಾಯ ಡಬಲ್ ಆಗಿದೆ?: ಡಿಕೆಶಿ
ಮೈಸೂರು ಜನವರಿ 3: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವ ಮುನ್ನ ಒಂದು ಆಶ್ವಾಸನೆ ನೀಡಿದ್ದರು. ನಮ್ಮೆಲ್ಲರ ಆದಾಯವನ್ನು ಡಬಲ್ ಮಾಡುತ್ತೇವೆ ಎಂದಿದ್ದರು. ಯಾರ ಆದಾಯ ಡಬಲ್ ಆಗಿದೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ಮೈಸೂರಿನಲ್ಲಿ ಜನಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಭಕ್ತ ಹಾಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳವೇ ದೇವಾಲಯ. ಕಾಂಗ್ರೆಸ್ ಕಾರ್ಯಕರ್ತರ ನೋವು, ಸಂಕಟ, ನಲಿವು ವಿಚಾರಿಸುವ ಪವಿತ್ರವಾದ ಜಾಗ ಕಾಂಗ್ರೆಸ್ ಕಚೇರಿಯೇ ನಮ್ಮ ಪಾಲಿನ ದೇವಾಲಯ. ನಿನ್ನೆ ನಾನು, ಸಿದ್ದರಾಮಯ್ಯನವರು ಹಾಗೂ ಧೃವನಾರಾಯಣ್ ಅವರು ಚಾಮರಾಜನಗರಕ್ಕೆ ಹೋಗಿ ಇದೇ ರೀತಿ ದೊಡ್ಡ ಕಾರ್ಯಕ್ರಮ ಮಾಡಲಾಯಿತು. ಆ ಒಗ್ಗಟ್ಟಿನ ಪ್ರದರ್ಶನವೇ ನಮ್ಮ ಶಕ್ತಿ. ಅಲ್ಲಿ ಎಲ್ಲರೂ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ನೀವು ಮೈಸೂರು ಜಿಲ್ಲೆಯ ಎಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೀರಿ ಎಂಬುದನ್ನು ನಿಮಗೇ ಬಿಡುತ್ತೇವೆ ಎಂದಿದ್ದಾರೆ.
Koo App
ಜೊತೆಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವ ಮುನ್ನ ಒಂದು ಆಶ್ವಾಸನೆ ನೀಡಿದ್ದರು. ನಮ್ಮೆಲ್ಲರ ಆದಾಯವನ್ನು ಡಬಲ್ ಮಾಡುತ್ತೇವೆ ಎಂದಿದ್ದರು. ಯಾರ ಆದಾಯ ಡಬಲ್ ಆಗಿದೆ? ಎಂದು ಪ್ರಶ್ನೆ ಮಾಡಿದರು. ಅದರ ಬದಲು ಕೇಂದ್ರ ಸರ್ಕಾರ ಕರಾಳ ಕಾಯ್ದೆಗಳನ್ನು ಜಾರಿಗೆ ತಂತು. ಅದರ ವಿರುದ್ಧ ರೈತರು ದೆಹಲಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ಹೋರಾಡಿದರು. ಗಾಂಧೀಜಿ ಅವರು ಕೊಟ್ಟ ಮಾರ್ಗದರ್ಶನ ಪಾಲಿಸಿ ಒಂದು ವರ್ಷ ಚಳಿ, ಮಳೆ, ಬಿಸಿಲಿನಲ್ಲಿ ಸತ್ಯಾಗ್ರಹ ಮಾಡಿದರು. ಅವರಿಗೆ ಯಾವುದೇ ಸರ್ಕಾರ ಬೆಂಬಲ ನೀಡಲಿಲ್ಲ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಪಂಜಾಬ್ ನಲ್ಲಿ ನಿಮಗೆ ಯಾವ ರೀತಿಯ ಸಹಾಯ ಬೇಕು ಎಂದು ಕೇಳಿದಾಗ, ನಿಮ್ಮ ಬೆಂಬಲ ಸಾಕು. ಉಳಿದಂತೆ ಯಾವುದೇ ನೆರವು ಬೇಡ ಎಂದರು.
ದೆಹಲಿಯ ಈ ಹೋರಾಟದಲ್ಲಿ 700 ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಮುಂದಾಳತ್ವದಲ್ಲಿ ರೈತರ ಪರವಾಗಿ ಸಂಸತ್ತಿನಲ್ಲಿ ಹೋರಾಟ ಮಾಡಲಾಯಿತು. ರೈತರ ಹೋರಾಟಕ್ಕೆ ಮಣಿದ ಪ್ರಧಾನಿಗಳು ಮೂರು ಕಾಯ್ದೆಗಳನ್ನು ಹಿಂಪಡೆಯುತ್ತೇನೆ, ನನ್ನನ್ನು ಕ್ಷಮಿಸಿ ಎಂದು ಅನ್ನದಾತನ ಮುಂದೆ ಬೇಡುವ ಪರಿಸ್ಥಿತಿ ಬಂತು ಎಂದು ಕುಟುಕಿದರು.
ಈಗ ಇಲ್ಲಿ ಈಗ ನಡೆಯುತ್ತಿರುವ ಹೋರಾಟ ಮೈಸೂರಿನಲ್ಲಿ ಹಿಂದೆ ಎಂದಿಗೂ ನಡೆದಿಲ್ಲ ಎಂದು ನಮ್ಮ ನಾಯಕರು ಹೇಳುತ್ತಿದ್ದರು. ಅದಕ್ಕೆ ನಿಮ್ಮ ಕಣ್ಣುಗಳೇ ಸಾಕ್ಷಿ. ದೆಹಲಿ ನಾಯಕರು ಜನ ಜಾಗೃತಿ ನಡೆಸಲು ಸೂಚನೆ ನೀಡಿದ್ದಾರೆ. ಕಳೆದ ತಿಂಗಳು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಈಗ ಇದನ್ನು ನಾವು ಮುಂದುವರಿಸಲಿದ್ದೇವೆ. ಇನ್ನು ಪಕ್ಷದ ಸದಸ್ಯತ್ವ ನೋಂದಣಿಯನ್ನು 12 ವರ್ಷಗಳ ನಂತರ ಪ್ರಾರಂಭಿಸಲಾಗಿದೆ. ಪ್ರತಿ ಬೂತ್ಗೆ ಇಬ್ಬರು ದಾಖಲುದಾರರನ್ನು ನೇಮಿಸುತ್ತೇವೆ. ಅವರಿಗೆ ಮಾತ್ರ ಸದಸ್ಯತ್ವ ಮಾಡಲು ಸಾಧ್ಯ. ಇದರಲ್ಲಿ ಪಕ್ಷಪಾತ ಮಾಡಿದರೆ ನಮ್ಮ ಗಮನಕ್ಕೆ ತನ್ನಿ. ಪ್ರತಿ ಬೂತ್ ನಲ್ಲಿ ಒಬ್ಬರು ಮಹಿಳೆ ಇರಬೇಕು. ಮಹಿಳೆಯರ ಜತೆ ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ಅವರು ಹೋರಾಟ ಮಾಡುತ್ತಿದ್ದಾರೆ. ಒಂದೊಂದು ಸಭೆಯಲ್ಲಿ 10 ಸಾವಿರ ಮಹಿಳೆಯರು ಭಾಗವಹಿಸುತ್ತಿದ್ದಾರೆ. ಹೆಣ್ಣು ಕುಟುಂಬದ ಕಣ್ಣು ಎಂಬಂತೆ ನಾವು ಅವರಿಗೆ ಆದ್ಯತೆ ನೀಡಬೇಕು.
ಪ್ರತಿ ಬೂತ್ ಗೆ ಒಬ್ಬರೇ ಅಧ್ಯಕ್ಷರಾಗಲು ಸಾಧ್ಯ. ನಾವು ಆಯ್ಕೆ ಮಾಡಿದವರು ಪದಾಧಿಕಾರಿಗಳಾಗಬಹುದು. ಹೆಚ್ಚು ಸದಸ್ಯತ್ವ ಮಾಡಿದವರಿಗೆ ಈ ಅವಕಾಶ. ಡಿ.ಕೆ. ಶಿವಕುಮಾರ್, ಧೃವನಾರಾಯಣ್, ಸಿದ್ದರಾಯಮಯ್ಯ ಅಥವಾ ಬೇರೆ ಯಾವುದೇ ನಾಯಕರು ಹೇಳಿದರೂ ನೇಮಿಸಲು ಸಾಧ್ಯವಿಲ್ಲ. ಪ್ರತಿ ಬೂತ್ ನಲ್ಲಿ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆಯನ್ನು ಆಯ್ಕೆ ಮಾಡಿ ಅವರನ್ನು ಡಿಜಿಟಲ್ ಯೂತ್ ರನ್ನಾಗಿ ನೇಮಕ ಮಾಡಬೇಕಿದೆ. ಅವರನ್ನು ದಾಖಲುದಾರರನ್ನಾಗಿ ಮಾಡಲಾಗುವುದು. ಇನ್ನು ಮೂರು ದಿನಗಳಲ್ಲಿ ಇವರ ಪಟ್ಟಿ ನೀಡಬೇಕು. ತಡ ಮಾಡಿದರೆ ನಾನೇ ಬೇರೆಯವರನ್ನು ನೇಮಕ ಮಾಡಬೇಕಾಗುತ್ತದೆ. ಅವರಿಗೆ ಮಾತ್ರ ನೋಂದಣಿ ಮಾಡುವ ಅಧಿಕಾರ ಇದೆ. ಇದಕ್ಕಾಗಿ ಸಮಿತಿ ರಚಿಸಲಾಗಿದೆ. ಸಿದ್ದರಾಮಯ್ಯನವರು, ಧೃವನಾರಾಯಣ್ ಅವರು ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಜನ ತಮ್ಮ ಬೂತ್ ನಲ್ಲಿ ಸದಸ್ಯತ್ವ ಪಡೆದಿದ್ದಾರೆ.
ಇನ್ನು ಮೇಕೆದಾಟು ಹೋರಾಟ. ಅದು ನಮ್ಮ ನೀರು ನಮ್ಮ ಹಕ್ಕು. ಈ ಯೋಜನೆ ಕೇವಲ ಕನಕಪುರದ ಯೋಜನೆಯಲ್ಲ. ಮೇಕೆದಾಟು ಸ್ಥಳದ ಒಂದು ಒಂದು ಭಾಗ ಮೈಸೂರಿನದ್ದಾಗಿದೆ. ಅಂದರೆ ಮೈಸೂರು ಭಾಗವಾಗಿದ್ದ ಚಾಮರಾಜನಗರದ್ದಾಗಿದೆ. ಮತ್ತೊಂದು ಭಾಗ ಬೆಂಗಳೂರಿನ ಭಾಗವಾಗಿದ್ದ ರಾಮನಗರ ಜಿಲ್ಲೆಯದ್ದಾಗಿದೆ. ಈ ಜಾಗದಲ್ಲಿ ಮೇಕೆಗಳು ಬೆಂಗಳೂರಿನಿಂದ ಮೈಸೂರು ಭಾಗಕ್ಕೆ ಹೋಗುತ್ತಿದ್ದವು ಎಂಬ ಕಾರಣಕ್ಕೆ ಈ ಪ್ರದೇಶಕ್ಕೆ ಮೇಕೆದಾಟು ಎಂಬ ಹೆಸರು ಬಂದಿದೆ.
ಈ ಯೋಜನೆ ಕಾವೇರಿ ಜಲಾನಯನ ಪ್ರದೇಶ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಈ ಹಿಂದೆ ಈ ಬಗ್ಗೆ ಚರ್ಚೆ ಆಗಿತ್ತಾದರೂ ಯಾರಿಗೆ ಎಷ್ಟು ನೀರು ಹಂಚಿಕೆ ಎಂಬ ತೀರ್ಮಾನವಾಗಿರಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಡಿಪಿಆರ್ ಮಾಡಲು ಆರಂಭಿಸಿದೆವು. ಮೈತ್ರಿ ಸರ್ಕಾರದ ಅವಧಿಯಲ್ಲಿ ಕೆಲವು ಮಾರ್ಗಸೂಚಿ ಮೂಲಕ ಅದು ವಾಪಸ್ ಬಂದ ನಂತರ ನಾವು ಅದರಲ್ಲಿ ಕೆಲವು ಬದಲಾವಣೆ ತಂದು ಮತ್ತೊಂದು ಡಿಪಿಆರ್ ಸಿದ್ಧಪಡಿಸಿ ಅದನ್ನು ಕಳುಹಿಸಿಕೊಟ್ಟೆವು. ಈ ಮಧ್ಯೆ ಸುಪ್ರೀಂ ಕೋರ್ಟ್, ಕುಡಿಯುವ ನೀರಿನ ಯಾವುದೇ ಯೋಜನೆಗೆ ಯಾವುದೇ ನಿರಾಕ್ಷೇಪಣೆ ಪತ್ರದ ಅಗತ್ಯವಿಲ್ಲ ಎಂದು ಹೇಳಿದೆ.
ಈ ಹೋರಾಟ ನಿಲ್ಲಿಸಲು ಕೊರೋನಾ ಕುಂಟು ನೆಪ ಹೇಳುತ್ತಿದ್ದಾರೆ. ಈ ಹೋರಾಟ ನಿಲ್ಲಿಸಲು ಎರಡು ಪಕ್ಷಗಳು ಪ್ರಯತ್ನಿಸುತ್ತಿವೆ. ಅಸೂಯೆಗೆ ಯಾವುದೇ ಮದ್ದಿಲ್ಲ. ಅವರಿಗೆ ಸಂಕಟ ಬಂದಿದ್ದು, ಕ್ಯಾತೆ ತೆಗೆಯುತ್ತಿದ್ದಾರೆ. ಈ ಕಾಂಗ್ರೆಸ್ ಇರುವವರೆಗೂ, ಈ ಕಾರ್ಯಕರ್ತರು ಬದುಕಿರುವವರೆಗೂ ಈ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಿಂದ ಮೊದಲ ದಿನ ಬರುತ್ತಾರೆ. ಎರಡನೇ ದಿನ ಮೈಸೂರು ಗ್ರಾಮಾಂತರದ 4 ಕ್ಷೇತ್ರ, ಮೂರನೇ ದಿನ ಮೈಸೂರು ನಗರ ಉಳಿದ ಕ್ಷೇತ್ರದ ಜನ, ನಾಲ್ಕನೇ ದಿನ ಹಾಸನದವರು, ಐದನೇ ದಿನ ಮಂಡ್ಯದವರು, ಆರನೇ ದಿನ ತುಮಕೂರಿನವರು ಭಾಗವಹಿಸಲಿದ್ದಾರೆ.
ಪ್ರತಿನಿತ್ಯ ಭಾಗವಹಿಸಲು ಇಚ್ಛಿಸುವವರು ಆನ್ಲೈನ್ನಲ್ಲಿ ನೋಂದಣಿ ಮಾಡಿ, ನಿಮಗೆ ಪ್ರಮಾಣಪತ್ರ ಹಾಗೂ ಊಟ ವಸತಿ ವ್ಯವಸ್ಥೆ ಮಾಡಲು ನೆರವಾಗುತ್ತದೆ. ನೀವು 10 ದಿನ ಬೇಕಾದರೂ ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಆದರೆ ನಿಮಗೆ ವ್ಯವಸ್ಥೆ ಮಾಡಲು ನೀವು ಮುಂಚಿತವಾಗಿ ತಿಳಿಸಬೇಕು. ನಿಮ್ಮ ತಾಲೂಕಿನ ಕಲಾವಿದರೊಂದಿಗೆ ಪಾದಯಾತ್ರೆಗೆ ಬರಬಹುದು. ಇತ್ತೀಚಿನ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಿದೆ. ಬೆಳಗಾವಿ ಹಾಗೂ ಮಂಡ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಇದಕ್ಕೆ ಕುಮಾರಣ್ಣ ಏನೆಲ್ಲಾ ಮಾತನಾಡುತ್ತಿದ್ದಾರೆ ಮಾತನಾಡಲಿ. ಅವರ ಮಾತು ನಮಗೆ ಆಶೀರ್ವಾದ ಎಂದರು.
ನೀವೆಲ್ಲ ಸೇರಿ ವಿಧಾನಸೌಧದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಈ ಹೋರಾಟಕ್ಕೆ ಎಲ್ಲ ಮಠಾಧಿಪತಿಗಳು, ಸಂಘ ಸಂಸ್ಥೆಗಳು, ವಾಣಿಜ್ಯ ಮಂಡಳಿ, ಕನ್ನಡಪರ ಸಂಘಟನೆ, ರೈತ ಸಂಘಟನೆಗಳಿಗೆ, ಕಲಾವಿದರಿಗೆ ಆಹ್ವಾನ ನೀಡಿದ್ದೇನೆ. ಇದು ರಾಜ್ಯದ ಜಲ, ಭಾಷೆ ವಿಚಾರದಲ್ಲಿ ಎಲ್ಲ ಒಟ್ಟಾಗಿ ಹೋರಾಟ ಮಾಡಿಕೊಂಡು ಬಂದಿದ್ದೂ, ಈಗಲೂ ಅದೇ ರೀತಿ ಹೋರಾಟ ಮಾಡುತ್ತಿದ್ದೇವೆ. ಸಿದ್ದರಾಮಯ್ಯನವರ ಮುಖಂಡತ್ವದಲ್ಲಿ ಇಲ್ಲಿ ಒಂದು ಕಾಂಗ್ರೆಸ್ ಭವನ ಕಟ್ಟಬೇಕು ಎಂದು ಮನವಿ ಮಾಡುತ್ತೇನೆ. ಕೆಪಿಸಿಸಿಯಿಂದ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಇದು ನಿಮ್ಮ ದೇವಾಲಯ. ಇದು ಆಗಬೇಕು ಎಂದರು.
Recommended Video