ಬೊಮ್ಮಾಯಿ ಸಂಪುಟ; ಮೈಸೂರು ಶಾಸಕರಿಗೆ ಸಿಗುತ್ತಾ ಸಚಿವ ಸ್ಥಾನ?
ಮೈಸೂರು, ಜುಲೈ 28; ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇದೀಗ ನೂತನ ಸಚಿವ ಸಂಪುಟ ರಚನೆ ಬಗ್ಗೆ ಕುತೂಹಲ ಮನೆ ಮಾಡಿದ್ದು, ಮೈಸೂರು ಭಾಗದ ಬಿಜೆಪಿ ಶಾಸಕರು ಸಹ ಬೊಮ್ಮಾಯಿ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆಬಿದ್ದಿದೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಹಲವು ಶಾಸಕರು ಸಚಿವರಾಗುವ ತವಕದಲ್ಲಿದ್ದಾರೆ.
ಮೈಸೂರು ಭಾಗದ ಶಾಸಕರಲ್ಲೂ ಸಹ ಬೊಮ್ಮಾಯಿ ಸಂಪುಟ ಸೇರುವ ಲೆಕ್ಕಾಚಾರ ಶುರುವಾಗಿದೆ. ಮೈಸೂರು ಭಾಗದ ನಾಲ್ವರು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಯಾರಿಗೆ ಅದೃಷ್ಟ ಕೈಹಿಡಿಯಲಿದೆ? ಎಂಬ ಕುತೂಹಲ ಮನೆಮಾಡಿದೆ. ಯಡಿಯೂರಪ್ಪ ಸಂಪುಟದಲ್ಲಿ ಮೈಸೂರು ಭಾಗದ ಯಾವ ಶಾಸಕರು ಸಹ ಸಚಿವರಾಗಿರಲಿಲ್ಲ.
ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮುಖ್ಯವಾಗಿ ಕೆ. ಆರ್. ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನಡುವೆ ಪೈಪೋಟಿ ಜೋರಾಗಿದೆ. ಮೊದಲ ಬಾರಿಗೆ ಶಾಸಕರಾಗಿರುವ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಹಾಗೂ ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಸಹ ಅದೃಷ್ಟ ಒಲಿದು ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಸಚಿವರಾಗ್ತಾರಾ ರಾಮದಾಸ್?
ಮೈಸೂರು ಭಾಗದ ಹಿರಿಯ ಬಿಜೆಪಿ ನಾಯಕರಾಗಿರುವ ರಾಮದಾಸ್ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲೇ ರಾಮದಾಸ್ ಸಚಿವರಾಗುವ ನಿರೀಕ್ಷೆ ಇತ್ತಾದರೂ, ಅದು ಕೈಗೂಡಲಿಲ್ಲ. ಹೀಗಾಗಿ ಇದೀಗ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ರಾಮದಾಸ್ ಸಚಿವರಾಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ರಾಮದಾಸ್ ಶಾಸಕರಾಗಿ ಮಾತ್ರವಲ್ಲದೇ ಯಡಿಯೂರಪ್ಪ ಹಾಗೂ ಸದಾನಂದಗೌಡ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಯಡಿಯೂರಪ್ಪ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಎಲ್ಲಾ ಕಾರಣದಿಂದ ಬೊಮ್ಮಾಯಿ ಅವಧಿಯಲ್ಲಿ ಶಾಸಕ ರಾಮದಾಸ್ಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.

ಸಂಪುಟ ಸೇರ್ತಾರಾ ವಿಶ್ವನಾಥ್?
ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವ ಬಗ್ಗೆ ದೊಡ್ಡಮಟ್ಟದ ನಿರೀಕ್ಷೆ ಹೊಂದಿದ್ದವರಲ್ಲಿ ಎಚ್. ವಿಶ್ವನಾಥ್ ಪ್ರಮುಖರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ವಿಶ್ವನಾಥ್, ಹುಣಸೂರು ಉಪ ಚುನಾವಣೆಯಲ್ಲಿ ಸೋತರೂ, ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡರೂ ಸಚಿವರಾಗುವ ಅವಕಾಶ ಮಾತ್ರ ಸಿಗಲಿಲ್ಲ. ಹೀಗಾಗಿ ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಅವರು, ನಾಯಕತ್ವ ಬದಲಾವಣೆ ವಿಚಾರದಲ್ಲೂ ಧ್ವನಿಗೂಡಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿದ್ದು, ಹೊಸ ಸಚಿವ ಸಂಪುಟ ರಚನೆಯಾಗಲಿದೆ. ಈ ಹೊಸ ಸಂಪುಟದಲ್ಲಿ ಮಂತ್ರಿಯಾಗುವ ನಿರೀಕ್ಷೆ ಹೊಂದಿರುವ ವಿಶ್ವನಾಥ್ ಇದಕ್ಕಾಗಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.

ಮಾತೇ ಮುಳ್ಳಾಗುತ್ತಾ?
ರಾಜಕೀಯದಲ್ಲಿ ತಮ್ಮದೇ ಅನುಭವ ಹೊಂದಿದ್ದರೂ ವಿಶ್ವನಾಥ್ ಸಚಿವರಾಗೋದು ಸುಲಭವಲ್ಲ. ರಾಜ್ಯದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡು, ಬಿಜೆಪಿ ಸರ್ಕಾರ ರಚನೆಯಲ್ಲಿ ವಿಶ್ವನಾಥ್ ಪಾತ್ರ ಹೆಚ್ಚಾಗಿದ್ದರೂ, ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಮೂಲಕ ಯಡಿಯೂರಪ್ಪ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ವಿಶ್ವನಾಥ್ಗೆ ಯಡಿಯೂರಪ್ಪ ವಿರುದ್ಧ ತಾವು ಆಡಿದ್ದ ಮಾತೇ ಮುಳ್ಳಾಗುತ್ತಾ? ಕಾದು ನೋಡಬೇಕು.
Recommended Video

ಹರ್ಷವರ್ಧನ್, ನಾಗೇಂದ್ರ
ಮೈಸೂರು ಭಾಗದಿಂದ ಮೊದಲ ಬಾರಿಗೆ ಶಾಸಕರಾಗಿರೋ ನಾಗೇಂದ್ರ ಹಾಗೂ ಹರ್ಷವರ್ಧನ್ ಸಚಿವರಾಗುವ ಯಾವುದೇ ನಿರೀಕ್ಷೆ ಇಲ್ಲ. ಅದರಲ್ಲೂ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ, ಶಾಸಕರಾಗಿ ಈಗಷ್ಟೇ ಅನುಭವ ಪಡೆಯುತ್ತಿರೋ ಹಿನ್ನಲೆಯಲ್ಲಿ ಮಂತ್ರಿಯಾಗುವ ಯಾವುದೇ ಅವಕಾಶವೂ ಅವರಿಗಿಲ್ಲ. ಆದರೆ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್, ಮಾವನ ವರ್ಚಸ್ಸಿನ ಲಾಭವಿದೆ. ಹೀಗಾಗಿ ಬಿಜೆಪಿ ವರಿಷ್ಠರೊಂದಿಗೆ ಉತ್ತಮ ಬಾಂಧವ್ಯ ಹೊಂದಿರೋ ಶ್ರೀನಿವಾಸ್ ಪ್ರಸಾದ್, ತಮ್ಮ ಪ್ರಾಬಲ್ಯ ಬಳಸಿಕೊಂಡು ಅಳಿಯನಿಗೆ ಮಂತ್ರಿಸ್ಥಾನ ಕೊಡಿಸುತ್ತಾರಾ? ಅನ್ನೋ ಕುತೂಹಲವಿದೆ.












Click it and Unblock the Notifications