ಒಕ್ಕಲಿಗ ಮತಗಳಿಂದ ಗೆದ್ದರೇ ಪ್ರತಾಪ್ ಸಿಂಹ?
ಮೈಸೂರು, ಮೇ 25 : ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಮತದಾರರ ಒಲವು ಪ್ರತಿಫಲನಗೊಂಡ ಬೆನ್ನಲ್ಲೇ ವಿವಿಧ ಆಯಾಮಗಳಲ್ಲಿ ಫಲಿತಾಂಶದ ವಿಶ್ಲೇಷಣೆಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಪ್ರತಾಪ್ ಸಿಂಹ ಗೆಲುವು ಇದೀಗ ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿದೆ. ಇನ್ನೊಂದೆಡೆ, ಸೂತಕದ ಛಾಯೆ ಆವರಿಸಿಕೊಂಡಿರುವ ಕಾಂಗ್ರೆಸ್ ವಲಯದಲ್ಲಿ ನಾವು ಎಡವಿದ್ದು ಎಲ್ಲಿ ಎಂಬ ಆತ್ಮಾವಲೋಕನ ನಡೆಯುತ್ತಿದೆ. ಮೈತ್ರಿ ಪಾಲುದಾರರಲ್ಲಿ ಪರಸ್ಪರ ದೂಷಣೆಯ ಧ್ವನಿಗಳೂ ಕೇಳಿಬರುತ್ತಿವೆ.
ಕಾಂಗ್ರೆಸ್ ವಲಯದಲ್ಲಿ ಜೆಡಿಎಸ್ ನವರು ಮೈತ್ರಿಧರ್ಮ ಪಾಲಿಸದೆ 'ವಿಶ್ವಾಸದ್ರೋಹ' ಎಸಗಿದ್ದಾರೆ ಎಂಬ ಮಾತುಗಳು ಒಂದೆಡೆ ವ್ಯಕ್ತವಾಗುತ್ತಿದ್ದರೆ, ಜೆಡಿಎಸ್ ಪಾಳಯದಲ್ಲಿ ಕಾಂಗ್ರೆಸ್ನವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸಿದುದರ ಪ್ರಭಾವ ಫಲಿತಾಂಶದಲ್ಲಿ ಗೋಚರವಾಗಿದೆ ಎಂಬ ಪ್ರತ್ಯಾರೋಪಗಳು ಹರಿದಾಡುತ್ತಿವೆ. ಎರಡು ಪಕ್ಷಗಳ ಬೆಂಬಲ ಹೊಂದಿದ್ದ ವಿಜಯ್ ಶಂಕರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರ ತೆರದಿ ಪ್ರಚಾರ ಕಾರ್ಯಕ್ಕಾಗಿ ಬಿರು ಬಿಸಿಲಿನಲ್ಲಿ ಮೂಲೆಮೂಲೆ ತಿರುಗಿ ಬೆವರು ಸುರಿದರು. ಆದರೆ ಅವರಿಗೆ ಯಾವ ಕ್ಷೇತ್ರದಲ್ಲಿ ಕೂಡ ಮತದಾರರು ಹೆಚ್ಚು ಮತ ನೀಡಿಲ್ಲ. ಇದು ಬದಲಾದ ಮತದಾರರ ಮನದ ಸೂಚ್ಯಂಕದಂತೆ ಕಾಣುತ್ತಿದೆ.

ಸುಳ್ಳಾದ ನಿರಾಯಾಸ ಗೆಲುವಿನ ನಿರೀಕ್ಷೆ
ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಟಕ್ಕೆ ಬಿದ್ದು ಪಡೆದುಕೊಂಡಿದ್ದ ಮೈಸೂರು - ಕೊಡಗು ಕ್ಷೇತ್ರದಲ್ಲಿ ವಿಜಯಶಂಕರ್ ಹೀನಾಯವಾಗಿ ಸೋಲನುಭವಿಸಿದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೂ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರತಾಪ್ ಸಿಂಹ ಗೆಲುವಿನ ಅಂತರ ಕಡಿಮೆಯಿತ್ತು. ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ನಿರಾಯಾಸವಾಗಿ ಗೆಲುವು ಪಡೆಯಬಹುದೆಂದು ಹೇಳಲಾಗುತ್ತಿತ್ತು. ಆದರೆ ಮೈತ್ರಿಯೇ ಮುಳುವಾಗಿದ್ದು, ಏಕ ಮನಸ್ಸಿನಿಂದ ಪ್ರಚಾರ ನಡೆಸದೇ ಇರುವುದು ಕಾರಣವಾಯಿತು.

ಕೊಡಗಿನಲ್ಲಿ ಹೆಚ್ಚಿದ ಬಿಜೆಪಿ ಒಲವು
ಗೆಲುವು ತಂದುಕೊಡಬೇಕಾಗಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವೇ ಮೈತ್ರಿ ಅಭ್ಯರ್ಥಿಗೆ ಮುಳುವಾಯಿತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೈ ಮತದಾರರು ಭಾರಿ ಸಂಖ್ಯೆಯಲ್ಲಿ ಮತ ಹಾಕಿದರೆ ಮೈತ್ರಿ ಅಭ್ಯರ್ಥಿಗೆ ಮಾತ್ರ ಗೆಲುವು ಸಾಧ್ಯ ಎಂಬ ವಿಶ್ಲೇಷಣೆ ಕೇಳಿಬಂದಿತ್ತು. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಸಚಿವ ಜಿ.ಟಿ. ದೇವೇಗೌಡ ಹಾಗೂ ಕಾಂಗ್ರೆಸ್ ಸಿದ್ದರಾಮಯ್ಯ ಹಿಡಿತ ಹೊಂದಿದ್ದಾರೆ. ಅಲ್ಲಿ ಬಿಜೆಪಿ ಅಷ್ಟಕ್ಕಷ್ಟೇ ಎಂಬ ಮಾತಿತ್ತು. ಅಲ್ಲಿ ಸಿದ್ದರಾಮಯ್ಯ ಹಾಗೂ ದೇವೇಗೌಡರ ಬೆಂಬಲಿಗರು ಒಂದಾಗದೇ ಇದ್ದದ್ದು ಸೋಲಿಗೆ ಕಾರಣವಾಯಿತು. ಈ ಬಾರಿ ಕೊಡಗಿನಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾಗಿದೆ. ಇದು ಕೂಡ ಭಾರೀ ಅಂತರದ ಗೆಲುವಿಗೆ ಕಾರಣವಾಗಿದೆ.

ಒಕ್ಕಲಿಗರ ಮತಗಳು ಬಿಜೆಪಿಗೆ
ಇನ್ನು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಮತ್ತೊಮ್ಮೆ ಸಾಬೀತಾಗಿದ್ದು, ಹಲವು ಸಮುದಾಯದ ಮತಗಳು ಹಂಚಿಹೋಗಿದ್ದರೆ ಒಕ್ಕಲಿಗ ಸಮುದಾಯದ ಬಹುತೇಕ ಮತಗಳು ಬಿಜೆಪಿ ಅಭ್ಯರ್ಥಿಯ ಪಾಲಾಗಿದೆ ಎನ್ನಲಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಕುರುಬ ಸಮಾಜಕ್ಕೆ ಸೇರಿದ ವಿಜಯಶಂಕರ್ ಅವರನ್ನು ಕಣಕ್ಕಿಳಿಸಿದರೆ, ಒಕ್ಕಲಿಗ ಸಮುದಾಯದ ಪ್ರತಾಪ್ ಸಿಂಹ ತಮ್ಮ ಸಮುದಾಯದ ಹೆಚ್ಚಿನ ಮತಗಳನ್ನು ಸೆಳೆದಿದ್ದಾರೆ ಎನ್ನಲಾಗಿದೆ.

ಗೆಲುವು ತಂದ ಬಿಜೆಪಿ ಸ್ಪಷ್ಟ ನಿಲುವು
ನಿರೀಕ್ಷೆಗೂ ಮೀರಿದ ಮೋದಿ ಅಲೆ, ಕಾರ್ಯಕರ್ತರ ಸಂಘಟಿತ ಪ್ರಯತ್ನ, ಗೊಂದಲವಿಲ್ಲದೆ ಅಭ್ಯರ್ಥಿಯ ಆಯ್ಕೆ, ಪಕ್ಷ ಮೀರಿ ಬಿದ್ದ ಮತಗಳು, ಮೈಸೂರಿನಲ್ಲಿ ನರೇಂದ್ರ ಮೋದಿ ಪ್ರಚಾರವೂ ಮೈತ್ರಿ ವಿರುದ್ಧ ಕಾಂಗ್ರೆಸ್ ಮತ ಕಳೆದುಕೊಳ್ಳಲು ಕಾರಣವಾಯಿತು. ವಿಜಯಶಂಕರ್ ಸೋಲಿಗೆ ಮೈತ್ರಿ ಒಪ್ಪದ ಜೆಡಿಎಸ್ ಕಾರ್ಯಕರ್ತರು, ಚುನಾವಣೆಗೆ ಒಂದೆರಡು ದಿನಗಳಿರುವಾಗ ಪ್ರಚಾರಕ್ಕೆ ಬಂದ ನಾಯಕರು, ಸಿದ್ದರಾಮಯ್ಯ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗದಿರುವುದು ಕಾರಣವಾಗಿದೆ.
ಸೋಲಿನ ಕಾರಣಗಳನ್ನು ಪತ್ತೆ ಮಾಡುವಾಗ ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಲಿಲ್ಲ ಎಂಬುದು ಢಾಳಾಗಿ ಗೋಚರಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಹಳೆಯ ವೈಷಮ್ಯ ಮರೆತು, ಒಂದಾಗಿ ಬೆರೆತು ಮನಪೂರ್ವಕವಾಗಿ ವಿಜಯ್ ಶಂಕರ್ ಅವರ ಪರ ಪ್ರಚಾರ ಮಾಡಿದ ದೃಶ್ಯಗಳು ಕಂಡಿದ್ದೇ ವಿರಳ.












Click it and Unblock the Notifications