ಹಾರಂಗಿ ನಾಲೆಗೆ ಮಾರುತಿ ವ್ಯಾನ್ ಉರುಳಿ ನಾಲ್ವರು ಜಲಸಮಾಧಿ
ಪಿರಿಯಾಪಟ್ಟಣ, ಆಗಸ್ಟ್ 6: ಮಾರುತಿ ವ್ಯಾನ್ ವೊಂದು ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಜಲ ಸಮಾಧಿಯಾದ ಘಟನೆ ತಾಲೂಕಿನ ದೊಡ್ಡ ಕಮರವಳ್ಳಿ (ಮರಟಿ ಕೊಪ್ಪಲು) ಹಾರಂಗಿ ನಾಲೆಯಲ್ಲಿ ಸೋಮವಾರ ಸಂಭವಿಸಿದೆ.
ಪಿರಿಯಾಪಟ್ಟಣದ ಲಕ್ಷ್ಮಿಪುರದಲ್ಲಿ ವಾಸವಾಗಿದ್ದ ಪಳನಿಸ್ವಾಮಿ (40), ಪತ್ನಿ ಸಂಜು (35), ಮಗ ನಿಖಿತ್ (12), ಮಗಳು ಪೂರ್ಣಿಮಾ (14) ಮೃತಪಟ್ಟ ದುರ್ದೈವಿಗಳು. ಇವರು ಕೊಡಗು ಜಿಲ್ಲೆಯ ನಾಪೋಕ್ಲಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಪಳನಿಸ್ವಾಮಿ ದಂಪತಿಯ ಮಕ್ಕಳು ಅಂಗವಿಕಲರಾಗಿದ್ದು, ಇವರಿಗೆ ದೊಡ್ಡಕವರವಳ್ಳಿ ಅಂಚೆ ಕಚೇರಿಯಲ್ಲಿ ಸರಕಾರದಿಂದ ಬರುವ ಅಂಗವಿಕಲರ ವೇತನ ಪಡೆಯಲು ಗ್ರಾಮಕ್ಕೆ ಬರುತ್ತಿದ್ದರು. ಆ ಸಂದರ್ಭದಲ್ಲಿ ಹಾರಂಗಿ ನಾಲೆಯ ಏರಿ ಮೇಲೆ ಮಾರುತಿ ವ್ಯಾನ್ ತಿರುಗಿಸುವಾಗ ನಿಯಂತ್ರಣ ತಪ್ಪಿ, ನಾಲೆಗೆ ಉರುಳಿದೆ.

ತಕ್ಷಣ ಅಲ್ಲಿಯೆ ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ, ರಕ್ಷಿಸಲು ಯತ್ನಿಸಿದರಾದರೂ ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಬೆಟ್ಟದಪುರ ಪೊಲೀಸರು ಮೃತದೇಹಗಳನ್ನು ಮತ್ತು ವ್ಯಾನ್ ಅನ್ನು ಸ್ಥಳೀಯರ ನೆರವಿನಿಂದ ಹೊರ ತೆಗೆದಿದ್ದಾರೆ.
ವ್ಯಾನ್ ನಲ್ಲಿದ್ದ ದಾಖಲಾತಿ, ಮೊಬೈಲ್ ಫೋನ್ ಮೂಲಕ ಮೃತರ ಸ್ವವಿವರದ ಮಾಹಿತಿ ಪಡೆದು ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮಿಪುರ ಗ್ರಾಮದವರು ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಮೃತದೇಹಗಳನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಭಾಸ್ಕರ್ ರಾವ್, ಸಿಪಿಐ ಸಿದ್ದಯ್ಯ, ಬೆಟ್ಟದಪುರದ ಎಸ್ ಐ ಚಿಕ್ಕಸ್ವಾಮಿ ಭೇಟಿ ನೀಡಿದ್ದರು.












Click it and Unblock the Notifications