ವಿಜಯದಶಮಿಯಂದು ವಜ್ರಮುಷ್ಠಿ ಕಾಳಗದಲ್ಲಿ ತೊಡೆ ತಟ್ಟಲು ಮುಂದಾದ ಜಟ್ಟಿಗಳು
ಮೈಸೂರು, ಅಕ್ಟೋಬರ್. 16 : ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರು ದಸರಾ ಮಹೋತ್ಸವ ಸಂಭ್ರಮ ಮನೆ ಮಾಡಿದ್ದು, ನವರಾತ್ರಿಯ ಕೊನೆಯ ದಿನ ನಡೆಯಲಿರುವ ವಜ್ರಮುಷ್ಠಿ ಕಾಳಗದಲ್ಲಿ ತೊಡೆ ತಟ್ಟಲು ಜಟ್ಟಿಗಳು ತಯಾರಾಗಿದ್ದಾರೆ.
ನವರಾತ್ರಿ ಕೊನೆಯ ದಿನ ವಿಜಯದಶಮಿ ದಿನ ವಜ್ರಮುಷ್ಠಿಕಾಳಗ ನಡೆಯಲಿದ್ದು, ಇಂದು ಮಂಗಳವಾರ (ಅ.16) ಅರಮನೆ ಆವರಣದ ಗಾಯಿತ್ರಿ ದೇವಾಲಯದ ಬಳಿ ಜೋಡಿ ಕಟ್ಟುವ ಕಾರ್ಯ ಮುಕ್ತಾಯವಾಗಿದೆ. ವಿಜಯದಶಮಿ ದಿನ ಬೆಳಗ್ಗೆ 9:15 ರಿಂದ ಅರಮನೆ ಕರಿಕಲ್ಲು ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಸಮ್ಮುಖದಲ್ಲಿ ಜೆಟ್ಟಿಗಳು ತೊಡೆ ತಟ್ಟಲು ರೆಡಿಯಾಗಿದ್ದಾರೆ.
ಜಿಂಕೆ ಕೊಂಬಿನ ಆಯುಧ ವಜ್ರಮುಷ್ಠಿ ಕೈಗೆ ಧರಿಸಿ ತಲೆಯಿಂದ ರಕ್ತ ಬರಿಸೋದು, ರಕ್ತ ಬಂದ ಬಳಿಕ ತಾಯಿಚಾಮುಂಡೇಶ್ವರಿ ತಾಯಿ ಶಾಂತಳಾಗುತ್ತಾಳೆ ಅನ್ನೋದು ಸಂಪ್ರದಾಯವಾಗಿದೆ. ಹಾಗೆಯೇ ತಲೆಯಲ್ಲಿ ರಕ್ತ ಬಂದ ನಂತರ ವಜ್ರಮುಷ್ಠಿ ಕಾಳಗ ಅಂತ್ಯವಾಗಲಿದೆ. ಮೈಸೂರು, ಚಾಮರಾಜನಗರ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಆಗಮಿಸಿರುವ ಜಟ್ಟಿ ಸಮುದಾಯದವರಿಂದ ವಜ್ರಮುಷ್ಠಿ ಕಾಳಗಕ್ಕೆ ಜೋಡಿ ಕಟ್ಟುವ ಕಾರ್ಯ ಆರಂಭವಾಗಿದೆ.

ಮೈಸೂರಿನ ಉಸ್ತಾದ್ ಮಾದವ್ ಜಟ್ಟಿ ಗರಡಿಯ ಮಂಜುನಾಥ್ ಜೆಟ್ಟಿ ಹಾಗೂ ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಶಿಷ್ಯ ವಿದ್ಯಾಧರ ಜೆಟ್ಟಿ ನಡುವೆ ಫೈಟ್ ನಡೆಯಲಿದೆ. ಹಾಗೆಯೇ ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ ಶಿಷ್ಯ ರಾಘವೇಂದ್ರ ಜಟ್ಟಿ ಹಾಗೂ ಚಾಮರಾಜನಗರದ ವಸ್ತಾದ್ ಬಂಗಾರ್ ಜೆಟ್ಟಿ ಶಿಷ್ಯ ಪುರುಷೋತ್ತಮ ಜೆಟ್ಟಿ ನಡುವೆ ವಜ್ರ ಮುಷ್ಠಿ ಕಾಳಗ ನಡೆಯಲಿದೆ. ವಜ್ರಮುಷ್ಠಿ ಕಾಳಗಕ್ಕೆ ನಾಲ್ಕು ಜಟ್ಟಿಗಳು ಆಯ್ಕೆಯಾಗಿದ್ದಾರೆ.












Click it and Unblock the Notifications