Varuna: ವರುಣದಲ್ಲಿ ಗೆಲ್ಲಲು ವಿ. ಸೋಮಣ್ಣ 4 ತಂತ್ರಗಳು!
ಮೈಸೂರು, ಏಪ್ರಿಲ್ 28; ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಮೈಸೂರಿನ ವರುಣ ಸಹ ಒಂದು. ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದೇ ಬಿಂಬಿತರಾಗಿರುವ ಸಿದ್ದರಾಮಯ್ಯ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ ವಿ. ಸೋಮಣ್ಣರನ್ನು ಎದುರಾಳಿಯಾಗಿ ನಿಲ್ಲಿಸಿ ಲಿಂಗಾಯತ ದಾಳ ಉರುಳಿಸಿದೆ. ಮೇ 10ರಂದು ಚುನಾವಣೆ ನಡೆಯಲಿದೆ.
ವರುಣ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಚಾರ ಬಿರುಸಿನಿಂದ ಸಾಗಿದೆ. ಭಾರತಿ ಶಂಕರ್ ಜೆಡಿಎಸ್ ಅಭ್ಯರ್ಥಿ. ಆದರೆ ನಿಜವಾದ ಪೈಪೋಟಿ ಇರುವುದು ಸಿದ್ದರಾಮಯ್ಯ vs ವಿ. ಸೋಮಣ್ಣ, ಅಂದರೆ ಬಿಜೆಪಿ vs ಕಾಂಗ್ರೆಸ್. ವಿ. ಸೋಮಣ್ಣ ವರುಣ ಜೊತೆಗೆ ಚಾಮರಾಜನಗರ ಕ್ಷೇತ್ರದಲ್ಲಿಯೂ ಕಣಕ್ಕಿಳಿದಿದ್ದಾರೆ. ಸಿದ್ದರಾಮಯ್ಯ ಈ ಬಾರಿ ಗೆಲುವಿನ ವಿಶ್ವಾಸದಲ್ಲಿ ವರುಣದಲ್ಲಿ ಮಾತ್ರ ಕಣಕ್ಕಿಳಿಸಿದ್ದಾರೆ.

ಮೈಸೂರಿನ ವರುಣದಲ್ಲಿ ಲಿಂಗಾಯತ ಸಮುದಾಯದ ಸುಮಾರು 58 ಸಾವಿರ ಮತಗಳಿವೆ. ಈ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ವಿ. ಸೋಮಣ್ಣಗೆ ಟಿಕೆಟ್ ನೀಡಿದೆ. ಲಿಂಗಾಯತ ಸಮುದಾಯದ ಮಠಗಳ ಸ್ವಾಮೀಜಿಗಳಿಗೆ ಆಪ್ತರಾಗಿರುವ ಸೋಮಣ್ಣಗೆ ಸಮುದಾಯದ ಬೆಂಬಲ ಸಿಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಲಿಂಗಾಯತ ಅಸ್ತ್ರದಿಂದಲೇ ಸಿದ್ದರಾಮಯ್ಯರನ್ನು ತವರಿನಲ್ಲಿ ಕಟ್ಟಿ ಹಾಕಬೇಕು ಎಂಬುದು ಪಕ್ಷದ ತಂತ್ರವಾಗಿದೆ.
ಸೋಮಣ್ಣ 4 ತಂತ್ರಗಳು; ಈಗ ನಡೆಯುತ್ತಿರುವ ಚುನಾವಣಾ ಪ್ರಚಾರವೇ ಬೇರೆ. ಏಪ್ರಿಲ್ 30ರ ಬಳಿಕ ಬಿಜೆಪಿ ವರುಣದಲ್ಲಿ ಕೈಗೊಳ್ಳಲಿರುವ ಪ್ರಚಾರ ಬೇರೆಯದ್ದೇ ರೀತಿಯಾಗಿರುತ್ತದೆ. 4 ತಂತ್ರಗಳ ಮೂಲಕ ಲಿಂಗಾಯತ ಮತಗಳನ್ನು ಸೆಳೆಯಲು ವಿ. ಸೋಮಣ್ಣ ತಂತ್ರ ರೂಪಿಸಿದ್ದಾರೆ. ಈ ತಂತ್ರದ ಮೂಲಕ ವಾರಾಂತ್ಯದಿಂದಲೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ಏರಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.
ಸುತ್ತೂರು ಮಠವನ್ನು ಕೇಂದ್ರವಾಗಿ ಮಾಡಿಕೊಂಡು ಲಿಂಗಾಯತ ಮತ ಬೇಟೆಯಾಡುವುದು ಮೊದಲ ತಂತ್ರವಾಗಿದೆ. ಸುತ್ತೂರು ಮಠ ಮೈಸೂರು ಜಿಲ್ಲೆ, ವರುಣ ಕ್ಷೇತ್ರದ ರಾಜಕೀಯದ ಮೇಲೆ ಸಾಕಷ್ಟು ಪ್ರಭಾವ ಹೊಂದಿದೆ. ಲಿಂಗಾಯತ ಸಮುದಾಯದ ನಾಯಕರು, ಭಕ್ತರು ಮಠದ ಮಾತು ಮೀರುವುದಿಲ್ಲ. ಆದ್ದರಿಂದ ಮಠವನ್ನು ಕೇಂದ್ರವಾಗಿ ಮಾಡಿಕೊಂಡು ಲಿಂಗಾಯತ ಸಮುದಾಯದ ಮತವನ್ನು ಕೇಂದ್ರಿಕರಿಸಿ, ಅವರು ಬಿಜೆಪಿಗೆ ಬರುವಂತೆ ತಂತ್ರವನ್ನು ರೂಪಿಸಲಾಗಿದೆ.

ಲಿಂಗಾಯತ ಮತಗಳ ಕ್ರೋಢೀಕರಣ ಮತ್ತೊಂದು ತಂತ್ರವಾಗಿದೆ. ವರುಣದಲ್ಲಿ ಸುಮಾರು 58 ಸಾವಿರ ಲಿಂಗಾಯತ, 35 ಸಾವಿರ ಕುರುಬ, ಪರಿಶಿಷ್ಟ ಜಾತಿ 43 ಸಾವಿರ, ಪರಿಶಿಷ್ಟ ಪಂಗಡ 23 ಸಾವಿರ, ಒಕ್ಕಲಿಗ 12 ಸಾವಿರ ಮತಗಳಿವೆ. ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ವಿರೋಧಿ, ಹಿಂದೆ ಅಧಿಕಾರದಲ್ಲಿದ್ದಾಗ ಧರ್ಮ ಒಡೆಯಲು ಪ್ರಯತ್ನ ನಡೆಸಿದರು ಎಂಬುದನ್ನು ಜನರಿಗೆ ತಿಳಿಸುವ ಮೂಲಕ ಲಿಂಗಾಯತ ಮತಗಳ ಕ್ರೋಢೀಕರಣಕ್ಕೆ ತಂತ್ರವನ್ನು ಬಿಜೆಪಿ ಹಣೆದಿದೆ.
8 ರಿಂದ 10 ದಿನ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡುವುದು 3ನೇ ತಂತ್ರವಾಗಿದೆ. ಮೇ 10ರಂದು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಮೇ 8ರಂದು ಕೊನೆಗೊಳ್ಳಲಿದೆ. ಆದ್ದರಿಂದ ಏಪ್ರಿಲ್ 30 ರಿಂದ ವರುಣದಲ್ಲಿ ಅಬ್ಬರದ ಪ್ರಚಾರ ನಡೆಸಲಾಗುತ್ತದೆ. ವಿವಿಧ ರಾಜ್ಯಗಳ ನಾಯಕರು, ಕರ್ನಾಟಕದ ವಿವಿಧ ನಾಯಕರು ವಿ. ಸೋಮಣ್ಣ ಪರವಾಗಿ ಮತಬೇಟೆಗೆ ಇಳಿಯಲಿದ್ದಾರೆ. ರೋಡ್ ಶೋ, ಸಮಾವೇಶದ ಮೂಲಕ ಬಿಜೆಪಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ನರೇಂದ್ರ ಮೋದಿ ಮೂಲಕ ರೋಡ್ ಶೋ ಮಾಡಿಸುವುದು 4ನೇ ಪ್ರಚಾರ ತಂತ್ರವಾಗಿದೆ. ಯಾವುದೇ ಪ್ರಚಾರ ತಂತ್ರಗಳು ಫಲ ಕೊಡಲಿಲ್ಲ ಎಂದು ಅನ್ನಿಸಿದರೆ ಪ್ರಧಾನಿ ನರೇಂದ್ರ ಮೋದಿ ಕರೆತಂದು ಸಮಾವೇಶ, ರೋಡ್ ಶೋ ಮಾಡಿಸಲು ತೀರ್ಮಾನಿಸಲಾಗಿದೆ. ಸದಾ ಪ್ರಧಾನಿ ವಿರುದ್ಧ ಟೀಕೆ ಮಾಡುವ ಸಿದ್ದರಾಮಯ್ಯ ವಿರುದ್ಧ ಪ್ರಚಾರ ನಡೆಸಲು ಮೋದಿ ಕರೆಸಲು ಸಹ ಚಿಂತನೆ ನಡೆದಿದೆ.












Click it and Unblock the Notifications