ಪ್ರವಾಹ ಪೀಡಿತರಿಗೆ ಸಹಾಯಹಸ್ತ ಚಾಚಿದ ಪೇಜಾವರ ಶ್ರೀಗಳು
ಮೈಸೂರು, ಆಗಸ್ಟ್ 10 : ವರುಣನ ಅಬ್ಬರಕ್ಕೆ ಕರ್ನಾಟಕದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಅವರಿಗೆ ಸಹಾಯಾರ್ಥವಾಗಿ ಕೂಡಲೇ ಪೇಜಾವರ ಮಠದಿಂದ 15 ಲಕ್ಷ ನೆರವು ನೀಡುವುದಾಗಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಬೆಳಗಾವಿಗೆ ನಿರ್ಮಲಾ ಸೀತಾರಾಮನ್; ಅಧಿಕಾರಿಗಳಿಂದ ಮಾಹಿತಿ ಸಂಗ್ರಹಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನೇಕ ಮಂದಿ ಮನೆ - ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು ಅವರ ನೆರವಿಗೆ ಧಾವಿಸುವಂತೆ ಭಕ್ತರು ಮತ್ತು ನಾಗರೀಕರಲ್ಲಿ ಮನವಿ ಮಾಡುತ್ತೇನೆ. ಸಂಕಷ್ಟದ ಸಂದರ್ಭದಲ್ಲಿ ಮಠಗಳು ಜನರ ನೆರವಿಗೆ ಮುಂದಾಗಬೇಕು. ಈಗ ಚಾತುರ್ಮಾಸ ಇರುವುದರಿಂದ ಅಲ್ಲಿಗೆ ಹೋಗಲಾಗುತ್ತಿಲ್ಲ. ಈ ಸಂದರ್ಭದಲ್ಲಿ ಹೇಗೆ ನೆರವಾಗುವುದು ಎಂದು ಯೋಚಿಸುತ್ತಿದ್ದೇವೆ" ಎಂದರು.
"ಸದ್ಯಕ್ಕೆ ಬಳ್ಳಾರಿ ಜಿಲ್ಲೆಯ ಒಂದು ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಪರಿಹಾರ ಕಾರ್ಯ ಕೈಗೊಳ್ಳಲಾಗುವುದು. ಯುವಕರು ಶ್ರಮದಾನದ ಮೂಲಕ ಸಂಕಷ್ಟಕ್ಕೆ ನೆರವಾಗಬೇಕು. ಅಲ್ಲಿ ಏನಾಗಿದೆ, ಏನು ಮಾಡಬೇಕೆಂಬುದನ್ನು ಕೇಳಿ ತಿಳಿದುಕೊಳ್ಳುತ್ತಿದ್ದೇನೆ. ಚಾತುರ್ಮಾಸ ಮುಗಿದ ಬಳಿಕ ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಭಾಗದಲ್ಲಿ ಪಾದಯಾತ್ರೆ ಕೈಗೊಳ್ಳಲಾಗುವುದು. ಶ್ರೀಮಂತರು ಹೆಚ್ಚು ನೆರವು ನೀಡಬೇಕು. ಈ ಮಟ್ಟದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೂ ಮಾತನಾಡುತ್ತೇನೆ" ಎಂದರು.
"ಈ ಹಿಂದೆ ನೆರೆ ಬಂದಾಗಲೂ ಸಹಾಯಹಸ್ತ ಚಾಚಿದ್ದೆವು. ಈಗಾಗಲೇ ಅನೇಕ ಕಡೆ ಮನೆ ನಿರ್ಮಿಸಿಕೊಡಲಾಗಿದೆ" ಎಂದು ಅವರು ವಿವರಿಸಿದರು.