ಗಿರಿಜನ ಹಾಡಿಯಲ್ಲಿ ಬೇಸಿಗೆ ಆರಂಭದಲ್ಲೇ ನೀರಿಗಾಗಿ ಪರದಾಟ
ಮೈಸೂರು, ಮಾರ್ಚ್ 06: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಅಲ್ಲಲ್ಲಿ ನೀರಿನ ಹಾಹಾಕಾರ ಆರಂಭವಾಗಿದ್ದು, ಕೆಲವೆಡೆ ಅಂತರ್ಜಲ ಕುಸಿತದ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರೇ ಬರದಂತಾಗಿದ್ದು, ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಭಾರತವಾಡಿ ಗಿರಿಜನ ಹಾಡಿಯಲ್ಲಿ ನೀರು ಇಲ್ಲದ ಕಾರಣ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಅನಿವಾರ್ಯತೆ ಎದುರಾಗಿದೆ.
ದೊಡ್ಡಹೆಜ್ಜೂರು ಗ್ರಾ.ಪಂ.ವ್ಯಾಪ್ತಿಯ ಭಾರತವಾಡಿ ಗಿರಿಜನ ಹಾಡಿಯಲ್ಲಿ ಕಳೆದ ಆರು ತಿಂಗಳಿನಿಂದ ಕಿರು ನೀರು ಸರಬರಾಜು ಯೋಜನೆಯು ಅಂತರ್ಜಲ ಕುಸಿತದಿಂದ ಸ್ಥಗಿತಗೊಂಡಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದ್ದು, ನೀರನ್ನು ಹುಡುಕಿಕೊಂಡು ಅಕ್ಕಪಕ್ಕದ ಪಂಪ್ ಸೆಟ್ ಹಾಗೂ ಕೆರೆ-ಕಟ್ಟೆಯತ್ತ ತೆರಳುವಂತಾಗಿದೆ. ಹಾಡಿಜನರ ಸಮಸ್ಯೆಯನ್ನು ಮನಗಂಡು ಗ್ರಾ.ಪಂ. ಅಧ್ಯಕ್ಷೆ ಮಹದೇವಿ ಬಾಲರಾಜ್ ಅವರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಸುತ್ತಿದ್ದಾರೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಡೆಯಲು ಜಲಮಂಡಳಿ ಯೋಜನೆ ಏನು?
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಪಂ ಪಿಡಿಓ ಶಿವಣ್ಣ ಅವರು ನೀರಿನ ಸಮಸ್ಯೆ ಗಮನದಲ್ಲಿದ್ದು, ಟ್ಯಾಂಕರ್ ಮೂಲಕ ಹಾಡಿ ಜನತೆಗೆ ನೀರು ಪೂರೈಸಿ, ಕೂಡಲೇ 14ನೇ ಹಣಕಾಸು ಯೋಜನೆಯಲ್ಲಿ ಹೊಸ ಬೋರ್ವೆಲ್ ಕೊರೆಯಿಸಿ ನೀರು ಪೂರೈಸಲು ಕ್ರಮವಹಿಸಲಾಗುವುದಲ್ಲದೆ, ಎರಡು ಕೈಪಂಪ್ ಗಳ ಪುನಶ್ಚೇತನಗೊಳಿಸಲಾಗುವುದು. ಅಲ್ಲಿಯವರೆಗೆ ನಿರಂತರವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದಾಗಿ ಹೇಳಿದ್ದಾರೆ.
ಈ ನಡುವೆ ಭರತವಾಡಿ ಗ್ರಾ.ಪಂ.ಸದಸ್ಯ ಮಹದೇವ್ ಸೇರಿದಂತೆ ನಿವಾಸಿಗಳು ಶೀಘ್ರವೇ ಹೊಸ ಬೋರ್ವೆಲ್ ಕೊರೆಯಿಸಿ ನೀರು ಪೂರೈಸಬೇಕು, ಕೈಪಂಪ್ ನ ಬೋರ್ವೆಲ್ ನ್ನು ಇನ್ನಷ್ಟು ಆಳಕ್ಕೆ ಕೊರೆಯಿಸಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.