ಮಳೆ ಹೊಡೆತಕ್ಕೆ ಪ್ರವಾಸಿಗರ ಸುಳಿವಿಲ್ಲದೆ ಪಾತಾಳ ತಲುಪಿದ ಪ್ರವಾಸೋದ್ಯಮ
ಮೈಸೂರು, ಆಗಸ್ಟ್ 20 : ಎಡೆಬಿಡದೆ ಸುರಿಯುತ್ತಿರುವ ಮಳೆ, ಉಕ್ಕಿ ಹರಿಯುತ್ತಿರುವ ನದಿಗಳು, ಪ್ರವಾಹ, ಭೂಕುಸಿತ, ರಸ್ತೆ ಸಂಚಾರ ಬಂದ್ ಮೊದಲಾದ ಆತಂಕ ಹುಟ್ಟಿಸುವ ಕಾರಣಗಳಿಂದ ರಾಜ್ಯದ, ಅದರಲ್ಲೂ ದಕ್ಷಿಣ ಕರ್ನಾಟಕದ ಪ್ರವಾಸೋದ್ಯಮದ ಮೇಲೆ ಭಾರೀ ಪರಿಣಾಮ ಬೀರಿದೆ. ಪ್ರವಾಸೋದ್ಯಮದ ಮೇಲೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅವಲಂಬಿತರಾದವರಿಗೆ ಹೊಡೆತ ಬಿದ್ದಿದೆ.
ಒಂದು ಕಡೆ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಅವುಗಳಿಂದ ಹೊರಬಿಡುತ್ತಿರುವ ನೀರಿನಿಂದಾಗಿ ಸೃಷ್ಟಿಯಾಗುವ ನಯನ ಮನೋಹರ ದೃಶ್ಯ, ತುಂಬಿರುವ ಜಲಾಶಯ, ಪ್ರಕೃತಿಯ ಸೊಬಗು, ಜಲಪಾತಗಳ ರುದ್ರ ರಮಣೀಯ ನರ್ತನ ಇವುಗಳನ್ನು ಕಣ್ತುಂಬಿಸಿಕೊಳ್ಳುವ ಆಸೆಯಿಂದ ಪ್ರವಾಸಕ್ಕೆ ಯೋಜಿಸಿದ್ದವರು ಮಳೆಯ ಅನಾಹುತಕ್ಕೆ ಅಂಜಿ ಈಗ ಹಿಂದೆ ಸರಿದಿದ್ದಾರೆ.
ಶನಿವಾರ ಹಾಗೂ ಭಾನುವಾರದ ವಾರಾಂತ್ಯಗಳಲ್ಲಿ, ಎರಡನೇ ಶನಿವಾರ ಮತ್ತು ಭಾನುವಾರ ಸೇರಿದಂತೆ ಒಟ್ಟೊಟ್ಟಿಗೆ ರಜಾ ಸಿಕ್ಕಿದಾಗ 1-2 ದಿನ ಹೆಚ್ಚುವರಿ ರಜೆ ಹಾಕಿ, ದೀರ್ಘ ಪ್ರವಾಸಕ್ಕೆ ಯೋಜನೆ ರೂಪಿಸಿಕೊಳ್ಳುತ್ತಿದ್ದರು. ಅದರಲ್ಲೂ ಐಟಿ ಕ್ಷೇತ್ರದ ಉದ್ಯೋಗಿ ಸಮೂಹ ಬೆಂಗಳೂರಿನಿಂದ ಹೊರ ಬರಲಾರದೆ ಪರಿತಪಿಸುತ್ತಿದ್ದಾರೆ.

ಪ್ರವಾಸಿ ತಾಣಗಳೂ ಭಣಗುಡುತ್ತಿವೆ
ಕೇರಳದಲ್ಲಿನ ಪ್ರವಾಹ ಪರಿಸ್ಥಿತಿ, ಕೊಡಗು ಹಾಗೂ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ, ಭೂ ಕುಸಿತ ಕಂಡು ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ಈ ಸಮಸ್ಯೆಗಳಿಂದ ಕರ್ನಾಟಕದ ದಕ್ಷಿಣ ಭಾಗ ಮತ್ತು ಕೇರಳ ಎರಡೂ ಕಡೆ ಪ್ರವಾಸಿಗರ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳ ಪ್ರವಾಸಿ ತಾಣಗಳೂ ಪ್ರವಾಸಿಗರ ಸುಳಿವಿಲ್ಲದೇ ಭಣಗುಡುತ್ತಿವೆ.

ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶ ಇಲ್ಲ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯಯದಲ್ಲಿ ನೀರು ಹಾಲ್ನೊರೆಯಂತೆ ಹರಿಯುತ್ತಿದೆ. ಕೆಆರ್ ಎಸ್ ಹಾಗೂ ಮತ್ತೊಂದು ಪ್ರಮುಖ ಪ್ರವಾಸಿ ತಾಣವಾದ ರಂಗನತಿಟ್ಟು ಪಕ್ಷಿಧಾಮಕ್ಕೆ ಕೂಡ ಪ್ರವೇಶ ಇಲ್ಲ. ಎಚ್.ಡಿ. ಕೋಟೆಯ ಕಬಿನಿ ಅಣೆಕಟ್ಟೆಗೂ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗಿದೆ.

ಮೈಸೂರು-ನಂಜನಗೂಡು-ಊಟಿ ರಸ್ತೆ ಬಂದ್
ನಂಜನಗೂಡಿನ ಕಪಿಲಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಮೈಸೂರು-ನಂಜನಗೂಡು-ಊಟಿ ರಸ್ತೆ ಬಂದ್ ಆಗಿ, ವಾಹನ ಸಂಚಾರ ಅಸಾಧ್ಯವಾಗಿದೆ. ಹೀಗಾಗಿ ಜನರು ಈ ಭಾಗದ ಪ್ರವಾಸಿ ತಾಣಗಳಿಗೂ ಹೋಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಪ್ರವಾಸದ ಸಮಯ ಅಲ್ಲದಿದ್ದರೂ ಹಲವು ವರ್ಷಗಳ ನಂತರ ವರುಣನ ಅಬ್ಬರದಿಂದಾಗಿ ಜಲಪಾತಗಳು ಜೀವ ತಳೆದಿರುವುದರಿಂದ ಪ್ರವಾಸಕ್ಕೆ ಕೈಬೀಸಿ ಕರೆಯುತ್ತಿತ್ತು.

ಖಾಲಿ ಹೊಡೆಯುತ್ತಿವೆ ಹೋಟೆಲ್ ಗಳು
ಸಾಮಾನ್ಯವಾಗಿ ವಾರಾಂತ್ಯದಲ್ಲಿ ಹೋಟೆಲ್ ಗಳು ಪ್ರವಾಸಿಗಳಿಂದ ತುಂಬಿರುತ್ತಿದ್ದವು. ಆದರೆ ಕಳೆದ 2-3 ವಾರದಿಂದ ಹೋಟೆಲ್ ಗಳ ಕೊಠಡಿಗಳು ಪ್ರವಾಸಿಗರಿಲ್ಲದೆ ಬಹುತೇಕ ಖಾಲಿಯೇ ಇವೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ವಾಹನ ಬಾಡಿಗೆ ನೀಡುವ ಸಂಸ್ಥೆಗಳು ಕೂಡಾ ವ್ಯವಹಾರವಿಲ್ಲದೆ ಕುಳಿತಿವೆ. ಸಣ್ಣಪುಟ್ಟ ಕರಕುಶಲ ವಸ್ತುಗಳನ್ನು ಮಾರುವವರು, ಪ್ರವಾಸೋದ್ಯಮವನ್ನೇ ನಂಬಿರುವ ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ.












Click it and Unblock the Notifications