ಮಳೆ ಅವಾಂತರ: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸಬೇಡಿ: ಎಸ್. ಟಿ. ಸೋಮಶೇಖರ್ ಸಲಹೆ
ಮೈಸೂರು, ಆಗಸ್ಟ್, 29: ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತು ಎಲ್ಲ ಅಧಿಕಾರಿಗಳ, ಶಾಸಕರ ಸಭೆ ಕರೆಯಲಾಗಿದೆ. ಯಾವ ಭಾಗದಲ್ಲಿ ಎಷ್ಟು ಹಾನಿ ಆಗಿದೆ ಎಂಬುದರ ಮಾಹಿತಿಯನ್ನು ಕೇಳಿದ್ದೇನೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಮಳೆ ಹಾನಿ ಕುರಿತು ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಲಾಗಿದೆ ಎಂದರು.
ಶಾಲೆಗಳಿಗೆ ರಜೆ ಕೊಟ್ಟಿದ್ದಾರೆ ಎನ್ನುವ ಕುರಿತು ಈಗ ತಾನೆ ಮಾಹಿತಿ ಲಭ್ಯ ಆಗಿದೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆ ಆರಂಭವಾದ ಮೇಲೆ ರಜೆ ಕೊಟ್ಟಿದ್ದರಿಂದ ತೊಂದರೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಳೆ ಹಾನಿ ಕುರಿತ ಸಭೆಯಲ್ಲಿ ಚರ್ಚಿಸಲಾಗುವುದು.
ಮೈಸೂರು ದಸರಾ ಕುರಿತು ಪ್ರತಿಕ್ರಿಯಿಸಿ ಅವರು ಹೈಪವರ್ ಕಮಿಟಿಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅದ್ಧೂರಿ ದಸರಾ ಆಚರಿಸಲು ತೀರ್ಮಾನ ಆಗಿದೆ. ಈಗಾಗಲೇ ಸಮಿತಿಯನ್ನು ರಚಿಸಿದ್ದೇವೆ. ಈ ಕುರಿತು ಸಭೆ ಕರೆದಿದ್ದೇನೆ. ಮಳೆ ನಿಂತ ನಂತರ ದಸರಾ ಕೆಲಸ ಆರಂಭ ಆಗಲಿದೆ ಎಂದರು.

ಹೆದ್ದಾರಿ ಜಲಾವೃತ, ಅಧಿಕಾರಿಗಳ ಜೊತೆ ಸಭೆ
ರಾಮನಗರ ಹೆದ್ದಾರಿ ಜಲಾವೃತ ಕುರಿತು ಪ್ರತಿಕ್ರಿಯಿಸಿ, ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳೆಲ್ಲರನ್ನೂ ಕರೆದು ಸಭೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ನಿನ್ನೆ ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆ ಹಾನಿ ಸಂಬಂಧಿಸಿದಂತೆ ವರ್ಚುಯಲ್ ಮೂಲಕ ಚರ್ಚೆ ನಡೆಸಿದ್ದಾರೆ. ನಾಗಮಂಗಲ, ಕನಕಪುರಕ್ಕೆ ಹೋಗುವ ರಸ್ತೆಯ ಮಾರ್ಗವನ್ನು ಬದಲಾವಣೆ ಮಾಡಬೇಕು. ಕೆರೆ ಕೋಡಿಯಲ್ಲಿ ನೀರು ತುಂಬಿದೆ. ಈ ಮಾರ್ಗವಾಗಿ ಮೈಸೂರಿಗೆ ಹೋಗುವುದನ್ನು ತಡೆಹಿಡಿದು ಆಗುವ ಅನಾಹುತಗಳನ್ನು ತಪ್ಪಿಸಬೇಕು. ಎರಡು ದಿನದಲ್ಲಿ ಮಳೆ ಕಡಿಮೆ ಆದರೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಮೇಯರ್ ಚುನಾವಣೆ ಬಗ್ಗೆ ಮಹಿತಿ ಇಲ್ಲ
ಮೇಯರ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ ಈ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ. ಪ್ರಧಾನಿ ಅವರು ಸೆಪ್ಟೆಂಬರ್ 2ರಂದು ಮಂಗಳೂರಿಗೆ ಬರುತ್ತಿರುವುದರಿಂದ ಪಕ್ಷದ ಅಧ್ಯಕ್ಷರು ನಮಗೆ ಏನೂ ಹೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ಮೇಲೆ ತಿಳಿಸುತ್ತಾರೆ. ಇನ್ನೂ ಸಮಯವಿದೆ. ಕಾಂಗ್ರೆಸ್ನವರ ಐಕ್ಯತೆ ನಡೆ ನನಗೆ ಅರ್ಥವಾಗುತ್ತಿಲ್ಲ. ಪ್ರಧಾನಿಯವರು ಇಡೀ ವಿಶ್ವವೇ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮುರುಘಾ ಶ್ರೀಗಳ ಕುರಿತು ಸಿಎಂ, ಗೃಹಮಂತ್ರಿಗಳು ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾನೂ ಏನು ವರದಿ ಬರಬಹುದೆನ್ನುವ ಕಾತುರದಲ್ಲಿದ್ದೇನೆ. ತನಿಖೆ ಹೊರ ಬಂದ ನಂತರ ಎಲ್ಲವೂ ತಿಳಿಯಲಿದೆ. ದಸರಾ ಉದ್ಘಾಟಕರ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಇನ್ನೂ ಚರ್ಚೆ ಆಗಿಲ್ಲ. ಮಳೆಯಿಂದ ಆದ ಭಾಗಶಃ ಹಾನಿಗೊಳಗಾದವರಿಗೆ ಜಿಲ್ಲಾಧಿಕಾರಿಗಳಿಂದ ತಕ್ಷಣ ಪರಿಹಾರ ಸಿಗಲಿದೆ ಎಂದರು.

ಆಲಂಬೂರು ಮುಂಟಿ ಗ್ರಾಮದಲ್ಲಿ ಮನೆಗೋಡೆ ಕುಸಿತ
ನಿನ್ನೆ ಸುರಿದ ಭಾರಿ ಮಳೆಗೆ ಆಲಂಬೂರು ಮುಂಟಿ ಗ್ರಾಮದಲ್ಲಿ ವಾಸದ ಮನೆ ಕುಸಿತವಾಗಿದ್ದು, ಅಲ್ಲಿನ ನಿವಾಸಿಗಳು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದರು. ತಾಂಡವಪುರದಲ್ಲಿ ಧಾರಾಕಾರ ಮಳೆ ಸುರಿದಿದ್ದು ಅನಾಹುತಗಳು ಸಂಭವಿಸಿವೆ. ನಂಜನಗೂಡು ತಾಲೂಕು ವರುಣ ಕ್ಷೇತ್ರಕ್ಕೆ ಸೇರುವ ಆಲಂಬೂರು ಮುಂಟಿ ಗ್ರಾಮದಲ್ಲಿ ವಾಸದ ಮನೆ ಗೋಡೆ ಕುಸಿದುಬಿದ್ದಿದ್ದು, ಸದ್ಯ ಭಾರೀ ಅನಾಹುತ ತಪ್ಪಿದೆ. ಗೌರಮ್ಮ, ಬಸವೇಗೌಡ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದಿತ್ತು. ಮನೆಯಲ್ಲಿನ ಒಂದು ಕೋಣೆಯ ಗೋಡೆ ಹೊರಭಾಗಕ್ಕೆ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗೋಡೆಯು ಕೋಣೆಯ ಒಳ ಭಾಗಕ್ಕೆ ಬಿದ್ದಿದ್ದರೆ ತೊಂದರೆ ಆಗುತ್ತಿತ್ತು. ಮಳೆಯ ರಭಸದಿಂದ ನಾವು ಮತ್ತೊಂದು ಕೋಣೆಗೆ ಹೋದ ಕಾರಣ ಅನಾಹುತ ತಪ್ಪಿದೆ ಎಂದು ಕುಟುಂಬಸ್ಥರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕುಮಾರ್ ತುಂಬಾ ಬಡತನದಲ್ಲಿರುವ ಕುಟುಂಬದವರಿಗೆ ಸಂಬಂಧಪಟ್ಟಂತಹ ಅಧಿಕಾರಿಗಳು ಪರಿಹಾರ ನೀಡಬೇಕು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಸರ್ಕಾರದಿಂದ ಕೂಡಲೇ ಅವರಿಗೆ ಪರಿಹಾರವನ್ನು ಕೊಡಿಸಬೇಕು ಎಂದು ಆಗ್ರಹಿಸಿದರು.
ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಮಳೆಯಿಂದ ಆದ ಅನಾಹುತಗಳಿಗೆ ಪರಿಹಾರ ನೀಡುವ ಬಗ್ಗೆ ಇಂದು ಸಭೆ ಮಾಡಲಾಗುವುದು ಎಂದರು.












Click it and Unblock the Notifications