ನಂಜನಗೂಡಿನ ಶ್ರೀಕಂಠೇಶ್ವರನಿಗೆ ಮೂರು ದಿನ ಪೂಜೆಯಿಲ್ಲ
Recommended Video
ಮೈಸೂರು, ಮೇ 10: ಪ್ರಸಿದ್ಧ ನಂಜನಗೂಡಿನ ದೇವಸ್ಥಾನದ ಶ್ರೀಕಂಠೇಶ್ವರನಿಗೆ ಇನ್ನೆರಡು ದಿನ ಪೂಜೆಯ ಭಾಗ್ಯವಿಲ್ಲದಂತಾಗಿದೆ. ದೇವಸ್ಥಾನಕ್ಕೆ ಹೊಂದಿಕೊಂಡಂತೆ ಪಕ್ಕದ ರಥಬೀದಿಯಲ್ಲಿ ಮಹಿಳೆಯೋರ್ವರು ಗುರುವಾರ (ಮೇ.09) ಮೃತಪಟ್ಟಿದ್ದು, ಈ ಸೂತಕದ ಹಿನ್ನೆಲೆಯಲ್ಲಿ ಶ್ರೀಕಂಠೇಶ್ವರ ದೇಗುಲದ ದೇವರಿಗೆ ಇನ್ನೂ ಎರಡು ದಿನ ಪೂಜಾ ಕೈಂಕರ್ಯಗಳು ನಡೆಯುವುದಿಲ್ಲ, ಆದರೆ ಭಕ್ತರಿಗೆ ದರ್ಶನ ಭಾಗ್ಯವಿದೆ.
ಸಂಪ್ರದಾಯದಂತೆ ಯಾವುದೇ ದೇವಾಲಯದ ಆಸುಪಾಸಿನಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆಯಾಗುವವರೆಗೂ ಪೂಜಾ ಕೈಂಕರ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಅಂತ್ಯಕ್ರಿಯೆ ನಂತರ ಶುದ್ಧೀಕರಣ ಮಾಡಿ ಪೂಜಾ ಕೈಂಕರ್ಯ ಆರಂಭಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ದೇವಸ್ಥಾನದ ಆಸುಪಾಸು ಸಾವಿನ ವಿಚಾರ ತಿಳಿದಾಗ ಕೂಡಲೇ ಅಂತ್ಯಕ್ರಿಯೆ ನಡೆಸುವುದು ವಾಡಿಕೆ.
ಆದರೆ ಶ್ರೀಕಂಠೇಶ್ವರ ದೇಗುಲದ ಮಾಜಿ ನೌಕರ ಶ್ರೀಕಂಠಯ್ಯ ಅವರ ಪತ್ನಿ ಪದ್ಮಾವತಮ್ಮ ನಿಧನ ಹೊಂದಿದ್ದು, ವಿದೇಶದಲ್ಲಿರುವ ಅವರ ಪುತ್ರ ಶಂಕರ್ ನಾಳೆ ಶನಿವಾರ (ಮೇ.11) ಊರಿಗೆ ಬರಲಿದ್ದಾರೆ. ಆ ನಂತರವೇ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಆ ಕಾರಣದಿಂದ ಶ್ರೀಕಂಠೇಶ್ವರ ದೇವಾಲಯದಲ್ಲಿ ಪೂಜಾ ಕೈಂಕರ್ಯವನ್ನು ಅಲ್ಲಿವರೆಗೆ ಸ್ಥಗಿತಗೊಳಿಸಲಾಗಿದೆ.

ಶ್ರೀಕಂಠೇಶ್ವರ ದೇಗುಲದಲ್ಲಿ ವಿವಿಧ ಸೇವೆಗಳಿಗಾಗಿ ಭಕ್ತಾದಿಗಳು ಕೆಲವು ತಿಂಗಳ ಹಿಂದೆಯೇ ಬುಕ್ ಮಾಡಿರುತ್ತಾರೆ. ಅಂತಹ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಈ ಎರಡು ದಿನ ವಿಶೇಷ ಸೇವೆಗಾಗಿ ಬುಕ್ ಮಾಡಿರುವ ಭಕ್ತಾದಿಗಳು ಮತ್ತೊಂದು ಸೂಕ್ತ ದಿನಕ್ಕಾಗಿ ಕಾಯಬೇಕಾದ ಅನಿವಾರ್ಯತೆ ಇದೆ.












Click it and Unblock the Notifications