ಭತ್ತ ಕಟಾವು ಯಂತ್ರಕ್ಕೆ ಬಾಡಿಗೆ ನಿಗದಿ..ಹೆಚ್ಚು ವಸೂಲಿ ಮಾಡಿದ್ರೆ ಕ್ರಮ: ವಿವರ
ಮೈಸೂರು, ನವೆಂಬರ್ 27 : ಈಗ ಭತ್ತದ ಬೆಳೆಯ ಕಟಾವು ಆರಂಭವಾಗಿದ್ದು, ಮೊದಲಿನಂತೆ ಕಟಾವು ಮಾಡಲು ಕೂಲಿ ಕಾರ್ಮಿಕರ ಸಮಸ್ಯೆ ಉದ್ಭವಿಸಿದ್ದು, ರೈತರು ಆತಂಕ ಪಡುವಂತಾಗಿದೆ. ಇದರ ಜತೆಗೆ ಚಂಡಮಾರುತದ ಪರಿಣಾಮ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು ಯಾವಾಗ ಮಳೆ ಸುರಿದು ಬಿಡುತ್ತದೆಯೋ ಎಂಬ ಭಯದಲ್ಲಿ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲು ಕಾಣಿಸಿಕೊಂಡರೆ ಭತ್ತದ ಕಟಾವಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ರೈತರು ಬೆಳಗೆದ್ದರೆ ದೇವರನ್ನು ಪ್ರಾರ್ಥಿಸುವಂತಾಗಿದೆ.
ಸಾಮಾನ್ಯವಾಗಿ ಈ ಸಮಯದಲ್ಲಿ ಬಿಸಿಲು ಇರುತ್ತಿತ್ತು. ಹೀಗಾಗಿ ಭತ್ತದ ಬೆಳೆ ಗದ್ದೆಯಲ್ಲಿ ಚೆನ್ನಾಗಿ ಒಣಗಿರುತ್ತಿತ್ತು. ಇದರಿಂದ ಕಟಾವು ಮಾಡಲು ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ಕೂಡ ಮಳೆ ಸುರಿಯುತ್ತಿರುವುದು ಸಂಕಷ್ಟವನ್ನು ತಂದೊಡ್ಡಿದೆ. ಇದರಿಂದ ಭತ್ತದ ಕಟಾವಿಗೆ ತೊಂದರೆಯಾಗುತ್ತಿದೆ. ಸಣ್ಣ ರೈತರು ಕೂಲಿ ಆಳುಗಳ ಮೂಲಕ ಕೊಯ್ಲು ಮಾಡುತ್ತಿದ್ದು, ಅವರಿಗೆ ಸಮಸ್ಯೆಯಾಗುತ್ತಿದೆ. ಕೂಲಿ ಹೆಚ್ಚು ನೀಡಿದರೂ ಕೂಲಿ ಆಳುಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಕರೆಗಟ್ಟಲೆ ಭತ್ತವನ್ನು ಬೆಳೆದ ರೈತರು ಇತ್ತೀಚೆಗೆ ಕೂಲಿಯಾಳುಗಳ ಸಮಸ್ಯೆಯಿಂದಾಗಿ ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದಾರೆ. ಹೀಗಾಗಿ ಕಟಾವಿಗೆ ಯಂತ್ರಗಳಿಗೆ ಬೇಡಿಕೆ ಹೆಚ್ಚಿರುವ ಕಾರಣದಿಂದಾಗಿ ಕಟಾವು ಮಾಡುವ ದರವನ್ನು ಕೂಡ ಅವರ ಮನಸ್ಸಿಗೆ ಬಂದಂತೆ ವಿಧಿಸುತ್ತಿದ್ದು, ಒಂದು ರೀತಿಯಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಕಟಾವಿನ ಸಮಯದಲ್ಲಿ ಪ್ರತಿವರ್ಷವೂ ರೈತರು ಇಂತಹ ಸಮಸ್ಯೆಗಳನ್ನು ಎದುರಿಸಲೇ ಬೇಕಾಗುತ್ತದೆ.
ನಿಗದಿ ಪಡಿಸಿದ ಬಾಡಿಗೆ ದರ ಎಷ್ಟು?
ಕಟಾವು ಯಂತ್ರ ಹೊಂದಿರುವ ಮಾಲೀಕರು ಪ್ರತಿ ವರ್ಷವೂ ರೈತರಿಂದ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂಬ ಆರೋಪ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆರ್.ಟಿ.ಓ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹೀಗೆ ಎಲ್ಲರ ಸಮ್ಮುಖದಲ್ಲಿ ಸಭೆ ನಡೆಸಿ ಸುಲಿಗೆ ತಪ್ಪಿಸುವ ಸಲುವಾಗಿ ಮತ್ತು ಕಟಾವಿಗೆ ದರ ನಿಗದಿ ಮಾಡುವ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಟಾವು ಯಂತ್ರ ಹೊಂದಿರುವ ಮಾಲೀಕರಿಗೆ ನಷ್ಟವಾಗಲೀ, ರೈತರಿಗೆ ಹೊರೆಯಾಗಲೀ ಆಗದಂತೆ ದರವನ್ನು ಸಭೆಯಲ್ಲಿ ನಿಗದಿಗೊಳಿಸಲಾಗಿದೆ.
ಈಗಾಗಲೇ ಕಟಾವು ದರವಾಗಿ ರೈತರು ಎಕರೆಗೆ ಎಷ್ಟು ಹಣ ನೀಡಬೇಕು ಎಂಬುದರ ಕುರಿತಂತೆ ಆಯಾಯ ಕೃಷಿ ಅಧಿಕಾರಿಗಳು ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಸದ್ಯ ಚೈನ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2500, ಟೈರ್ ಗ್ರಿಪ್ ಯಂತ್ರಕ್ಕೆ 2000, ಟೈರ್ (ಸಾಮಾನ್ಯ) ಯಂತ್ರಕ್ಕೆ 1900, ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2900 ರೂ. ಗಳ ದರವನ್ನು ನಿಗದಿ ಪಡಿಸಲಾಗಿದ್ದು. ಇದಕ್ಕೆ ಮೀರಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ-2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ರೈತರು ಹೆಚ್ಚಿನ ಬಾಡಿಗೆ ಹಣದ ಬೇಡಿಕೆಯಿಟ್ಟರೆ ದೂರು ನೀಡಬಹುದಾಗಿದೆ.

ರೈತರೊಂದಿಗೆ ಕೈಜೋಡಿಸಬೇಕಾಗಿದೆ
ಜಿಲ್ಲೆಯ ತಿ.ನರಸೀಪುರ ಮತ್ತು ಕೆ.ಆರ್.ನಗರ ತಾಲೂಕಿನಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಾರೆ. ಇಲ್ಲಿಗೆ ಹೊರಗಿನಿಂದ ಭತ್ತದ ಯಂತ್ರ ತಂದು ಕಟಾವು ಮಾಡಲಾಗುತ್ತದೆ. ಕೆಲವು ದಲ್ಲಾಳಿಗಳು ಇಲ್ಲ ಸಲ್ಲದ ನೆಪವೊಡ್ಡಿ ಬಾಡಿಗೆ ಹೆಚ್ಚಿಸುವ ಪ್ರಯತ್ನ ಮಾಡುತ್ತಾರೆ. ಬಹಳಷ್ಟು ರೈತರು ಬೇಗ ಕಟಾವು ಮುಗಿಯಲಿ ಎಂಬ ಕಾರಣಕ್ಕೆ ಹೆಚ್ಚಿನ ಬಾಡಿಗೆ ನೀಡಿ ಕಟಾವು ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಇದೀಗ ಮಳೆಮೋಡ ಆವರಿಸಿಕೊಂಡಿರುವುದರಿಂದ ಮಳೆ ಬಂದರೆ ಎಲ್ಲಿ ಬೆಳೆ ಹಾಳಾಗುತ್ತದೆಯೋ ಎಂಬ ಭಯ ರೈತರನ್ನು ಕಾಡುತ್ತಿದೆ. ಜತೆಗೆ ಕಟಾವು ಮಾಡಿ ಭತ್ತವನ್ನು ಮನೆಗೆ ತಂದರೆ ಸಾಕಪ್ಪಾ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಭತ್ತ ಬೆಳೆದ ರೈತನಿಗೆ ಕಟಾವು ಮಾಡಿ ಫಸಲು ಪಡೆಯುವುದೇ ಸವಾಲ್ ಆಗಿ ಪರಿಣಮಿಸಿದೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಂದ ಕಟಾವು ಯಂತ್ರ ಹೊಂದಿರುವ ಮಾಲೀಕರು ಸುಲಿಗೆ ಮಾಡದಿದ್ದರೆ ಅಷ್ಟೇ ಸಾಕಾಗಿದೆ.












Click it and Unblock the Notifications