ವಿಷಪ್ರಸಾದ ಪ್ರಕರಣಕ್ಕೂ ಸಾಲೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ: ಸ್ಪಷ್ಟನೆ
ಮೈಸೂರು, ಡಿಸೆಂಬರ್ 22 : ವಿಷಪ್ರಸಾದ ಘಟನೆಗೂ ಸಾಲೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಮಲೆ ಮಹದೇಶ್ವರಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಅಧ್ಯಕ್ಷರಾದ ಶ್ರೀ ಪಟ್ಟದ ಗುರುಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀಗಳು, ಈ ಮಠಕ್ಕೆ 13-14ನೇ ಶತಮಾನದಿಂದ ಇತಿಹಾಸವಿದೆ. ಇಲ್ಲಿಯವರೆಗೆ 18 ಮಠಾಧಿಪತಿಗಳ ಮಾರ್ಗದರ್ಶನ ಇದೆ. 1994ರಲ್ಲಿ ಕನಕಪುರ ಸ್ವಾಮೀಜಿ ಅವರ ಸಮ್ಮುಖದಲ್ಲಿ ತಾವು (ಶ್ರೀ ಪಟ್ಟದ ಗುರುಸ್ವಾಮೀಜಿ) ಮಠದ ಎಲ್ಲ ಸ್ಥಿರಾಸ್ತಿಗಳನ್ನೂ ನಿರ್ವಹಿಸಿಕೊಂಡು ಹೋಗುವಂತೆಯೂ, ಇಮ್ಮಡಿ ಮಹದೇವಸ್ವಾಮೀಜಿ ಅವರು ಮಠಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಂಡು ಹೋಗಬೇಕೆಂದೂ ತೀರ್ಮಾನವಾಗಿದೆ. ಅದರಂತೆಯೇ ಇಂದಿನವರೆಗೂ ನಡೆದುಕೊಂಡು ಬರಲಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ, ವಿಷಪ್ರಸಾದ ದುರಂತಕ್ಕೆ ಕಾರಣವಾಗಿ ಸುಳ್ವಾಡಿ ದೇವಾಲಯದ ಟ್ರಸ್ಟ್ಗೂ ಸಾಲೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ. ಅದು ಇಮ್ಮಡಿ ಮಹದೇವ ಸ್ವಾಮೀಜಿ ಅವರ ವೈಯಕ್ತಿಕ ವಿಚಾರ. ಪ್ರಸಾದಕ್ಕೆ ವಿಷ ಬೆರೆಸಿದ್ದನ್ನು ಮಹದೇವಸ್ವಾಮೀಜಿ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಳ್ವಾಡಿ ದುರಂತದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನೆರವು, ಜೀವನೋಪಾಯವಿಲ್ಲದೆ ಅನಾಥರಾದವರಿಗೆ, ವೃದ್ಧರಿಗೆ ಆಶ್ರಯ ಒದಗಿಸಲು ಮಠವು ಬದ್ಧವಾಗಿದೆ. ಸಂತ್ರಸ್ತರ ಕುಟುಂಬದವರ ಮಕ್ಕಳ ಶಿಕ್ಷಣದ ಉಸ್ತುವಾರಿಯನ್ನೂ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.












Click it and Unblock the Notifications