'ಬಿಜೆಪಿ ದೆಹಲಿ ಮುಖಂಡರು, ಸಂಘ ಪರಿವಾರದ ಜತೆಗೆ ಸಿದ್ದು ಒಳ ಒಪ್ಪಂದ'
ಮೈಸೂರು, ಅಕ್ಟೋಬರ್ 28: ಸಿದ್ದರಾಮಯ್ಯ ಅವರು ಸಂಘ ಪರಿವಾರ ಹಾಗೂ ದೆಹಲಿಯ ಬಿಜೆಪಿ ಮುಖಂಡರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಕಾರಣಕ್ಕೆ ಸಂಘ ಪರಿವಾರದವರ ಮೇಲೆ ಮೃದು ಧೋರಣೆ ತಳೆದಿದ್ದು, ಕಲ್ಲಡ್ಕ ಪ್ರಭಾಕರ ಭಟ್, ಜಗದೀಶ್ ಕಾರಂತ ಹಾಗೂ ಪ್ರಮೋದ್ ಮುತಾಲಿಕ್ ಮೇಲೆ ಕ್ರಮ ಜರುಗಿಸಲು ಅಸಮರ್ಥರಾಗಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆರೋಪ ಮಾಡಿದರು.
ತಪ್ಪಿತಸ್ಥ ಬಿಜೆಪಿ ಮುಖಂಡರನ್ನು, ಸಂಘ ಪರಿವಾರದವರನ್ನು ಜೈಲಿಗಟ್ಟುವೆ ಎಂದು 2013ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಸಿದ್ದರಾಮ್ಯಯ, ಇಂದಿಗೂ ಯಾರೊಬ್ಬರ ಮೇಲೂ ಕ್ರಮ ಕೈಗೊಳ್ಳದೆ ಮತದಾರರನ್ನು ಮೂರ್ಖರನ್ನಾಗಿಸಿದ್ದಾರೆ. ಕೇವಲ ಹೇಳಿಕೆಗಳ ಮೂಲಕ ಡೋಂಗಿತನವನ್ನು ಪ್ರದರ್ಶಿಸುತ್ತಿದ್ದಾರೆಂದು ಶನಿವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಹರಿಹಾಯ್ದರು.

ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್ ಐಆರ್ ದಾಖಲಾದ ಮೇಲೂ ಸಚಿವ ಕೆ.ಜೆ.ಜಾರ್ಚ್ ಅವರ ರಕ್ಷಣೆಗೆ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಧಿಕ್ಕರಿಸುವ ಮೂಲಕ ರಾಜ್ಯದ ಘನತೆಗೆ ಧಕ್ಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯಗೆ ಜಾರ್ಜ್ ರೈಟ್ ಹ್ಯಾಂಡ್. ಮೈಸೂರಿನವರೊಬ್ಬರು ಅವರಿಗೆ ಲೆಫ್ಟ್ ಹ್ಯಾಂಡ್. ಈ ಎರಡು ಕೈಗಳು ಯಾವಾಗ ಮುರಿದುಕೊಳ್ಳುತ್ತವೋ ಗೊತ್ತಿಲ್ಲ. ಜಾರ್ಜ್ ವಿಚಾರದಲ್ಲಿ ಕುಮಾರಸ್ವಾಮಿ ಅವರ ನಿಲುವನ್ನು ನಾನು ಪ್ರಶ್ನೆ ಮಾಡೊಲ್ಲ. ಆದರೆ ನನ್ನ ಸ್ವಂತ ಅಭಿಪ್ರಾಯವನ್ನು ಮಂಡಿಸುತ್ತೇನೆ. ಒಬ್ಬ ಮುಖ್ಯಮಂತ್ರಿಯಾಗಿ ಜಾರ್ಜ್ ಪರ ವಕಾಲತ್ತು ವಹಿಸೋದು ಖಂಡನೀಯ ಎಂದರು.












Click it and Unblock the Notifications