ದೇಗುಲಗಳ ಹುಂಡಿಗೆ ಮಾತ್ರ ಕೈಯಿಡುತ್ತಿದ್ದ ಕಳ್ಳನೀಗ ಕಂಬಿ ಹಿಂದೆ
ಕೆ.ಆರ್.ಪೇಟೆ, ನವೆಂಬರ್ 8: ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ದೇವಾಲಯಗಳ ಹುಂಡಿಗೆ ಕನ್ನ ಹಾಕಿ, ಕಾಣಿಕೆ ಹಣವನ್ನು ದೋಚುತ್ತಿದ್ದ ಕಳ್ಳನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪೇಟೆ ಪಟ್ಟಣ ನಿವಾಸಿ ಸಮೀವುಲ್ಲಾ ಖಾನ್ ಅವರ ಮಗ ವಸೀಮ್(20) ದೇವಾಲಯಗಳ ಹುಂಡಿಗೆ ಕನ್ನ ಹಾಕಿ ಪೊಲೀಸರ ಅತಿಥಿಯಾದವನು. ತಾಲೂಕಿನ ಅಕ್ಕಿಹೆಬ್ಬಾಳು, ನಾಟನಹಳ್ಳಿ, ರಾಯಸಮುದ್ರ, ಹೊಸಹೊಳಲು ಗ್ರಾಮದ ದೇವಸ್ಥಾನದ ಹುಂಡಿಯನ್ನು ಒಡೆದು ಅದರಲ್ಲಿದ್ದ ಕಾಣಿಕೆ ಹಣವನ್ನು ದೋಚುತ್ತಿದ್ದ.
ಮೇಲಿಂದ ಮೇಲೆ ದೇವಾಲಯಗಳಲ್ಲಿ ಕಾಣಿಕೆ ಹುಂಡಿಯನ್ನು ಒಡೆದು, ಹಣ ದೋಚುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಎಚ್.ಬಿ.ವೆಂಕಟೇಶಯ್ಯ, ಎಸ್ ಐ ಗಿರೀಶ್ ಕುಮಾರ್ ಮತ್ತು ಸಿಬ್ಬಂದಿ ಆರೋಪಿ ಪತ್ತೆಗಾಗಿ ಶೋಧ ನಡೆಸಿದ್ದರು.

ನವೆಂಬರ್ 7ರಂದು ಮಂಗಳವಾರ ಬೆಳಗಿನ ಜಾವ ಸುಮಾರು 4 ಗಂಟೆ ಸಮಯದಲ್ಲಿ ತಾಲೂಕಿನ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ದೇವಸ್ಥಾನದ ಬಳಿ ವಸೀಮ್ ಬೈಕ್ ನೊಂದಿಗೆ ನಿಂತಿದ್ದ. ಗಸ್ತು ಪೊಲೀಸರು ಅದೇ ಮಾರ್ಗವಾಗಿ ತೆರಳುತ್ತಿದ್ದಾಗ ಬೈಕ್ ನೊಂದಿಗೆ ಪರಾರಿಯಾಗಲು ಯತ್ನಿಸಿದ್ದ. ಆಗ ಆತನನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದರು.
ವಿಚಾರಣೆಗೆ ಒಳಪಡಿಸಿದಾಗ ನಾಲ್ಕು ದೇವಸ್ಥಾನದಿಂದ 70 ಸಾವಿರ ರುಪಾಯಿಗೂ ಹೆಚ್ಚು ಹುಂಡಿ ಹಣವನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮೋಜು, ಮಸ್ತಿಗಾಗಿ ಹಣ ಖರ್ಚು ಮಾಡಲು ದೇಗುಲಗಳ ಹುಂಡಿಯನ್ನು ಈತ ಕಳವು ಮಾಡುತ್ತಿದ್ದ. ಕಳ್ಳತನಕ್ಕೆ ಬಳಸುತ್ತಿದ್ದ ಪಲ್ಸರ್ ಬೈಕ್, ಬೀಗ ಒಡೆಯಲು ಬಳಸುತ್ತಿದ್ದ ಕಬ್ಬಿಣದ ರಾಡ್ ಹಾಗೂ 2 ಸಾವಿರ ರುಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications