ಉಕ್ರೇನ್ನಿಂದ ಬೆಕ್ಕನ್ನೂ ತಂದ ಮೈಸೂರಿನ ವಿದ್ಯಾರ್ಥಿನಿ!
ಮೈಸೂರು, ಮಾರ್ಚ್ 06; ಯುದ್ಧಪೀಡಿತ ಉಕ್ರೇನ್ ದೇಶ ಅಕ್ಷರಶಃ ರಷ್ಯಾದ ದಾಳಿಯಿಂದ ನಲುಗಿ ಹೋಗಿದೆ. ಎಲ್ಲಿ ನೋಡಿದರೂ ಮಿಶೆಲ್, ಬಾಂಬ್, ಗುಂಡಿನದ್ದೇ ಸದ್ದು. ಮನುಷ್ಯರಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳ ಆರ್ತನಾದವೂ ಕೇಳಿ ಬರುತ್ತಿದೆ.
ಖುಷಿಯ ವಿಚಾರವೆಂದರೆ ಉಕ್ರೇನ್ನಿಂದ ವಿದ್ಯಾರ್ಥಿನಿಯೊಬ್ಬರು ತಮ್ಮ ಜೊತೆ ತಮ್ಮ ಪ್ರೀತಿಯ ಬೆಕ್ಕನ್ನೂ ಭಾರತಕ್ಕೆ ಕರೆದಿದ್ದಾರೆ. ಮೈಸೂರು ಮೂಲದ ವಿದ್ಯಾರ್ಥಿನಿ ಶರಣ್ಯಾ ಉಕ್ರೇನ್ನಿಂದ ಬರುವಾಗ ತನ್ನ ಮುದ್ದಿನ ಬೆಕ್ಕು 'ಕ್ರೆಸ್ಟಲ್' ಅನ್ನೂ ಕರೆತಂದಿದ್ದಾರೆ.
ರಷ್ಯಾದ ದಾಳಿಯಿಂದ ಕೇವಲ ಪ್ರಾಣಿಪಕ್ಷಿಗಳು ಸಂಕಟ ಅನುಭವಿಸುತ್ತಿವೆ. ಬಾಂಬಿನ ಸದ್ದಿಗೆ ಪಕ್ಷಿಗಳು, ನಾಯಿ, ಕುದುರೆ, ಹಸುಗಳೆಲ್ಲಾ ದಿಕ್ಕೆಟ್ಟು ಓಡುತ್ತಿವೆ. ಇದರಿಂದ ಮನದಲ್ಲೇ ಮಮ್ಮುಲ ಮರುಗಿದ ಮೈಸೂರಿನ ಶರಣ್ಯ ತಮ್ಮ ಜೊತೆ ಬೆಕ್ಕನ್ನೂ ಕರೆತಂದು ಮಾನವೀಯತೆ ಮೆರೆದಿದ್ದಾರೆ.

ಇತ್ತೀಚಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬೇರೆ ರಾಜ್ಯದ ವಿದ್ಯಾರ್ಥಿಯೊಬ್ಬರು ನಾಯಿಯೊಂದನ್ನು ಕರೆತಂದಿದ್ದು ಸುದ್ದಿ ಆಗಿತ್ತು. ಇದೀಗ ಬೆಕ್ಕು ಕರೆ ತಂದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಉಕ್ರೇನ್ನ ಪ್ರಸಿದ್ಧ ತಳಿಯ ಈ ಬೆಕ್ಕನ್ನು ಶರಣ್ಯ ಅವರು 2500 ರೂ. ಗೆ ಖರೀದಿಸಿ ಪ್ರೀತಿಯಿಂದ ಸಾಕುತ್ತಿದ್ದರು. ಶರಣ್ಯ ಎಲ್ಲೇ ಹೋದರೂ ಹಿಂದೆ ಮುಂದೆ ಬರುತ್ತಿತ್ತು. ಜೊತೆಗೆ ಶರಣ್ಯ ಬೇರೆ ಪ್ರಾಣಿಗಳ ಜೊತೆ ಹೋದರೆ ಮುನಿಸಿಕೊಳ್ಳುತ್ತಿತ್ತು. ದಿನದ 18 ಗಂಟೆಗಳ ಕಾಲ ಮಲಗುವ ಈ ಬೆಕ್ಕು ಪೊಸೆಸಿವ್ ನ್ಯಾಚರ್ ಹೊಂದಿದೆ.
"ಯುದ್ಧದಿಂದ ನಲುಗಿರುವ ಆ ದೇಶದಲ್ಲಿ ಇದನ್ನು ಒಂದನ್ನೇ ಬಿಟ್ಟುಬರಲು ನನ್ನ ಮನಸ್ಸು ಕೇಳಲಿಲ್ಲ. ಬಾಂಬ್, ಶೆಲ್ ದಾಳಿಗೆ ಒಳಗಾಗುವ ಅಪಾಯವೂ ಇತ್ತು. ಹಾಗಾಗಿ ನನ್ನ ಜತೆಗೆ ಇದನ್ನು ಕರೆದುಕೊಂಡು ಬಂದೆ. ಬೇರೆ ಸಮಯವಾಗಿದ್ದರೆ ವೀಸಾ ಸಮಸ್ಯೆ ಆಗುತ್ತಿತ್ತು. ಆದರೆ ಯುದ್ಧದ ಸಮಯ ಆದ ಕಾರಣದಿಂದ ಬೆಕ್ಕನ್ನು ಕರೆತರಲು ಸಮಸ್ಯೆ ಆಗಲಿಲ್ಲ" ಎಂದು ಶರಣ್ಯಾ ದೆಹಲಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
448 ವಿದ್ಯಾರ್ಥಿಗಳ ರಕ್ಷಣೆ; ಆಪರೇಷನ್ ಗಂಗಾ ಮೂಲಕ ಇದುವರೆಗೂ ಕರ್ನಾಟಕದ 448 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಸೋಮವಾರ 12 ವಿಮಾನಗಳು ಆಗಮಿಸಲಿವೆ. 236 ಕರ್ನಾಟಕದ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಇನ್ನೂ ಸಿಲುಕಿದ್ದಾರೆ.












Click it and Unblock the Notifications