MUDA Scam: ಮೈಸೂರು ಲೋಕಾಯುಕ್ತ ಎಸ್ಪಿಯನ್ನೇ ಬಚ್ಚಿಟ್ರಾ ಸಿಎಂ ಸಿದ್ದರಾಮಯ್ಯ ಬೆಂಬಲಿಗರು?
ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಕೊಟ್ಟಿದೆ. ಮೈಸೂರು ಲೋಕಾಯುಕ್ತ ಎಸ್ಪಿಗೆ ಆದೇಶ ಕೊಟ್ಟಿದ್ದು, ಡಿಸೆಂಬರ್ 24ರ ಒಳಗೆ ತನಿಖೆ ಪೂರ್ಣಗೊಳಿಸಿ ವರದಿ ಕೊಡುವಂತೆ ಕೇಳಿದೆ. ಆದರೆ ಮೈಸೂರು ಲೋಕಾಯುಕ್ತ ಎಸ್ಪಿ ಕಾಣೆಯಾಗಿದ್ದಾರೆ ಎಂದು ಸಿಎಂ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದು, ದೂರು ನೀಡುವುದಾಗಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ಎಸ್ಪಿ ಉದೇಶ್ ಅವರು ನನ್ನ ಕರೆ ಸ್ವೀಕರಿಸುತ್ತಿಲ್ಲ. ಕಚೇರಿ ಸಿಬ್ಬಂದಿಗೂ ಅವರು ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ. ಇವೆಲ್ಲವನ್ನು ಗಮನಿಸಿದರೆ ಅವರನ್ನು ಸಿದ್ದರಾಮಯ್ಯ ಕಡೆಯವರು ಬಚ್ಚಿಟ್ಟಿದ್ದಾರೆ ಎಂಬ ಅನುಮಾನ ಇದೆ ಎಂದರು.

ಪೊಲೀಸ್ ಠಾಣೆಯಲ್ಲಿ ದೂರು
ಲೋಕಾಯುಕ್ತ ಎಸ್ಪಿ ಉದೇಶ್ ಅವರ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿಮಹಿ ಕೃಷ್ಣ ಅವರು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಧ್ಯಾಹ್ನ ಮೂರು ಗಂಟೆಯವರೆಗೆ ಲೋಕಾಯುಕ್ತ ಕಚೇರಿಯಲ್ಲಿ ಕಾದೆ. ಮೂರು ಗಂಟೆಯವರೆಗೂ ನನಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರು.
ಲೋಕಾಯುಕ್ತ ಎಡಿಜಿಪಿ ಐಜಿ ಅವರಿಗೂ ಕಡೆ ಮಾಡಿದ್ದೆ, ಅವರು ಕರೆ ಸ್ವೀಕರಿಸಿ ಸಭೆಯಲ್ಲಿದ್ದೇನೆ ಎಂದು ಹೇಳಿದರು. ಲೋಕಾಯುಕ್ತ ಎಸ್ಪಿ ಸಭೆಯಿಲ್ಲ ಇಲ್ಲ ಎಂದು ಅವರೇ ಹೇಳಿದರು. ಈ ಕಾರಣಕ್ಕೆ ಅವರು ನಾಪತ್ತೆಯಾಗಿರುವ ಬಗ್ಗೆ ಅನುಮಾನ ಹೆಚ್ಚಾಗಿದೆ. ಮೈಸೂರು ಲೋಕಾಯುಕ್ತ ಎಸ್ಪಿ ಬಳಕೆ ಮಾಡುತ್ತಿರುವುದು ಸಾರ್ವಜನಿಕ ದೂರವಾಣಿ, ಸಾರ್ವಜನಿಕರ ಕರೆಯನ್ನೇ ಸ್ವೀಕರಿಸದ ಮೇಲೆ ಅವರಿಗೆ ಮೊಬೈಲ್ ಯಾಕೆ ಎಂದು ಪ್ರಶ್ನೆ ಮಾಡಿದರು.
ಡಿವೈಎಸ್ಪಿ ನನ್ನ ಮುಂದೆ ಎಸ್ಪಿಗೆ ಕರೆ ಮಾಡಿ ಹೇಳಿದಾಗ ಬರುವಂತೆ ಸೂಚಿಸಿದರು. ಅವರು ಎಸ್ಪಿ ಜೊತೆ ಮಾತನಾಡಿದರು ಎಂಬುದಕ್ಕೆ ಏನು ಗ್ಯಾರೆಂಟಿ. ಹೀಗಾಗಿ ನಾನು ದೂರು ದಾಖಲಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಟಿವಿ9 ವಾಹಿನಿ ಜೊತೆ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಂಡರೆ ಅಧಿಕಾರಿಗಳು ಭಯ ಪಡುತ್ತಾರೆ. ಇದರಿಂದಲೇ ಎಸ್ಪಿ ಉದೇಶ್ ನಾಪತ್ತೆಯಾಗಿರಬಹುದು ಇಲ್ಲ ಸಿದ್ದರಾಮಯ್ಯನವರ ಕಡೆಯವರೇ ಅಪಹರಣ ಮಾಡಿ ಗೃಹಬಂಧನದಲ್ಲಿ ಇಟ್ಟಿರಬಹುದು ಎಂದು ಆರೋಪಿಸಿದ್ದಾರೆ.












Click it and Unblock the Notifications