ಬೆಟ್ಟದಪುರ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ತಪ್ಪದೇ ಬನ್ನಿ
ಪಿರಿಯಾಪಟ್ಟಣ, ಫೆ. 3: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಫೆ. 4 ಹಾಗೂ 5ರಂದು ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ. ಜಾತ್ರೆಗಾಗಿ ಮಲ್ಲಿಕಾರ್ಜುನ ಸ್ವಾಮಿ ದೇಗುಲವನ್ನು ಸಿಂಗರಿಸಲಾಗಿದೆ.
ಜಾತ್ರೆಯ ಪ್ರಮುಖ ಆಕರ್ಷಣೆ ಬ್ರಹ್ಮರಥೋತ್ಸವ. ಆದರೆ, ಬರದ ಹಿನ್ನೆಲೆಯಲ್ಲಿ ರಾಸುಗಳ ಜಾತ್ರೆ ರದ್ದುಗೊಳಿಸಲಾಗಿದೆ. ಫೆ. 4ರಂದು ಗಿರಿಜಾ ಕಲ್ಯಾಣ ಹಾಗೂ 5ರಂದು ಬ್ರಹ್ಮರಥೋತ್ಸವ ನಡೆಯಲಿವೆ. ಜಾತ್ರೆಯ ವೆಚ್ಚಕ್ಕಾಗಿ 1.25 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ. [ಸುತ್ತೂರು ಕ್ಷೇತ್ರದ ಮಹಿಮೆ]
ಈ ಬಾರಿಯೂ ಹಳೆ ರಥ : ನೂತನ ರಥ ನಿರ್ಮಿಸಲು ಸುಮಾರು 75 ಲಕ್ಷ ರು. ವೆಚ್ಚದ ಅಂದಾಜು ತಯಾರಿಸಲಾಗಿದೆ. ಆದರೆ, ಈ ವರ್ಷದ ಉತ್ಸವಕ್ಕೆ ಹಳೆಯ ರಥವನ್ನೇ ಬಳಸಲಾಗುವುದು.

ಪ್ರಮುಖ ಆಕರ್ಷಣೆಗಳು : ಮಲ್ಲಿಕಾರ್ಜುನ ದೇಗುಲದ ವಿಶೇಷತೆ ಎಂದರೆ 3108 ಮೆಟ್ಟಿಲು. ಭಕ್ತಿಯಲ್ಲಿ ಮೈಮರೆಯು ಭಕ್ತರು ಈ ಮೆಟ್ಟಿಲುಗಳನ್ನು ಏರಿ ಸಿಡಿಲು ಮಲ್ಲಿಕಾರ್ಜುನ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿರುವ ವಿಜಯನಗರ ಕಾಲದ ಬೆಟ್ಟದ ಮಹಾದ್ವಾರವನ್ನು ನವೀಕರಿಸಲಾಗಿದೆ.
ಆರೋಗ್ಯದತ್ತ ಕಾಳಜಿ : ಮಲ್ಲಿಕಾರ್ಜುನ ಜಾತ್ರೆ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಭಕ್ತರ ಆರೋಗ್ಯ ಕಾಪಾಡುವ ಕುರಿತು ನಿಗಾ ವಹಿಸಲಿದೆ. ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.












Click it and Unblock the Notifications