ಯುವ ಸಮೂಹದ ನಿರೀಕ್ಷೆ ಹುಸಿ ಮಾಡಿದ ಬಜೆಟ್: ಸಿದ್ದರಾಮಯ್ಯ
ಮೈಸೂರು, ಫೆಬ್ರವರಿ 01: ಕೇಂದ್ರ ಸರ್ಕಾರದ ಬಜೆಟ್ ಟಿಂಕರಿಂಗ್ ಹಾಗೂ ನಿರಾಶಾದಾಯಕ ಬಜೆಟ್ ಆಗಿದ್ದು, ರೈತರು, ಯುವಕರು ಸೇರಿದಂತೆ ಎಲ್ಲ ವಲಯದ ನಿರೀಕ್ಷೆಗಳನ್ನು ಹುಸಿಯಾಗಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2 ನೇ ಅವಧಿಯ ಮೊದಲ ಬಜೆಟ್ ನ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಈ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದ್ದು, ದೇಶದ ಆರ್ಥಿಕ ಪ್ರಗತಿಗೆ ಅನುಕೂಲ ಕಲ್ಪಿಸುವ ಯಾವುದೇ ಯೋಜನೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ನೀಡಲಾಗಿಲ್ಲ ಎಂದರು.
ಕಳೆದ ಬಜೆಟ್ ನಲ್ಲಿದ್ದ ಯೋಜನೆಗಳನ್ನೇ ಮತ್ತೆ ಹೇಳಿದ್ದು, ಉದ್ಯೋಗ ಸೃಷ್ಠಿ, ಆರ್ಥಿಕ ಪುನಶ್ಚೇತನಗೊಳಿಸುವ ಯಾವುದೇ ಯೋಜನೆಗಳು ಈ ಬಜೆಟ್ ನಲ್ಲಿ ಇಲ್ಲ ಎಂದು ಶನಿವಾರ ಮೈಸೂರಿನ ಶಾರದಾದೇವಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳ ಹೆಸರುಗಳು ಆಕರ್ಷಕವಾಗಿವೆ. ಇದರ ಹೊರತು ರೈತರು, ಯುವಕರು, ಉದ್ಯಮಿಗಳು ಸೇರಿದಂತೆ ಯಾರಿಗೂ ಆಶಾದಾಯಕವಾಗಿಲ್ಲ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಈಗಾಗಲೇ ಆರ್ಥಿಕ ಹಿಂಜರಿತ ಶುರುವಾಗಿದ್ದು, ಉತ್ಪಾದನೆ, ಕೃಷಿ ಸೇರಿದಂತೆ ಯಾವುದೇ ವಲಯದಲ್ಲೂ ಪ್ರಗತಿ ಕಾಣುತ್ತಿಲ್ಲ. ದೇಶದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನರೇಂದ್ರ ಮೋದಿ ಹೇಳಿದ್ದರೂ, ಉದ್ಯೋಗ ಸೃಷ್ಟಿಯಲ್ಲಿ ಇಳಿಕೆಯಾಗುತ್ತಿದ್ದು, ಹೀಗಾಗಿ ಪ್ರಸಕ್ತ ಸಾಲಿನ ಬಜೆಟ್ ಕೂಡ ಉದ್ಯೋಗ ಬಯಸುವವರಿಗೆ ನಿರಾಸೆ ಮೂಡಿಸಿದೆ ಎಂದರು.
ದೇಶದಲ್ಲಿ ಬಂಡವಾಳ ಹೂಡಿಕೆ ಆದರೆ ಮಾತ್ರ ಆರ್ಥಿಕ ಕ್ಷೇತ್ರ ಚೇತರಿಕೆ ಹಾಗೂ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಸಾಮಾನ್ಯ ಜನರಿಗೆ ಖರೀದಿಸುವ ಶಕ್ತಿ ಬಾರದಿದ್ದರೆ ಯಾವ ಕ್ಷೇತ್ರವೂ ಚೇತರಿಕೆ ಕಾಣುವುದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರ್ಥಿಕ ಪುನಶ್ಚೇತನಗೊಳಿಸುವ, ರಫ್ತು ಮತ್ತು ಆಮದು ಹೆಚ್ಚಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಬೇಕಿದೆ ಎಂದು ಸಲಹೆ ನೀಡಿದ ಅವರು, ಇದು ಸಾಧ್ಯವಾಗದಿದ್ದರೆ ಆರ್ಥಿಕ ಸುಧಾರಣೆ ಅಸಾಧ್ಯ ಎಂದು ಹೇಳಿದರು.
ನಾವು ತಾಳಿ ಮಾರೋದು ತೀರಾ ಕಷ್ಟ ಬಂದಾಗ. ಎಲ್ಲವನ್ನು ಬಿಟ್ಟು ಕೊನೆಯದಾಗಿ ತಾಳಿ ಕಳೆದುಕೊಡುತ್ತೇವೆ. ಹಾಗೆಯೇ ಕೇಂದ್ರ ಸರ್ಕಾರ ಕೊನೆಯದಾಗಿ ಎಲ್ಐಸಿ ಶೇರುಗಳನ್ನು ಸಹ ಮಾರಲು ಮುಂದಾಗಿದೆ. ಇದು ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಕ್ಕೆ ಬಂದಿರುವ ಪರಿಸ್ಥಿತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.












Click it and Unblock the Notifications