ಎಂಟಿಬಿ ನಾಗರಾಜ್ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಚ್ಚರಿಯ ಪ್ರತಿಕ್ರಿಯೆ
ಮೈಸೂರು,ಸೆ.01: ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂ.ಟಿ. ಬಿ ನಾಗರಾಜ್ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಪ್ರತಿಕ್ರಿಯಿಸಿದ್ದಾರೆ.
69 ವರ್ಷದ ಎಂಬಿಟಿ ನಾಗರಾಜ್ ವಿಶ್ವದ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ 1 ಕೋಟಿ ರು ಚೆಕ್ ನೀಡಿ ನೆರೆ ಪರಿಹಾರಕ್ಕಾಗಿ ಬಳಸುವಂತೆ ಇತ್ತೀಚೆಗೆ ಸೂಚಿಸಿದ್ದು ಸುದ್ದಿಯಾಗಿತ್ತು.
ಕುರುಬ ಸಮುದಾಯಕ್ಕೆ ಸೇರಿದ ಎಂಟಿಬಿ ನಾಗರಾಜ್ ಮೂರು ಬಾರಿ ಶಾಸಕರಾಗಿ ಹೊಸಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಅವರು ಈಗ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ನನ್ನನ್ನು ಕೆಣಕಿದರೆ ಹುತ್ತದಲ್ಲಿರುವ ನಾಗರಹಾವನ್ನು ಕೆಣಕಿದಂತೆ, ಎಂಟಿಬಿ
"ನನ್ನ ಎದೆ ಬಗೆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇರುತ್ತಾರೆ" ಎಂದು ಈ ಹಿಂದೆ ಎಂಟಿಬಿ ನಾಗರಾಜ್ ನೀಡಿದ್ದ ಹೇಳಿಕೆ ಭಾರಿ ಚರ್ಚೆಗೀಡಾಗಿತ್ತು, ನಂತರ ಅತೃಪ್ತ ಶಾಸಕರ ಜೊತೆಗೂಡಿ ಮುಂಬೈ ಸೇರಿದ್ದ ನಾಗರಾಜ್ ಅವರು ಕಾಂಗ್ರೆಸ್ ನಿಂದಲೂ ಉಚ್ಚಾಟನೆಗೊಂಡರು. ಎದೆ ಬಗೆದು ನೋಡುವ ಈ ಹೇಳಿಕೆಗೆ ಸಿದ್ದರಾಮಯ್ಯ ಅವರು ಈ ಹಿಂದೆಯೇ ಪ್ರತಿಕ್ರಿಯಿಸಿದ್ದರು. ಆದರೆ, ನಂತರ ನಾಗರಾಜ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ನಾಗರಾಜ್ ಬಗ್ಗೆ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಆಪ್ತರಾಗಿದ್ದ ಎಂಟಿಬಿ ನಾಗರಾಜ್
2018ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ 1,115 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದರು. 9ನೇ ತರಗತಿ ವ್ಯಾಸಂಗ ಮಾಡಿರುವ ಎಂಟಿಬಿ ನಾಗರಾಜ್ ರಾಜ್ಯದ ಶ್ರೀಮಂತ ಶಾಸಕರಲ್ಲಿ ಒಬ್ಬರು. "ನನ್ನ ಎದೆ ಬಗೆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇರುತ್ತಾರೆ" ಎಂದು ಹೇಳಿದ್ದ ಎಂಟಿಬಿ ನಾಗರಾಜ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ನಂತರ ಮುಂಬೈ ಸೇರಿ, ಕಾಂಗ್ರೆಸ್ -ಜೆಡಿಎಸ್ ಸರ್ಕಾರ ಪತನಕ್ಕೆ ಕಾರಣರಾದರು. ಮುಂಬೈ ಗಾಳಿ ಸೋಂಕಿದ ಬಳಿಕ, ಸಿದ್ದರಾಮಯ್ಯ ವಿರುದ್ಧ ಹೇಳಿಕೆಗಳನ್ನು ನೀಡತೊಡಗಿದರು.
ಎಂಟಿಬಿ ನಾಗರಾಜ್ ಸ್ವತಂತ್ರ ಸ್ಪರ್ಧೆ ಹೇಳಿಕೆ: ಇಕ್ಕಟ್ಟಿನಲ್ಲಿ ಬಿಜೆಪಿ
ನಾನು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಸಿದ್ದರಾಮಯ್ಯ ವಾಸ
"ನಾನು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಸಿದ್ದರಾಮಯ್ಯ ವಾಸ ಮಾಡ್ತಿದ್ದಾರೆ" ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ "ಎಂಟಿಬಿ ನಾಗರಾಜ್ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಒಂದು ಸಾರಿ ನಾನು ಹೃದಯದಲ್ಲಿ ಇದ್ದೀನಿ ಅಂತಾನೆ. ಆ ಮೇಲೆ ನನ್ನನ್ನೇ ಟೀಕೆ ಮಾಡ್ತಾನೆ. ನನ್ನ ಜೊತೆಯಲ್ಲೇ ಇದ್ದು ನನಗೆ ದ್ರೋಹ ಮಾಡಿದ್ರು. ಅವರ ನಾಟಕಗಳಿಗೆ ಜನರೇ ಉತ್ತರ ಕೊಡ್ತಾರೆ" ಎಂದಿದ್ದಾರೆ.
ಸ್ವಾರ್ಥ ಮುಖ್ಯವಾದರೆ ಉಪಕಾರ ನೆನಪಿರಲ್ಲ
"ರಾಜಕೀಯದಲ್ಲಿ ಬಹಳ ಜನ ಹತ್ತಿರವಾಗಿರುತ್ತಾರೆ, ನಮ್ಮ ಬೆಂಬಲ ಪಡೆದು, ಗೆಲ್ಲುತ್ತಾರೆ, ನಂತರ ಗೆಲ್ಲಿಸಿದೋರಿಂದನೇ ದೂರ ಆಗುತ್ತಾರೆ. ಸ್ವಾರ್ಥ ಮುಖ್ಯವಾದರೆ ಉಪಕಾರ ಮಾಡಿದವರು ನೆನಪಿರಲ್ಲ, ನಾನು ಇಂಥವಕ್ಕೆಲ್ಲ ನಾನು ಪ್ರತಿಕ್ರಿಯಿಸಬೇಕಾಗಿಲ್ಲ, ನೀವು ಪ್ರಶ್ನೆ ಕೇಳಿದ್ದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. ನಂಬಿಕೆ ದ್ರೋಹದ ಬಗ್ಗೆ ನಾವು ಹೆಚ್ಚು ಮಾತನಾಡಲ್ಲ ಎಂದು ಸಿದ್ದರಾಮಯ್ಯ" ಹೇಳಿದರು.
ಉಪಚುನಾವಣೆ: ಅಚ್ಚರಿಯ ಘೋಷಣೆ ಮಾಡಿದ ಎಂಟಿಬಿ ನಾಗರಾಜು
ಎದೆ ಬಗೆದು ನೋಡೋಕೆ ಆಗುತ್ತದೆಯೇ? ಎಂದಿದ್ದ ಸಿದ್ದು
"ನನ್ನ ಎದೆ ಬಗೆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂಬ ನಾಗರಾಜ್ ಹೇಳೀಕೆಗೆ ಸಿದ್ದರಾಮಯ್ಯ ಅವರು ಸದನದಲ್ಲೇ ಉತ್ತರಿಸಿದ್ದರು. 'ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾರೆ ಅಂತ ಎಂ. ಟಿ. ಬಿ. ನಾಗರಾಜ್ ಹೇಳ್ತಿದ್ರು. ಅವ್ರೇ ರಾಜೀನಾಮೆ ಕೊಟ್ಟಿದ್ದಾರೆ, ಈಗ ನಾನು ಅವರ ಎದೆ ಬಗೆದು ನೋಡೋಕೆ ಆಗುತ್ತದೆಯೇ?' ಎಂದು ಪ್ರಶ್ನಿಸಿದ್ದರು. ರಾಜಕಾರಣ ಇರೋದು ಜನ ಸೇವೆ ಮಾಡಲು ಎಂಬುದನ್ನೇ ಕೆಲವರು ಮರೆತಿದ್ದಾರೆ. ಅಂಥವರಿಗೆ ಕಾಲವೇ ತಕ್ಕ ಉತ್ತರ ನೀಡಲಿದೆ, ಸಿದ್ದಾಂತವಿಲ್ಲದ ಜೊಳ್ಳುಗಳೆಲ್ಲ ಹಾರಿ ಹೋಗಿದ್ದು, ನಮ್ಮ ಪಕ್ಷ ಹಿಂದಿಗಿಂತ ಈಗ ಮತ್ತಷ್ಟು ಸದೃಢವಾಗಿದೆ ಎಂಬ ಖುಷಿಯಿದೆ' ಎಂದು ಅನರ್ಹ ಶಾಸಕರ ಬಗ್ಗೆ ಹೇಳಿದ್ದರು.
ದೊಡ್ಡ ದೊಡ್ಡ ನಾಯಕರ ಕಥೆ ತೆಗೆದರೆ ಅಷ್ಟೇ
''ಕೆಲವು ದೊಡ್ಡ ದೊಡ್ಡ ನಾಯಕರು, 30 ಕೋಟಿ ರೂ. ತೆಗೆದುಕೊಂಡು ಬಿಜೆಪಿಗೆ ಹೋದ, ಮಗನನ್ನು ಉದ್ಧಾರ ಮಾಡಲು ಹೋದ ಎಂದು ನನ್ನ ವಿರುದ್ಧ ಆರೋಪಿಸುತ್ತಾರೆ. ಆದರೆ ನಾನೇನಾದರೂ ಆ ದೊಡ್ಡ ನಾಯಕರ ವಿಷಯ ತೆಗೆದರೆ ಅವರ ಕಥೆ ಮುಗಿಯುತ್ತದೆ. ಯಾವ ಪುರುಷಾರ್ಥಕ್ಕೆ ನಾನು ಸುಳ್ಳು ಹೇಳಲಿ? ರಾಜಕೀಯದಿಂದ ನನಗೆ ಬೇಸರ ಆಗಿದೆ. ಕಳಪೆ, ಕಲ್ಮಶ, ಸುಳ್ಳು ರಾಜಕೀಯದಿಂದ ಸಾಕಷ್ಟು ಬೇಸತ್ತಿದ್ದೇನೆ'' ಎಂದು ಹೇಳಿ ನಾಗರಾಜ್ ಅವರು ನಾಗಿನ್ ಡ್ಯಾನ್ಸ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.